
ನವದೆಹಲಿ (ಜು.25): ಭಾರತೀಯ ರೈಲ್ವೆ ಪ್ರಯಾಣದ ವೇಳೆ ರಭಸವಾಗಿ ಚಲಿಸುತ್ತಿರುವ ರೈಲು ದಿಢೀರನೇ ಮಧ್ಯದಲ್ಲೇ ನಿಲ್ಲುವುದನ್ನು ನಾವೆಲ್ಲರೂ ನೋಡಿರುತ್ತೇವೆ. ಕೋಚ್ನ ಒಳಗಿರುವ ಪ್ರಯಾಣಿಕರು ತುರ್ತು ಸಂದರ್ಭಗಳಲ್ಲಿ ರೈಲಿನ ಚೈನ್ (ಆಲಾರಾಂ ಚೈನ್) ಎಳೆದಾಗ ಇಂತಹ ಘಟನೆಗಳು ನಡೆಯುತ್ತವೆ. ಚೈನ್ ಎಳೆದ ತಕ್ಷಣ ತುರ್ತು ಬ್ರೇಕ್ ಸಿಸ್ಟಮ್ ಕೆಲಸ ಮಾಡಲು ಪ್ರಾರಂಭಿಸಿ, ರೈಲು ಕೆಲವೇ ಕ್ಷಣಗಳಲ್ಲಿ ನಿಂತುಬಿಡುತ್ತದೆ. ಆದರೆ, ಚೈನ್ ಎಳೆದ ತಕ್ಷಣವೇ ಚಾಲಕ ಅಥವಾ ಲೋಕೋ ಪೈಲಟ್ ಮತ್ತು ಗಾರ್ಡ್ಗೆ ನಿರ್ದಿಷ್ಟವಾಗಿ ಯಾವ ಕೋಚ್ನಿಂದ ಚೈನ್ ಎಳೆಯಲಾಗಿದೆ ಎಂಬುದು ಹೇಗೆ ತಿಳಿಯುತ್ತದೆ? ಈ ಕುತೂಹಲದ ಪ್ರಶ್ನೆಗೆ ಉತ್ತರ ಇಲ್ಲಿದೆ.
ಭಾರತೀಯ ರೈಲ್ವೆಯ ಪ್ರತಿಯೊಂದು ಕೋಚ್ನಲ್ಲೂ ತುರ್ತು ಆಲಾರಾಂ ಚೈನ್ ಅನ್ನು ನೀಡಲಾಗಿರುತ್ತದೆ. ಇದನ್ನು ಅತ್ಯಂತ ಅಗತ್ಯವಿದ್ದಾಗ ಮಾತ್ರ ಬಳಸಬೇಕು. ಪ್ರಯಾಣಿಕರೊಬ್ಬರು ರೈಲಿನ ಚೈನ್ ಎಳೆದಾಗ, ಅದು ನೇರವಾಗಿ ರೈಲಿನ ಬ್ರೇಕಿಂಗ್ ಸಿಸ್ಟಮ್ (Breaking System) ಮೇಲೆ ಪರಿಣಾಮ ಬೀರುತ್ತದೆ. ಚೈನ್ ಎಳೆದ ತಕ್ಷಣ ರೈಲಿನ 'ಬ್ರೇಕ್ ಪೈಪ್'ನಲ್ಲಿರುವ ಗಾಳಿಯ ಒತ್ತಡವು (Air Pressure) ವೇಗವಾಗಿ ಕುಸಿಯುತ್ತದೆ.
ಈ ಗಾಳಿಯ ಒತ್ತಡ ಕಡಿಮೆಯಾದ ತಕ್ಷಣವೇ ಅದರ ಸಿಗ್ನಲ್ ಇಂಜಿನ್ಗೆ ತಲುಪುತ್ತದೆ. ಏರ್ ಪ್ರೆಶರ್ ಕಡಿಮೆಯಾಗಿರುವುದನ್ನು ಕಂಡು ಚಾಲಕನಿಗೆ ಯಾರೋ ಚೈನ್ ಎಳೆದಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಹಾಗೂ ರೈಲಿನ ವೇಗ ಕಡಿಮೆಯಾಗಿ ಸಂಪೂರ್ಣವಾಗಿ ನಿಲ್ಲುತ್ತದೆ.
ರೈಲು ನಿಂತ ತಕ್ಷಣವೇ ರೈಲ್ವೆ ಗಾರ್ಡ್ ಹಾಗೂ ಸಿಬ್ಬಂದಿ ಪ್ರತಿಯೊಂದು ಕೋಚ್ ಬಳಿ ಹೋಗಿ ಪರಿಶೀಲಿಸುತ್ತಾರೆ. ರೈಲಿನ ಚೈನ್ ಎಳೆದ ಕೋಚ್ನ ಹೊರಭಾಗದಲ್ಲಿ 'ಎಸಿಪಿ' (Alarm Chain Pulling - ACP) ಇಂಡಿಕೇಟರ್ ಸಕ್ರಿಯಗೊಳ್ಳುತ್ತದೆ (ಆಟೋಮ್ಯಾಟಿಕ್ ಆಗಿ ಆನ್ ಆಗುತ್ತದೆ ಅಥವಾ ಹೊರಬರುತ್ತದೆ). ಈ ಇಂಡಿಕೇಟರ್ ಅನ್ನು ನೋಡಿದ ತಕ್ಷಣವೇ ರೈಲ್ವೆ ಸಿಬ್ಬಂದಿ ಹಾಗೂ ಗಾರ್ಡ್ಗೆ ನಿರ್ದಿಷ್ಟವಾಗಿ 'ಇದೇ ಡಬ್ಬಿಯಲ್ಲಿ ಚೈನ್ ಎಳೆಯಲಾಗಿದೆ' ಎಂಬುದು ತಕ್ಷಣವೇ ಅರಿವಿಗೆ ಬರುತ್ತದೆ.
ಸೂಕ್ತ ಕಾರಣವಿಲ್ಲದೆ ಅಥವಾ ಅನಗತ್ಯವಾಗಿ ರೈಲಿನ ಚೈನ್ ಎಳೆಯುವುದು ರೈಲ್ವೆ ಕಾಯ್ದೆಯಡಿ ಗಂಭೀರ ಅಪರಾಧವಾಗಿದೆ. ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥ ಪ್ರಯಾಣಿಕನಿಗೆ ಭಾರಿ ದಂಡ ವಿಧಿಸಲಾಗುತ್ತದೆ ಹಾಗೂ ಅಗತ್ಯಬಿದ್ದಲ್ಲಿ ಕಾನೂನು ಕ್ರಮ ಜರುಗಿಸಿ ಜೈಲಿಗೂ ಅಟ್ಟಲಾಗುತ್ತದೆ.
ರೈಲಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡರೆ, ತೀವ್ರ ಅನಾರೋಗ್ಯದಂತಹ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾದರೆ, ಅಥವಾ ಪ್ರಯಾಣಿಕನ ಜೀವಕ್ಕೆ ಅಪಾಯ ಬಂದರೆ ಮಾತ್ರ ಚೈನ್ ಎಳೆಯಲು ಅವಕಾಶವಿದೆ. ಆದರೆ, ಯಾವುದೇ ತುರ್ತು ಕಾರಣವಿಲ್ಲದೇ ಚೈನ್ ಎಳೆಯುವುದರಿಂದ ದೂರದೂರುಗಳಿಗೆ ಪ್ರಯಾಣಿಸುವ ಸಾವಿರಾರು ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ, ಕೆಲಸಕ್ಕೆ ತೆರಳುವ ನೌಕರರಿಗೆ ಹಾಗೂ ರೋಗಿಗಳಿಗೆ ತೀವ್ರ ತೊಂದರೆಯಾಗುತ್ತದೆ. ಇದರಿಂದ ರೈಲ್ವೆ ವೇಳಾಪಟ್ಟಿ ಸಂಪೂರ್ಣ ಏರುಪೇರಾಗಿ ದೊಡ್ಡ ಮಟ್ಟದ ನಷ್ಟ ಸಂಭವಿಸುತ್ತದೆ. ಹಾಗಾಗಿ ಅನಗತ್ಯವಾಗಿ ಚೈನ್ ಎಳೆಯುವವರ ವಿರುದ್ಧ ರೈಲ್ವೆ ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತದೆ.
ಸ್ಮಾರ್ಟ್ಫೋನ್ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್ಡೇಟ್. ಡಿಜಿಟಲ್ ಟ್ರೆಂಡ್ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್ಅಪ್ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.