ಬೆಣ್ಣೆದೋಸೆ ನಗರಿ ದಾವಣಗೆರೆಗೆ ಒಲಿದ 38ನೇ ಕಾರ್ಯನಿರತ ಪತ್ರಕರ್ತರ ಸಮ್ಮೇಳನ : ಒಮ್ಮತದ ನಿರ್ಣಯ

By Kannadaprabha NewsFirst Published Feb 4, 2023, 4:23 PM IST
Highlights

38ನೇ ರಾಜ್ಯ ಮಟ್ಟದ ಕಾರ್ಯನಿರತ ಪತ್ರಕರ್ತರ  ಸಮ್ಮೇಳನವನ್ನು ಬೆಣ್ಣೆ ದೋಸೆ ಖ್ಯಾತಿಯ ಹಾಗೂ ಮಧ್ಯ ಕರ್ನಾಟಕ ಭಾಗದ ದಾವಣಗೆರೆಯಲ್ಲಿ ನಡೆಸಲು ನಿರ್ಧರಿಸಲಾಯಿತು.

ಕನ್ನಡಪ್ರಭ ವಾರ್ತೆ, ವಿಜಯಪುರ
ವಿಜಯಪುರ (ಫೆ.04): 38ನೇ ರಾಜ್ಯ ಮಟ್ಟದ ಕಾರ್ಯನಿರತ ಪತ್ರಕರ್ತರ  ಸಮ್ಮೇಳನವನ್ನು ಬೆಣ್ಣೆ ದೋಸೆ ಖ್ಯಾತಿಯ ಹಾಗೂ ಮಧ್ಯ ಕರ್ನಾಟಕ ಭಾಗದ ದಾವಣಗೆರೆಯಲ್ಲಿ ನಡೆಸಲು ನಿರ್ಧರಿಸಲಾಯಿತು. ಶನಿವಾರ ವಿಜಯಪುರದಲ್ಲಿ ಆರಂಭಗೊಂಡ ಎರಡು ದಿನಗಳ 37ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ನಡೆದ ಪ್ರತಿನಿಧಿಗಳ ಸಭೆಯಲ್ಲಿ ಧ್ವನಿಮತದ ಮೂಲಕ ನಿರ್ಣಯ ಅಂಗೀಕರಿಸಲಾಯಿತು. 

ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಜಿಲ್ಲೆಗಳ ಅಭಿಪ್ರಾಯ ಪಡೆಯಲು ಸಭೆಯಲ್ಲಿ ವಿಷಯ ಮಂಡಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ  ಮಾತನಾಡಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಉಡುಪಿ, ಕೋಲಾರ, ಕೊಪ್ಪಳ ಜಿಲ್ಲೆಗಳಿಂದ ಸಮ್ಮೇಳನ ನಡೆಸಲು ಬೇಡಿಕೆ ಬಂದಿದೆ ಎಂದರು. ಈ ವೇಳೆ ದಾವಣಗೆರೆ, ಚಿತ್ರದುರ್ಗ ಜಿಲ್ಲೆಯವರು ತಮ್ಮಲ್ಲಿಯೇ ಸಮ್ಮೇಳನ ನಡೆಸಬೇಕು ಎಂದು ಪ್ರಬಲವಾಗಿ ತಮ್ಮ ಹಕ್ಕು ಮಂಡಿಸಿದರು. 

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ಪ್ರಕಟ: ಅಜಿತ್​ ಹನುಮಕ್ಕನವರ್​ಗೆ ಕೆಯುಡಬ್ಲ್ಯೂಜೆ ವಾರ್ಷಿಕ ಪ್ರಶಸ್ತಿ

ಆಗ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅವರು, ಈಗಾಗಲೇ ಸಮ್ಮೇಳನ ನಡೆದ ಜಿಲ್ಲೆಗಳನ್ನು ಹೊರತುಪಡಿಸಿ ಒಂದು ಬಾರಿಯೂ ಸಮ್ಮೇಳನ ನಡೆಯದ ಜಿಲ್ಲೆಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವುದು ಸೂಕ್ತ. ಕಳೆದ 6 ವರ್ಷಗಳ ಹಿಂದೆ ಚಿತ್ರದುರ್ಗ ಜಿಲ್ಲೆಯಲ್ಲಿ ಸಮ್ಮೇಳನ ನಡೆದಿದೆ. ಆದ್ದರಿಂದ ಚಿತ್ರದುರ್ಗ ಜಿಲ್ಲೆಯವರು ಬೇರೆ ಜಿಲ್ಲೆಯಲ್ಲಿ ಸಮ್ಮೇಳನ ನಡೆಸಲು ಸಹಕಾರ ನೀಡಬೇಕು. ಈ ಬಾರಿ 38ನೇ ರಾಜ್ಯ ಸಮ್ಮೇಳನ ಬೆಣ್ಣೆ ದೋಸೆ ಖ್ಯಾತಿಯ ದಾವಣಗೆರೆ ಜಿಲ್ಲೆಗೆ ನೀಡಲಾಗುವುದು ಎಂದು ಘೋಷಿಸಿದರು. ಆಗ ಎಲ್ಲರೂ ಚಪ್ಪಾಳೆಯ ಕರತಾಡತನದಿಂದ ಅಧ್ಯಕ್ಷರ ಘೋಷಣೆಯನ್ನು ಸ್ವಾಗತಿಸಿ ಬೆಂಬಲಿಸಿದರು.

ಇದಕ್ಕೂ ಮುನ್ನ ರಾಷ್ಟ್ರೀಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಮಾತನಾಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಸಾರಥ್ಯದಲ್ಲಿ ಪತ್ರಕರ್ತರ ಸಮಸ್ಯೆಗಳಿಗೆ ಸಂಘ ಸ್ಪಂದಿಸಿ ಉತ್ತಮ ಕೆಲಸ ಮಾಡುತ್ತಿದೆ. ಕೋವಿಡ್ ಸಂದರ್ಭದಲ್ಲಿ ಮೃತರಾದ ಪತ್ರಕರ್ತರ ಕುಟುಂಬಗಳಿಗೆ 5 ಲಕ್ಷ ರು.ಗಳವರೆಗೆ ನೆರವು ಒದಗಿಸಲು ಅಧ್ಯಕ್ಷರು ಶ್ರಮಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ವೈಯಕ್ತಿಕ ವಿಚಾರಗಳಿಗೆ ಗಮನ ಹರಿಸದೆ ಎಲ್ಲರೂ ಒಗ್ಗೂಡಿ ಶ್ರಮ ವಹಿಸಿ ಸಂಘವನ್ನು ಮುನ್ನಡೆಸಿಕೊಂಡು ಹೋಗಲು ಸಾಥ್ ನೀಡಬೇಕು ಎಂದು ಕೇಳಿಕೊಂಡರು. ಇದೇ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಪುಟ್ಟಪ್ಪ ಮಾತನಾಡಿದರು.

click me!