
ಮಣಿಪುರ(ಜು.25): ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕ ಖಾತೆ ತೆರೆಯಲು ಕಾರಣರಾದ ವೇಟ್ಲಿಫ್ಟರ್ ಮೀರಾಬಾಯಿ ಚಾನು ಅವರಿಗೆ ಮಣಿಪುರ ಸರ್ಕಾರ 1 ಕೋಟಿ ರುಪಾಯಿ ಬಹುಮಾನ ಘೋಷಿಸಿದೆ. 49 ಕೆ.ಜಿ ವಿಭಾಗದಲ್ಲಿ ಮೀರಾಬಾಯಿ ಚಾನು 202 ಕೆ.ಜಿ ವೇಟ್ಲಿಫ್ಟ್ ಮಾಡುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು
ಇನ್ನು ಮೀರಾಬಾಯಿ ಚಾನು ಅವರ ಕೋಚ್ ವಿಜಯ್ ಶರ್ಮಾಗೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) 10 ಲಕ್ಷ ರು. ಬಹುಮಾನ ಘೋಷಿಸಿದೆ. ಚಿನ್ನದ ಪದಕ ಗೆಲ್ಲುವ ಕ್ರೀಡಾಪಟುಗಳ ಕೋಚ್ಗಳಿಗೆ 12.5 ಲಕ್ಷ ರು, ಕಂಚು ಗೆಲ್ಲುವ ಕ್ರೀಡಾಪಟುಗಳ ಕೋಚ್ಗಳಿಗೆ 7.5 ಲಕ್ಷ ರು. ಬಹುಮಾನ ನೀಡುವುದಾಗಿ ತಿಳಿಸಿದೆ. ಚಿನ್ನ ಗೆಲ್ಲುವ ಕ್ರೀಡಾಪಟುವಿಗೆ 75 ಲಕ್ಷ ರು., ಬೆಳ್ಳಿ ಗೆಲ್ಲುವವರಿಗೆ 40 ಲಕ್ಷ ರು. ಹಾಗೂ ಕಂಚು ಗೆಲ್ಲುವವರಿಗೆ 25 ಲಕ್ಷ ರು. ಬಹುಮಾನ ನೀಡುವುದಾಗಿ ಈ ಮೊದಲೇ ಘೋಷಿಸಿತ್ತು. ಚಾನುಗೆ ಐಒಎ 40 ಲಕ್ಷ ರು. ಬಹುಮಾನ ನೀಡಲಿದೆ.
Tokyo olympics;ಪ್ರಧಾನಿ ಮೋದಿ ಬೆಂಬಲ ಹಾಗೂ ಪ್ರೋತ್ಸಾಹಕ್ಕೆ ಮೀರಾಬಾಯಿ ಧನ್ಯವಾದ!
ಇಡೀ ಭಾರತಕ್ಕೆ ಪದಕ ಅರ್ಪಣೆ: ಮೀರಾಬಾಯಿ
ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಬಳಿಕ ಮೀರಾಬಾಯಿ ಚಾನು ಟ್ವೀಟರ್ನಲ್ಲಿ ಖುಷಿ ಹಂಚಿಕೊಂಡಿದ್ದಾರೆ. ‘ಈ ಪದಕವು ಇಡೀ ಭಾರತಕ್ಕೆ ಅರ್ಪಿಸಲು ಇಚ್ಛಿಸುತ್ತೇನೆ. ನನಗೆ ಹಾರೈಸಿದ ಕೋಟ್ಯಂತರ ಭಾರತೀಯರಿಗೆ ಧನ್ಯವಾದ. ನನಗಾಗಿ ಹಲವು ತ್ಯಾಗಗಳನ್ನು ಮಾಡಿದ ನನ್ನ ತಾಯಿ ಹಾಗೂ ಕುಟುಂಬ ಸದಸ್ಯರಿಗೆ ನಾನು ಋುಣಿ. ಕೇಂದ್ರ ಸರ್ಕಾರ, ಐಒಎ, ಸಾಯ್, ಭಾರತೀಯ ವೇಟ್ಲಿಫ್ಟಿಂಗ್ ಫೆಡರೇಷನ್, ಭಾರತೀಯ ರೈಲ್ವೆ, ಪ್ರಾಯೋಜಕರಿಗೆ ಧನ್ಯವಾದ ತಿಳಿಸುತ್ತೇನೆ. ನನ್ನ ಈ ಸಾಧನೆಗೆ ಕೋಚ್ ವಿಜಯ್ ಶರ್ಮಾ ಹಾಗೂ ಸಹಾಯಕ ಸಿಬ್ಬಂದಿಯ ಪಾತ್ರ ಮಹತ್ವದಾಗಿದೆ’ ಎಂದು ಚಾನು ಟ್ವೀಟ್ ಮಾಡಿದ್ದಾರೆ.