
ವರದಿ: ಎಂ.ಅಪ್ರೋಜ್ ಖಾನ್
ರಾಮನಗರ: ಆದಾಯ ತೆರಿಗೆ ಮತ್ತು ಜಿಎಸ್ಟಿ ರಿಟರ್ನ್ಸ್ ಸಲ್ಲಿಸುವ ಕುಟುಂಬಕ್ಕೆ ಸೇರಿರುವ ಜಿಲ್ಲೆಯಲ್ಲಿ 4,756 ಮಹಿಳೆ ಯರನ್ನು ಗೃಹಲಕ್ಷ್ಮಿ ಯೋಜನೆಯಿಂದ ಕೈ ಬಿಡಲಾಗಿದೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಮಹಿಳೆಯರಿಗೆ ಮಾಸಿಕ 2 ಸಾವಿರ ಪಾವತಿಸುವ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಪಟ್ಟಿಯಿಂದ ಆದಾಯ ತೆರಿಗೆ ಮತ್ತು ಜಿಎಸ್ಟಿ ರಿಟರ್ನ್ಸ್ ಸಲ್ಲಿಸುವ ಕುಟುಂಬದ ಸ್ತ್ರೀಯರನ್ನು ಹೊರ ಹಾಕಲಾಗುತ್ತಿದೆ.
ಮಹಿಳೆಯಗೆ ಆರ್ಥಿಕ ಬಲ ತುಂಬಿ ಸ್ವಾವಲಂಬಿ ಗಳನ್ನಾಗಿ ಮಾಡುವ ಆಶಯದೊಂದಿಗೆ ರಾಜ್ಯ ಸರ್ಕಾರವು ಮಹಿಳೆಯ ಬ್ಯಾಂಕ್ ಖಾತೆಗೆ 2 ಸಾವಿರ ಮೊತ್ತವನ್ನು ನೇರ ನಗದು ವರ್ಗಾವಣೆ ಮಾಡುವ ಗೃಹಲಕ್ಷ್ಮಿ ಯೋಜನೆಯನ್ನು 2023ರ ಆಗಸ್ಟ್ನಿಂದ ಜಾರಿಗೆ ತಂದಿದೆ.
2025ರ ಅಕ್ಟೋಬರ್ವೇಳೆಗೆ ಜಿಲ್ಲೆಯಲ್ಲಿ ಗೃಹ ಲಕ್ಷ್ಮಿ ಯೋಜನೆಗೆ 2,94,399 ಮಹಿಳೆಯರು ಗುರಿ ಇದ್ದು, 2,80,673 ಮಹಿಳೆಯರು ಸೇರ್ಪಡೆಯಾಗಿ ಸಾಧನೆ ಮಾಡಲಾಗಿದೆ. ಅಂದರೆ ಶೇಕಡ 95.34 ರಷ್ಟು ಪ್ರಗತಿ ಸಾಧಿಸಲಾಗಿದೆ.
ಈಗ ಜಿಲ್ಲೆಯಲ್ಲಿ ಯೋಜನೆಯಿಂದ ಕೈ ಬಿಡ ಲಾಗಿರುವ 4,756 ಮಹಿಳೆಯರಲ್ಲಿ ರಾಮನಗರ ಮೊದಲಿದ್ದರೆ, ಮಾಗಡಿ ಕಡೆಯ ಸ್ಥಾನದಲ್ಲಿದೆ. ರಾಮನಗರದಲ್ಲಿ 1,736 ಮಹಿಳೆಯರು, ಎರಡನೇ ಸ್ಥಾನದಲ್ಲಿರುವ ಕನಕಪುರದಲ್ಲಿ 1,236, ಮೂರನೇ ಸ್ಥಾನದಲ್ಲಿರುವ ಚನ್ನಪಟ್ಟಣದಲ್ಲಿ 1,189 ಹಾಗೂ ಕಡೆಯ ಸ್ಥಾನದಲ್ಲಿರುವ ಮಾಗಡಿಯಲ್ಲಿ 595 ಮಹಿಳೆಯರು ಗೃಹಲಕ್ಷ್ಮಿ ಹಣದಿಂದ ವಂಚಿತರಾಗಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಪತಿಯ ಆದಾಯ ಆಧರಿಸಿ ಫಲಾನುಭವಿಗಳ ಆರ್ಥಿಕ ಸ್ಥಿತಿಗತಿ ನಿರ್ಧರಿಸಲಾಗಿದೆ. ಫಲಾನುಭವಿಯ ಪತಿ ಆದಾಯ ತೆರಿಗೆ ಅಥವಾ ಜಿಎಸ್ಟಿ ರಿಟರ್ನ್ಸ್ ಸಲ್ಲಿಸುತ್ತಿದ್ದರೆ ಅಂತಹವರ ಹೆಸರು ಕೈ ಬಿಡಲಾಗುತ್ತದೆ.
ಕೆ.ರಾಜು ಜಿಲ್ಲಾಧ್ಯಕ್ಷರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ, ಬೆಂ.ದಕ್ಷಿಣ ಜಿಲ್ಲೆ
ಗೃಹಲಕ್ಷ್ಮಿಸೌಲಭ್ಯ ಅರ್ಹರಿಗೆ ಮಾತ್ರ ಸಿಗುವಂತೆ ಮಾಡುವ ಉದ್ದೇಶದಿಂದ ಯೋಜನೆ ಅನುಷ್ಠಾನದ ಹೊಣೆ ಹೊತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಫಲಾನುಭವಿಗಳ ಪಟ್ಟಿಯನ್ನು ಆಗಿಂದಾಗೆ ಪರಿಷ್ಕರಿಸುತ್ತಾ ಬಂದಿದೆ. ಯೋಜನೆಯ ಸೌಲಭ್ಯ ಪಡೆಯಲು ನಿಗದಿ ಪಡಿಸಿರುವ ಮಾನದಂಡ ಗಳಿಗೆ ವಿರುದ್ಧವಾಗಿರುವ ಫಲಾನುಭವಿಗಳನ್ನು ಪಟ್ಟಿಯಿಂದ ಮುಲಾಜಿಲ್ಲದೆ ವಜಾಗೊಳಿಸುತ್ತಿದೆ.
ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಅಥವಾ ಜಿಎಸ್ಟಿ ರಿಟರ್ನ್ಸ್ ಪಾವತಿದಾರರಾಗಿದ್ದಲ್ಲಿ ಅಂತಹವರು ಯೋಜನೆಗೆ ಅರ್ಹರಾಗಿರುವುದಿಲ್ಲ. ಸರ್ಕಾರವು ಯೋಜನೆಗೆ ನಿಗದಿಪಡಿಸಿರುವ ಮಾನದಂಡಗಳ ಆಧಾರದಮೇಲೆ ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಅದರಂತೆ ಜಿಲ್ಲೆಯಲ್ಲಿ 4,756 ಮಂದಿಯನ್ನು ಫಲಾನುಭವಿಗಳ ಪಟ್ಟಿಯಿಂದ ಕೈ ಬಿಡಲಾಗಿದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವಿತರಿಸುವ ಅಂತ್ಯೋದಯ ಅನ್ನ ಯೋಜನೆ (ಎಎವೈ), ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವ) ಹಾಗೂ ಎಪಿಎಲ್ (ಬಡತನ ರೇಖೆಗಿಂತ ಮೇಲಿರುವ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಗಳಾಗಲು ಅರ್ಹರಾಗಿರುತ್ತಾರೆ. ಒಂದು ಕುಟುಂಬ ದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರಿದ್ದರೆ, ಒಬ್ಬ ರನ್ನು ಮಾತ್ರ ಯೋಜನೆಗೆ ಪರಿಗಣಿಸಲಾಗುತ್ತದೆ.
ಚನ್ನಪಟ್ಟಣ 1189
ಕನಕಪುರ 1236
ಮಾಗಡಿ 595
ರಾಮನಗರ 1736
ಒಟ್ಟು 4,756
ಚನ್ನಪಟ್ಟಣ 64,495
ಕನಕಪುರ 92,367
ರಾಮನಗರ 53,200
ಒಟ್ಟು 2,80,673
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ