ಈಗ ಅನಂತ್ ಕುಮಾರ್ ಅಸ್ತಂಗತರಾಗಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಸೀಮಿತವಾದಂತೆ ಅವರ ಸ್ಥಾನವನ್ನು ಯಾರು ತುಂಬ ಬೇಕು ಎಂಬ ಗೊಂದಲ ಬಿಜೆಪಿಯಲ್ಲಿದೆ. ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರು ಬಿಜೆಪಿಯ ಸಹಜ ಆಯ್ಕೆ. ಆದರೆ, ಚುನಾವಣಾ ರಾಜಕಾರಣಕ್ಕೆ ಇಳಿಯಲು ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಮನಸ್ಸಿದೆಯೇ ಎಂಬುದು ಇನ್ನು ಯಾರಿಗೂ ಗೊತ್ತಿಲ್ಲ.
ಬೆಂಗಳೂರು[ನ.13]: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ 1996ರಿಂದ ಪ್ರಭಾವಿಯಾಗಿ ಬೇರೂರಿದ ಅನಂತ್ ಕುಮಾರ್ ಅವರನ್ನು ಮಣಿಸಲು ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರ ಪತ್ನಿ ವರಲಕ್ಷ್ಮೀ ಗುಂಡೂರಾವ್ ಅವರಿಂದ ಮೊದಲುಗೊಂಡು ಐಟಿ ದಿಗ್ಗಜ ನಂದನ್ ನಿಲೇಕಣಿವರೆಗೂ ಹಲವು ದಿಗ್ಗಜರನ್ನು ಕಣಕ್ಕಿಳಿಸಿ ವಿಫಲ ಪ್ರಯತ್ನ ನಡೆಸಿತ್ತು.
ಈಗ ಅನಂತ್ ಕುಮಾರ್ ಅಸ್ತಂಗತರಾಗಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಸೀಮಿತವಾದಂತೆ ಅವರ ಸ್ಥಾನವನ್ನು ಯಾರು ತುಂಬ ಬೇಕು ಎಂಬ ಗೊಂದಲ ಬಿಜೆಪಿಯಲ್ಲಿದೆ. ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರು ಬಿಜೆಪಿಯ ಸಹಜ ಆಯ್ಕೆ. ಆದರೆ, ಚುನಾವಣಾ ರಾಜಕಾರಣಕ್ಕೆ ಇಳಿಯಲು ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಮನಸ್ಸಿದೆಯೇ ಎಂಬುದು ಇನ್ನು ಯಾರಿಗೂ ಗೊತ್ತಿಲ್ಲ. ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದ ತೇಜಸ್ವಿನಿ ರಾಜಕಾರಣಕ್ಕೆ ಬರಲು ಇಚ್ಛಿಸದಿದ್ದರೆ ಯಾರನ್ನು ಕಣಕ್ಕೆ ಇಳಿಸಬೇಕು ಎಂಬ ಚಿಂತನೆ ಬಿಜೆಪಿಯಲ್ಲಿ ಇನ್ನೂ ಆರಂಭವಾಗಿಯೇ ಇಲ್ಲ.
ಆದರೆ, ಕಾಂಗ್ರೆಸ್ ಮಾತ್ರ ಈ ದಿಸೆಯಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ. 2019ರ ಲೋಕಸಭಾ ಚುನಾವಣೆಗೆ ಬೆಂಗಳೂರು ದಕ್ಷಿಣದಿಂದ ಮಾಜಿ ಸಚಿವ ಎಂ. ಕೃಷ್ಣಪ್ಪ ಅವರ ಪುತ್ರ ಪ್ರಿಯಕೃಷ್ಣ ಅವರನ್ನು ಕಣಕ್ಕೆ ಇಳಿಸಬೇಕು ಎಂಬ ಚಿಂತನೆ ಈಗಾಗಲೇ ಕಾಂಗ್ರೆಸ್ ಹೊಂದಿದೆ. ಪ್ರಿಯ ಕೃಷ್ಣ ಅವರ ತಂದೆ ಎಂ. ಕೃಷ್ಣಪ್ಪ ಅವರು 2004ರಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಅನಂತ್ ಕುಮಾರ್ ಎದುರು ಸ್ಪರ್ಧಿಸಿ ಸೋಲುಂಡಿದ್ದರು.
ತಂದೆಯ ಸೋಲಿಗೆ ಸೇಡು ತೀರಿಸಿಕೊಳ್ಳಲು ಪುತ್ರ ಪ್ರಿಯಕೃಷ್ಣ ಸೂಕ್ತ ಎಂಬ ಕಾರಣಕ್ಕೆ 2019ರಲ್ಲಿ ಅನಂತ್ ಕುಮಾರ್ ಎದುರು ಪ್ರಿಯಕೃಷ್ಣ ಅವರನ್ನು ಕಣಕ್ಕಿಳಿಸುವ ಚಿಂತನೆ ಕಾಂಗ್ರೆಸ್ನಲ್ಲಿತ್ತು. ಇದಕ್ಕೆ ಮುಖ್ಯ ಕಾರಣ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಒಕ್ಕಲಿಗರಿದ್ದಾರೆ. ಎಂ. ಕೃಷ್ಣಪ್ಪ ಅವರ ಕುಟುಂಬ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರ ಕುಟುಂಬದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ ಮತ್ತು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಒಗ್ಗೂಡಿ ಚುನಾವಣೆ ಎದುರಿಸಲಿರುವುದು ಮುಖ್ಯ ಕಾರಣ.
ಈ ಮೂರು ಅಂಶಗಳು ಸೇರಿ ಅನಂತ್ ಕುಮಾರ್ ಅವರಂತಹ ಪ್ರಬಲ ಸ್ಪರ್ಧೆ ನೀಡಲು ಪ್ರಿಯಕೃಷ್ಣಗೆ ಸಾಧ್ಯವಾಗುತ್ತದೆ ಎಂಬುದು ಕಾಂಗ್ರೆಸ್ ಚಿಂತನೆ. ಈಗಂತೂ ಅನಂತಕುಮಾರ್ ಅಸ್ತಂಗತರಾಗಿದ್ದಾರೆ. ಬಿಜೆಪಿಗೆ ಅನಂತಕುಮಾರ್ ಅವರಷ್ಟುಪ್ರಬಲ ಅಭ್ಯರ್ಥಿ ಈ ಕ್ಷೇತ್ರಕ್ಕೆ ದೊರೆಯುವುದು ಕಷ್ಟಸಾಧ್ಯ. ಹೀಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟಕ್ಕೆ ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಈ ಬಾರಿ ಬಿಜೆಪಿಯಿಂದ ಕಸಿದುಕೊಳ್ಳುವ ವಿಶ್ವಾಸ ಮೂಡಿದೆ. ಇದಕ್ಕೆ ಬಿಜೆಪಿ ಯಾವ ಪ್ರತಿತಂತ್ರ ಹೂಡುತ್ತದೆ ಎಂಬುದನ್ನು ಕಾದು ನೋಡಬೇಕು.