400 ವರ್ಷದಿಂದ ಜೊತೆಗೇ ಬಾಳುತ್ತಿರುವ ಅವಿಭಕ್ತ ಕುಟುಂಬ

By Kannadaprabha NewsFirst Published Oct 7, 2019, 2:04 PM IST
Highlights

ತುಮಕೂರಿನಲ್ಲೊಂದು 400 ವರ್ಷ ಹಳೆಯ ಕುಟುಂಬ ವಾಸವಿದೆ. ಅದೂ ಅವಿಭಕ್ತ ಕಟುಂನ. ಸದಸ್ಯರ ಸಂಖ್ಯೆ ಬರೋಬ್ಬರಿ 150. ಇವರೆಲ್ಲರಿಗೂ ಒಂದೇ ಸೂರು, ಒಂದೇ ಅಡುಗೆ. ಇವರ ಕುಟುಂಬದ ಕುರಿತು ಇನ್ನಷ್ಟು ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ತಿಳಿಯಲು ಈ ಸುದ್ದಿ ಓದಿ.

ತುಮಕೂರು(ಅ.07): ಕುಣಿಗಲ್ ಭಾರತದ ಪರಂಪರೆಯಲ್ಲಿ ಅವಿಭಕ್ತ ಕುಟುಂಬಗಳು ಮರೆಯಾಗುತ್ತಿದೆ. ಸಣ್ಣ ಸಣ್ಣ ಕುಟುಂಬಗಳ ಸಂಖ್ಯೆ ಹೆಚ್ಚಾಗುತ್ತಿವೆ. ಆದರೆ ಇದಕ್ಕೆ ವಿಭಿನ್ನವಾಗಿ ಕುಣಿಗಲ್ ತಾಲೂಕಿನ ಕೊತ್ತಗೆರೆ ಹೋಬಳಿ ಸುಂದರ ಕುಪ್ಪೆ(ಸೂಳೆ ಕುಪ್ಪೆ ) ಗ್ರಾಮದಲ್ಲಿ ಕಳೆದ 7 ತಲೆಮಾರಿನ ಗುಂಡೇಗೌಡ ಎಂಬುವರ ಕುಟುಂಬ 400 ವರುಷಗಳಿಂದ ಈ ತಲೆಮಾರಿನವರೆಗೂ ಅವಿಭಕ್ತ ಕುಟುಂಬವಾಗಿ 150 ಮಂದಿ ಒಟ್ಟಾಗಿರುವುದು ವಿಶೇಷ.

ಆಧುನಿಕ ಯುಗದ ಭರಾಟೆಯಲ್ಲಿ ಏಕಾಂಗಿ ಜೀವನ ಬಯಸುವ ಯುವ ಜನತೆ ಈ ಕುಟುಂಬದ ಜೊತೆ ಹೊಂದಾಣಿಕೆ ಮಾಡಿಕೊಂಡು ಸಂತೋಷವಾಗಿ ಜೀವನ ಸಾಗಿಸುತ್ತಿರುವುದು ವಿಶೇಷ. ನೂರ ಐವತ್ತಕ್ಕಿಂತ ಹೆಚ್ಚು ಮಂದಿ ವಾಸಿಸುತ್ತಿದ್ದರು ಸಹ ಯಾವುದೇ ತಂಟೆ ತಕರಾರು ಸಮಸ್ಯೆಗಳು ಬಾರದೆ ಪ್ರತಿಯೊಬ್ಬರೂ ಅನ್ಯೋನ್ಯವಾಗಿ ಬದುಕು ಸಾಗಿಸುತ್ತಿದ್ದಾರೆ.

ಮತ್ತೆ ಉಡಾಫೆ ಮಾತು: ಮಾಧುಸ್ವಾಮಿ ಮಂತ್ರಿ ಆದ್ಮೇಲೆ ಮಾತಿನ ವರಸೆ ಬದಲಾಯ್ತು ಅಲ್ವೇ..?

7 ತಲೆಮಾರುಗಳ ಹಿಂದೆ ಈ ಗ್ರಾಮದ ನಿವಾಸಿ ಗುಂಡೇಗೌಡ ಎಂಬುವರಿಗೆ ಮಕ್ಕಳು ಇಲ್ಲದ ಸಂದರ್ಭದಲ್ಲಿ ವೀರಣ್ಣ ಗೌಡ ಎಂಬ ಬಾಲಕನನ್ನು ದತ್ತು ಪಡೆದು ಸಾಕಲು ಪ್ರಾರಂಭಿಸಿದರು. ಆತನಿಗೆ ಜನಿಸಿದ ವೀರಭದ್ರಯ್ಯ ಮುದ್ದಪ್ಪ ಬೈರಮ್ಮ ಚನ್ನವೀರಪ್ಪ ಹಾಗೂ ಶಿವಣ್ಣ ಎಂಬುವರು ಎರಡನೇ ತಲೆಮಾರಿನ ವ್ಯಕ್ತಿಗಳಾಗಿದ್ದಾರೆ.

ತುಮಕೂರು: ದೇವೇಗೌಡರಿಂದ ಅಂತರ ಕಾಯ್ದುಕೊಂಡ ಮಾಜಿ ಸಚಿವ

ನಂತರ ಇವರ ಮಕ್ಕಳು ಮೊಮ್ಮಕ್ಕಳು ಸೇರಿದಂತೆ ಪ್ರತಿ ಕುಟುಂಬದ ಸದಸ್ಯರು ಈ ಕುಟುಂಬದ ಒಡಲಲ್ಲಿ ಜನಿಸಿ ಇಲ್ಲಿ ಎಲ್ಲರ ಜೊತೆಯಲ್ಲಿ ಕಷ್ಟ ಸುಖಗಳನ್ನು ಈ ಮನೆಯಲ್ಲಿ ಕಳೆಯುತ್ತಾ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ.

ಹಿರಿಯರ ಮಾರ್ಗದರ್ಶನ:

ಈ ಒಟ್ಟು ಕುಟುಂಬದಲ್ಲಿ ಯಾವುದೇ ಸಂದರ್ಭದಲ್ಲೂ ಸರಿಯಾದ ತೀರ್ಮಾನ ತೆಗೆದುಕೊಳ್ಳುವುದು ಈ ಕುಟುಂಬದ ಹಿರಿಯ ವ್ಯಕ್ತಿಗಳು ಅದನ್ನು ಕಿರಿಯರು ಪಾಲಿಸುವುದು ತುಂಬಾ ವಿಶೇಷ. ಶಿಕ್ಷಣ ಮದುವೆ ಸೇರಿದಂತೆ ಹಲವಾರು ಶುಭ ಸಂದರ್ಭದಲ್ಲೂ ಕೂಡ ಹಿರಿಯರು ನೀಡುವ ಮಾರ್ಗ ಸೂಚಿಯನ್ನು ಕಿರಿಯರು ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ.

ಠಾಣೆ ಮೆಟ್ಟಿಲೇರದ ಕುಟುಂಬ:

ಈ ಕುಟುಂಬದಲ್ಲಿ ಉಂಟಾಗುವ ಸಣ್ಣಪುಟ್ಟ ಜಗಳಗಳನ್ನು ಇಲ್ಲಿಯ ಕುಟುಂಬದ ಮುಖ್ಯಸ್ಥರು ತಮ್ಮ ಮನೆಯಲ್ಲಿಯೇ ಕುಳಿತು ಬಗೆಹರಿಸಿಕೊಳ್ಳುತ್ತಾರೆ. ಇದುವರೆವಿಗೂ ಪೊಲೀಸ್ ಠಾಣೆಗೆ ಯಾವುದೇ ಪ್ರಕರಣಗಳು ದಾಖಲಾಗಿ ನ್ಯಾಯಾಲಯ ತಲುಪಿಲ್ಲ.

ಹಿರಿಯರಿಗೆ ಗೌರವ:

ಈ ಕುಟುಂಬದಲ್ಲಿ ಹಲವಾರು ಉನ್ನತ ಅಧಿಕಾರಿಗಳು ಎಂಜಿನಿಯರ್, ಡಾಕ್ಟರ್ ಸೇರಿದಂತೆ ವಿವಿಧ ಪದವೀಧರರು ಕೂಡ ಇದ್ದಾರೆ. ಅವರ ಮಕ್ಕಳ ಶಿಕ್ಷಣ ಮತ್ತು ಉದ್ಯೋಗದ ತೀರ್ಮಾ ನಗಳನ್ನು ಈ ಕುಟುಂಬದ ಹಿರಿಯ ಜೀವವೇ ತೆಗೆದು ಕೊಳ್ಳುತ್ತದೆ. ಉದ್ಯೋಗ ಮತ್ತು ಶಿಕ್ಷಣದ ನಿಮಿತ್ತ ಪಕ್ಕದ ಬೆಂಗಳೂರು, ತುಮಕೂರು, ಚೆನ್ನೈ ಸೇರಿದಂತೆ ವಿದೇಶದಲ್ಲಿ ಜೀವನ ನಡೆಸುತ್ತಿದ್ದರೂ ಮದುವೆ, ಹಬ್ಬ, ಸೇರಿದಂತೆ ಶುಭ ಸಮಾರಂಭದಲ್ಲಿ ಎಲ್ಲರೂ ಕೂಡ ಈ ಮನೆಗೆ ಬಂದು ಸೇರಿ ಎಲ್ಲರೊಟ್ಟಿಗೆ ಸಂತೋಷವನ್ನು ಹಂಚಿಕೊಂಡು ಸಂಭ್ರಮಿಸುತ್ತಾರೆ.

ಪಾಲಾಗದ ಭೂಮಿ:

ಕುಟುಂಬದ ಆಸ್ತಿಯನ್ನು ಇದು ವರೆವಿಗೂ ಪಾಲು ಮಾಡಿಲ್ಲ. ಅವರು ಸ್ವಂತ ಹಣದಲ್ಲಿ ಬೇರೆ ಬೇರೆ ಸ್ಥಳದಲ್ಲಿ ಮನೆ ಹಾಗೂ ಆಸ್ತಿಗಳನ್ನು ಸಂಪಾದನೆ ಮಾಡಿ ತಮ್ಮ ಜೀವನವನ್ನು ನಿರ್ವಹಿಸುತ್ತಿದ್ದು, ಈ ಆಸ್ತಿಯಲ್ಲಿ ಯಾರೂ ಕೂಡ ಪಾಲು ಬೇಕು ಎಂದು ಕೇಳಿಲ್ಲ. ಇಲ್ಲಿಗೆ ಬಂದಾಗ ಅವರು ಕೂಡ ಕೃಷಿ ಚಟುವಟಿಕೆಯಲ್ಲಿ ಭಾಗವಹಿಸಿ ಗ್ರಾಮದಲ್ಲಿ ಇರುವ ಕುಟುಂಬಕ್ಕೆ ಸಹಕಾರ ನೀಡುತ್ತಾರೆ.

ತುಮಕೂರು: ಫಲಿತಾಂಶದಿಂದ ಕುಂದಿಲ್ಲ ಎಂದ್ರು ದೇವೇ ಗೌಡ

ಗ್ರಾಮದಲ್ಲಿ ವಾಸವಿರುವ ರಾಜಶೇಖರ್ ಸುಂದರ ಕುಪ್ಪೆ ಮನೆಯನ್ನು ನಿರ್ವಹಣೆ ಮಾಡುತ್ತಾ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಈ ಮನೆಯಲ್ಲಿ ಯಾವುದೇ ಶುಭ ಕಾರ್ಯ ನಡೆದರೂ ದಿವಂಗತ ಜಯಣ್ಣ ಅವರ ಪತ್ನಿ ನಂಜಮ್ಮ ಅವರ ಹೆಸರಿನಲ್ಲಿ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಲಾಗುತ್ತಿದೆ. ಈ ಕುಟುಂಬ ಎಲ್ಲರನ್ನೂ ಕೂಡ ಸಮಾನತೆಯಿಂದ ತೆಗೆದುಕೊಂಡು ಮಾದರಿಯಾಗಿದೆ.  

-ಎನ್.ಎಸ್.ವಸಂತ್ ಕುಮಾರ್

click me!