ಹರ್ಯಾಣ ಅಥ್ಲೀಟ್‌ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ರೆ 6 ಕೋಟಿ ರುಪಾಯಿ ಬಹುಮಾನ!

By Suvarna NewsFirst Published Jun 24, 2021, 1:45 PM IST
Highlights

* ಟೋಕಿಯೋ ಒಲಿಂಪಿಕ್ಸ್‌ಗೆ ಸ್ಪರ್ಧಿಸುತ್ತಿರುವ ಹರ್ಯಾಣದ ಅಥ್ಲೀಟ್‌ಗಳಿಗೆ ಸರ್ಕಾರ ಬಂಪರ್ ಆಫರ್

* ಚಿನ್ನ ಗೆಲ್ಲುವ ಹರ್ಯಾಣ ಅಥ್ಲೀಟ್‌ಗಳಿಗೆ 6 ಕೋಟಿ ಬಹುಮಾನ ಘೋಷಿಸಿದ ಹರ್ಯಾಣ ಸರ್ಕಾರ

* ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದರೆ 4 ಕೋಟಿ ರುಪಾಯಿ, ಕಂಚಿನ ಪದಕ ಗೆದ್ದರೆ 2.50 ಕೋಟಿ ರುಪಾಯಿ ಬಹುಮಾನ

ಚಂಡೀಗಢ(ಜೂ.24): ಟೋಕಿಯೋ ಒಲಿಂಪಿಕ್ಸ್‌ನಲ್ಲಿ ತನ್ನ ರಾಜ್ಯದ ಯಾವುದೇ ಕ್ರೀಡಾಪಟು ಚಿನ್ನದ ಪದಕ ಗೆದ್ದರೆ ಆ ಕ್ರೀಡಾಪಟುವಿಗೆ 6 ಕೋಟಿ ರುಪಾಯಿ ಬಹುಮಾನ ನೀಡುವುದಾಗಿ ಬುಧವಾರ ಹರ್ಯಾಣ ಸರ್ಕಾರ ಘೋಷಿಸಿದೆ. 

ಇದೇ ವೇಳೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದರೆ 4 ಕೋಟಿ ರುಪಾಯಿ, ಕಂಚಿನ ಪದಕ ಗೆದ್ದರೆ 2.50 ಕೋಟಿ ರುಪಾಯಿ ಬಹುಮಾನ ನೀಡುವುದಾಗಿ ಹರ್ಯಾಣದ ಕ್ರೀಡಾ ಸಚಿವ ಸಂದೀಪ್‌ ಸಿಂಗ್‌, ಕ್ರೀಡಾಪಟುಗಳ ಜತೆ ನಡೆಸಿದ ಸಂವಾದದ ವೇಳೆ ಘೋಷಿಸಿದರು. ಈ ವೇಳೆ ಹರಾರ‍ಯಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಸಹ ಇದ್ದರು. ಇದೇ ವೇಳೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಹರ್ಯಾಣದ 30 ಕ್ರೀಡಾಪಟುಗಳಿಗೆ ಅಭ್ಯಾಸಕ್ಕಾಗಿ ತಲಾ 5 ಲಕ್ಷ ರು. ನೀಡಿರುವುದಾಗಿಯೂ ಸಂದೀಪ್‌ ತಿಳಿಸಿದರು.

ಒಲಿಂಪಿಕ್ಸ್‌: ಪ್ರೇಕ್ಷಕರು ಆಟೋಗ್ರಾಫ್‌ ಕೇಳುವಂತಿಲ್ಲ!

ಟೋಕಿಯೋ: ಒಲಿಂಪಿಕ್‌ ಕ್ರೀಡಾಕೂಟದ ವೇಳೆ ಕ್ರೀಡಾಂಗಣಗಳಿಗೆ 10,000 ಪ್ರೇಕ್ಷಕರಿಗೆ ಪ್ರವೇಶ ನೀಡುವುದಾಗಿ ಘೋಷಿಸಿರುವ ಆಯೋಜಕರು ಕೆಲ ಷರತ್ತುಗಳನ್ನು ವಿಧಿಸಿದ್ದಾರೆ. 

ಕ್ರೀಡಾಂಗಣ ಸೇರಿದಂತೆ ಎಲ್ಲಿಯೂ ಕ್ರೀಡಾಪಟುಗಳಿಂದ ಆಟೋಗ್ರಾಫ್‌ ಕೇಳುವಂತಿಲ್ಲ. ಕ್ರೀಡಾಂಗಣಗಳಲ್ಲಿ ಯಾವುದೇ ರೀತಿಯ ಸಂಭ್ರಮಾಚರಣೆಗೆ ಅವಕಾಶವಿರುವುದಿಲ್ಲ ಎಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಕ್ರೀಡಾಂಗಣದಲ್ಲಿ ಆಲ್ಕೋಹಾಲ್‌ ಸೇವನೆಯನ್ನೂ ನಿಷೇಧಗೊಳಿಸಲಾಗಿದೆ.

ಶಾಟ್‌ಪುಟ್ ವಿಭಾಗದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ತಜೀಂದರ್‌ ಸಿಂಗ್‌ ತೂರ್

ಕೊರೋನಾ ಭೀತಿಯ ನಡುವೆಯೇ ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟವು ಜುಲೈ 23ರಿಂದ ಆರಂಭವಾಗಲಿದೆ. ಈ ಬಾರಿ ಭಾರತದ ಹಲವು ಅಥ್ಲೀಟ್‌ಗಳು ಪದಕದ ಭರವಸೆ ಮೂಡಿಸಿದ್ದಾರೆ.
 

click me!