
ನವದೆಹಲಿ(ಆ.09): ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ 7 ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ. ಟೋಕಿಯೋ ಒಲಿಂಪಿಕ್ಸ್ ಪದಕ ವಿಜೇತರಿಗೆ ಇಂದು ಕೇಂದ್ರ ಕ್ರೀಡಾ ಇಲಾಖೆ ಸನ್ಮಾನ ಮಾಡಿದೆ. ಕ್ರೀಡಾ ಸಚಿವ ಅನುರಾಗ್ ಠಾಕೂರ್, ಕೇಂದ್ರ ಸಚಿವ ಕಿರಣ್ ರಿಜಿಜು ಪದಕ ವಿಜೇತರಿಗೆ ಸನ್ಮಾನ ಮಾಡಿದರು.
ಒಲಿಂಪಿಕ್ಸ್ ಸ್ಪರ್ಧಿಗಳು ರಾಷ್ಟ್ರಗೀತೆ ಹಾಡೋ ಮೂಲಕ ಸಮಾರಂಭ ಆರಂಭಗೊಂಡಿತು. ದೆಹಲಿಯ ಅಶೋಕಾ ಹೋಟೆಲ್ನಲ್ಲಿ ಸಮಾರಂಭ ಆಯೋಜಿಸಲಾಗಿತ್ತು. ನೀರಜ್ ಚೋಪ್ರಾ, ರವಿ ಕುಮಾರ್ ದಹಿಯಾ, ಬಜರಂಗ ಪೂನಿಯಾ, ಭಾರತ ಹಾಕಿ ತಂಡ ಸೇರಿದಂತೆ ಪದಕ ವಿಜೇತರಿಗೆ ಸನ್ಮಾನ ಮಾಡಲಾಯಿತು.
ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊಟೆಲ್ ಅಶೋಕಾ ವರೆಗೂ ಕ್ರೀಡಾಪಟುಗಳನ್ನು ಅಭಿಮಾನಿಗಳು ಸುತ್ತುವರೆದಿದ್ದರು. ಅದರಲ್ಲೂ ನೀರಜ್ ಪೂನಿಯಾ, ರವಿ ಕುಮಾರ್ ಮೇಲೆ ಅಭಿಮಾನಿಗಳು ಮುಗಿಬಿದ್ದರು. ಭದ್ರತೆ ನಡುವೆ ಅಭಿಮಾನಿಗಳ ವರ್ತನೆ ಆತಂಕ ಮೂಡಿಸಿತ್ತು.
ಡಯಟ್ ಕಾರಣ ಇಷ್ಟದ ತಿನಿಸುಗಳನ್ನು ಬಿಟ್ಟಿದ್ದ ನೀರಜ್ ಚೋಪ್ರಾ ಜೊತೆ ಚುರ್ಮಾ ಹಾಗೂ ಗೋಲ್ಗಪ್ಪಾ ತಿನ್ನುವ ಭರವಸೆಯನ್ನು ಅನುರಾಗ್ ಠಾಕೂರ್ ನೀಡಿದರು. ಇದೇ ವೇಳೆ ಟೋಕಿಯೋ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡ ಭಾರತದ ಕ್ರೀಡಾಪಟುಗಳ ಸಾಧನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಲಾಯಿತು.