ಈ ದೇಶದ ಬಗ್ಗೆ ಅಭಿಮಾನ, ತ್ಯಾಗ ಮನೋಭಾವ ಹೊಂದಿರುವ ಯಾರೇ ಯುವಕರು ಸೇನೆಗೆ ಸೇರಿದರೆ ಅದು ನಮಗೆ ಹೆಮ್ಮೆ ಮತ್ತು ದೇಶಕ್ಕೆ ಅನುಕೂಲವಾಗುತ್ತದೆ. ಅವರು ಆರ್ಎಸ್ಎಸ್ ಕಾರ್ಯಕರ್ತರೇ ಆಗಿದ್ದರೆ ತಪ್ಪೇನಿದೆ.
ಚಿಕ್ಕಬಳ್ಳಾಪುರ (ಜೂ.21): ಈ ದೇಶದ ಬಗ್ಗೆ ಅಭಿಮಾನ, ತ್ಯಾಗ ಮನೋಭಾವ ಹೊಂದಿರುವ ಯಾರೇ ಯುವಕರು ಸೇನೆಗೆ ಸೇರಿದರೆ ಅದು ನಮಗೆ ಹೆಮ್ಮೆ ಮತ್ತು ದೇಶಕ್ಕೆ ಅನುಕೂಲವಾಗುತ್ತದೆ. ಅವರು ಆರ್ಎಸ್ಎಸ್ ಕಾರ್ಯಕರ್ತರೇ ಆಗಿದ್ದರೆ ತಪ್ಪೇನಿದೆ. ದೇಶಕ್ಕಾಗಿ ಎಲ್ಲವನ್ನೂ ತ್ಯಾಗವನ್ನು ಮಾಡುತ್ತೇನೆ ಎನ್ನುವ ವ್ಯಕ್ತಿ ಆರ್ಎಸ್ಎಸ್ ಆದರೇನು, ಬೇರೆ ಸಂಘಟನೆಯಾದರೂ ತಪ್ಪೇನು ಎಂದು ಸಚಿವ ಸುಧಾಕರ್ ಆಗ್ನಿಪಥ್ ವಿರೋಧಿಸುತ್ತಿರುವ ವಿಪಕ್ಷಗಳ ವಿರುದ್ಧ ಕಿಡಿಕಾರಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಸೋಮವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗ್ನಿಪಥ್ ಯೋಜನೆ ಬಗ್ಗೆ ವಿರೋಧ ಪಕ್ಷಗಳಿಗೆ ಸರಿಯಾಗಿ ಅರ್ಥ ಆಗಿಲ್ಲ. ಆಗ್ನಿಪಥ್ ಯೋಜನೆಯಿಂದ ಆಗುವ ಲಾಭದ ಬಗ್ಗೆ ಅವರು ಸರಿಯಾಗಿ ತಿಳಿದುಕೊಳ್ಳದೇ ಪ್ರತಿಭಟನೆ ನಡೆಸುತ್ತಿದ್ದಾರೆಂದರು.
ಕೊರೋನಾ ಹೆಚ್ಚಾದರೆ ಕಾಂಗ್ರೆಸ್ಸೇ ನೇರ ಹೊಣೆ: ಸಚಿವ ಸುಧಾಕರ್
ಉದ್ಯೋಗದಲ್ಲಿ ಶಿಸ್ತು, ಬದ್ಧತೆ: 4 ವರ್ಷಗಳ ಕಾಲ ಶಿಸ್ತು ಬದ್ಧವಾಗಿ ದೇಶದ ಮೇಲೆ ಅಭಿಮಾನವನ್ನು ಹೊಂದಿರುವ ಯುವಕರು ಸೈನ್ಯದಲ್ಲಿ ಸೇರಿ ಹೊರ ಬಂದ ಮೇಲೆ ಈ ದೇಶದ ಬಗ್ಗೆ ಅಭಿಮಾನ ಹೊಂದಿ ಯಾವುದೇ ಉದ್ಯೋಗ ಸೇರಿದರೂ ಆ ಉದ್ಯೋಗದಲ್ಲಿ ಬದಲಾವಣೆ ಬರುತ್ತದೆಯೆಂಬ ಜ್ಞಾನ ಕೂಡ ವಿರೋಧ ಪಕ್ಷಗಳಿಗೆ ಇಲ್ಲದಿರುವುದು ಖೇದಕರ. ಆಗ್ನಿಪಥ್ ಯೋಜನೆ ಆರ್ಎಸ್ಎಸ್ ಕಾರ್ಯಕರ್ತರ ಸೇರ್ಪಡೆಗೆ ಕೇಂದ್ರ ಸರ್ಕಾರ ಹುನ್ನಾರ ನಡೆಸಿದೆಯೆಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹಾಗೂ ಮಾಜಿ ಸಚಿವ ರಾಮಲಿಂಗಾರೆಡ್ಡಿ ನೀಡಿದ ಹೇಳಿಕೆ ವಿರುದ್ಧ ಸಚಿವ ಡಾ.ಕೆ.ಸುಧಾಕರ್ ಹರಿಹಾಯ್ದರು.
ರಾಜ್ಯಕ್ಕೆ ಪ್ರಧಾನಿ ಭೇಟಿ ಕುರಿತು ಮಾಹಿತಿ ನೀಡಿದ ಸಚಿವರು, ನಾಳೆ ವಿಶ್ವ ಯೋಗ ದಿನಾಚರಣೆಗೆ ಪ್ರಧಾನಿಯವರು ಚಾಲನೆ ನೀಡಲಿದ್ದು, ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸೇರಿದಂತೆ ಸಚಿವರು ಭಾಗವಹಿಸಲಿದ್ದಾರೆ. ಅಲ್ಲದೆ ಕೇಂದ್ರ ಸರ್ಕಾರದ ಹಲವು ಯೋಜನೆಗಳ ಫಲಾನುಭವಿಗಳಿಗೆ ಸಲಕರಣೆ ಮತ್ತು ಆದೇಶ ಪತ್ರಗಳನ್ನು ಪ್ರಧಾನಿಯವರು ಇದೇ ಸಂದರ್ಭದಲ್ಲಿ ವಿತರಿಸಲಿದ್ದಾರೆ ಎಂದು ಹೇಳಿದರು.
ತಾಪಂ, ಜಿಪಂ ಚುನಾವಣೆ ಎದುರಿಸಲು ಸಜ್ಜಾಗಿ: ಶೀಘ್ರದಲ್ಲಿಯೇ ತಾಪಂ ಮತ್ತು ಜಿಪಂ ಚುನಾವಣೆಗಳು ಎದುರಾಗಲಿದ್ದು ಬಿಜೆಪಿ ವಿವಿಧ ಪ್ರಕೋಷ್ಟಗಳ ಮುಖ್ಯಸ್ಥರು, ಕಾರ್ಯಕರ್ತರು ಈಗನಿಂದಲೇ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಮತದಾರರಿಗೆ ಮನದಟ್ಟು ಮಾಡಿ ಪಕ್ಷವನ್ನು ಚುನಾವಣೆಗೆ ಸದೃಢಗೊಳಿಸುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಕರ್ನಾಟಕದಲ್ಲಿ ಕೊರೋನಾ ಪರಿಸ್ಥಿತಿ ಬಗ್ಗೆ ವಿವರಿಸಿದ ಸಚಿವ ಸುಧಾಕರ್
ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಬಿಜೆಪಿ ವಿವಿಧ ಪ್ರಕೋಷ್ಠಗಳ ಪದಾಧಿಕಾರಿಗಳ ಜಿಲ್ಲಾ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡುವ ಕೆಲಸವಾಗಬೇಕು. 2023ರ ಸಾರ್ವತ್ರಿಕ ಚುನಾವಣೆ ದೃಷ್ಟಿಯಿಂದ ಜಿಲ್ಲೆಯ 5 ಕ್ಷೇತ್ರಗಳಲ್ಲಿ ಕನಿಷ್ಠ ಬಿಜೆಪಿ 4 ಕ್ಷೇತ್ರ ಗೆಲ್ಲಬೇಕಿದೆ ಎಂದರು.