ಕಾವೇರಿ ವಿಚಾರದಲ್ಲಿ ನಮ್ಮಲ್ಲೇ ಒಗ್ಗಟ್ಟಿಲ್ಲ: ಬೇಸರ ವ್ಯಕ್ತಪಡಿಸಿದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ

By Kannadaprabha NewsFirst Published Sep 27, 2023, 2:13 AM IST
Highlights

ಕಾವೇರಿ ನೀರನ್ನು ತಮಿಳುನಾಡಿಗೆ ಬಿಡದಂತೆ ಕರೆಕೊಟ್ಟಿರುವ ಬಂದ್‌ ವಿಚಾರದಲ್ಲಿ ಮೊದಲು ನಮ್ಮಲ್ಲಿಯೇ ಒಗ್ಗಟ್ಟಿಲ್ಲ. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡಿನ ರಾಜಕಾರಣಿಗಳಲ್ಲಿ ಇರುವ ಒಗ್ಗಟ್ಟು ನಮ್ಮಲ್ಲಿ ಇಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಬೇಸರ ವ್ಯಕ್ತಪಡಿಸಿದರು.

ಹಾಸನ (ಸೆ.27): ಕಾವೇರಿ ನೀರನ್ನು ತಮಿಳುನಾಡಿಗೆ ಬಿಡದಂತೆ ಕರೆಕೊಟ್ಟಿರುವ ಬಂದ್‌ ವಿಚಾರದಲ್ಲಿ ಮೊದಲು ನಮ್ಮಲ್ಲಿಯೇ ಒಗ್ಗಟ್ಟಿಲ್ಲ. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡಿನ ರಾಜಕಾರಣಿಗಳಲ್ಲಿ ಇರುವ ಒಗ್ಗಟ್ಟು ನಮ್ಮಲ್ಲಿ ಇಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಬೇಸರ ವ್ಯಕ್ತಪಡಿಸಿದರು.

ನಗರದ ಸಂಸದರ ನಿವಾಸದಲ್ಲಿ ಮಂಗಳವಾರ ಮಾಧ್ಯಮದೊಂದಿಗೆ ಮಾತನಾಡಿ, ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಕಾವೇರಿ ಕೊಳ್ಳದ ಪ್ರತಿ ಅಣೆಕಟ್ಟೆಯ ಸ್ಥಳ ಪರಿಶೀಲನೆ ಮಾಡಿ ನೀರು ಎಷ್ಟಿದೆ ಎಂದು ವಿವರ ತಂದಿದ್ದಾರೆ. ಅದೇ ವರದಿ ಆಧರಿಸಿ ನಾನು ಪ್ರಧಾನಿ ಅವರಿಗೆ ಪತ್ರ ಬರೆದಿದ್ದೇನೆ. ನಿಷ್ಪಕ್ಷಪಾತವಾಗಿ ಎರಡೂ ರಾಜ್ಯಗಳ ಸ್ಥಿತಿ ಅಧ್ಯಯನ ಮಾಡಲು ತಜ್ಞರ ಸಮಿತಿ ಕಳಿಸಿ ಎಂದು ಆ ಪತ್ರದಲ್ಲಿ ಕೇಳಿದ್ದೇನೆ. ನಾನು ಬರೆದ ಪತ್ರದ ಸಾರಾಂಶದ ಬಗ್ಗೆ ಸಿಎಂ ಹಾಗು ಮಾಜಿ ಸಿಎಂ ಯಡಿಯೂರಪ್ಪ, ಬೊಮ್ಮಾಯಿ ಎಲ್ಲರೂ ಸ್ವಾಗತಿಸಿದ್ದಾರೆ. ನಮ್ಮ ಬೆಳೆ ಉಳಿಸಿಕೊಳ್ಳಲು ೭೦ ಟಿಎಂಸಿ ನೀರು ಬೇಕು. ಹಾಗಾಗಿ ಆ ಬೆಳೆ ಉಳಿಸೋಕೆ ಇವರಿಂದ ಆಗಲ್ಲ. ಮತ್ತೆ ಸಿಡಬ್ಲ್ಯೂಆರ್‌ಸಿ ತೀರ್ಪಿನ ಬಗ್ಗೆ ಸರ್ಕಾರದ ನಿಲುವು ಇನ್ನು ಗೊತ್ತಿಲ್ಲ. ನಾನು ಹಿರಿಯ ರಾಜಕಾರಣಿ ಆಗಿ ನಮ್ಮಲ್ಲಿ ಐಕ್ಯತೆ ಇಲ್ಲ ಎಂದು ಹಲವಾರು ಬಾರಿ ಹೇಳಿದ್ದೇನೆ. ಆದರೆ ತಮಿಳುನಾಡಿನ ಪರಿಸ್ಥಿತಿ ಬೇರೆ ಇದೆ. ಈ ವಿಚಾರದಲ್ಲಿ ಸರ್ಕಾರದ ನಿಲುವು ಬಂದ ಮೇಲೆ ನಾವು ನಮ್ಮ ಪಕ್ಷ ಪ್ರತಿಕ್ರಿಯೆ ನೀಡುತ್ತೇವೆ ಎಂದರು.

ಕಾವೇರಿ ಬಿಕ್ಕಟ್ಟು: ಮೋದಿ ಮಧ್ಯಪ್ರವೇಶಕ್ಕೆ ದೇವೇಗೌಡ ಪತ್ರ, ಸಿಎಂ ಸ್ವಾಗತ

ನಾನು ಬರೆದಿರುವ ಪತ್ರದಲ್ಲಿ ನಮ್ಮ ಹಾಲಿ ಬೆಳೆಗೆ ೭೦ ಟಿಎಂಸಿ ನೀರು ಬೇಕೆಂದು ಸ್ಪಷ್ಟವಾಗಿ ಬರೆದಿದ್ದೇನೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಪ್ರಶ್ನೆ ಇಲ್ಲ. ಮನಮೋಹನ್‌ ಸಿಂಗ್‌ ತೀರ್ಮಾನ ಮಾಡಿದ್ರಾ, ವಾಜಪೇಯಿ ತೀರ್ಮಾನ ಮಾಡಿದ್ರಾ! ಪ್ರಧಾನಿಯೊಬ್ಬರೇ ಈ ಬಗ್ಗೆ ತೀರ್ಮಾನ ಮಾಡಲು ಆಗಲ್ಲ ಎಂದು ದೇವೇಗೌಡರು ಹೇಳಿದರು.

ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಬಗ್ಗೆ ನಾಳೆ ವಿವರವಾಗಿ ಮಾತನಾಡುತ್ತೇನೆ. ನಾನು ತಪ್ಪಿಸಿಕೊಂಡು ಕದ್ದು ಓಡಿ ಹೋಗೋ ಪ್ರಶ್ನೆ ಇಲ್ಲ. ನನ್ನ ಜೀವನದಲ್ಲಿ ಎಂದೂ ಮಿಸ್‌ ಲೀಡ್‌ ಮಾಡಿಲ್ಲ. ಹಿಂದೆ ಸಂಕಷ್ಟ ಬಂದಾಗ ಸಿದ್ದರಾಮಯ್ಯ ಹಾಗು ಸುಪ್ರೀಂಕೋರ್ಟ್ ವಕೀಲರು ನಮ್ಮ ಮನೆಗೆ ಬಂದಿದ್ದರು. ಕಾವೇರಿ ನೀರಿನ ವಿಚಾರವಾಗಿಯೇ ನಾನು ಉಪವಾಸ ಕೂತಿದ್ದಾಗ ಅನಂತ ಕುಮಾರ್‌ ಕೂಡ ಬಂದಿದ್ದರು. ದೇವೇಗೌಡರು ಹೇಳಿದ್ದಕ್ಕೆ ಬದ್ಧ ಎಂದು ಹೇಳಿದ್ದರು. ಆಗ ಇದೇ ಪ್ರಧಾನಿ ಇದ್ದರು. ಸುಪ್ರೀಂಕೋರ್ಟ್ ತೀರ್ಪು ಸಿಡಬ್ಲ್ಯೂಆರ್‌ಸಿ ತೀರ್ಪನ್ನು ಎತ್ತಿ ಹಿಡಿದಿದೆ ಎಂದರು.

ಕೆಆರ್‌ಎಸ್‌ ಜಲಾಶಯ ಪರಿಶೀಲಿಸಿ ಕೇಂದ್ರವೇ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿ: ಮಾಜಿ ಪ್ರಧಾನಿ ದೇವೇಗೌಡರ ಆಗ್ರಹ

ಕಾವೇರಿ ನೀರು ಬಿಡದಂತೆ ಬೆಂಗಳೂರು ಬಂದ್‌, ಕರ್ನಾಟಕ ಬಂದ್‌ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸುತ್ತಾ, ಕೆಲವರು ಇಂದು ಬಂದ್‌ ಮಾಡಿದ್ದಾರೆ. ಇನ್ನು ಕೆಲವರು ಶುಕ್ರವಾರ ಮಾಡ್ತಾರಂತೆ, ಮತ್ತೆ ಕೆಲವರು ವಿಧಾನಸೌಧ ಮುತ್ತಿಗೆ ಹಾಕ್ತಾರಂತೆ, ಇದೇ ನಮ್ಮ ಕರ್ನಾಟಕ ಎಂದು ನಸುನಕ್ಕ ದೇವೇಗೌಡರು, ನಮ್ಮಲ್ಲಿ ಒಗ್ಗಟ್ಟು ಇಲ್ಲ ಎಂದು ಮತ್ತೊಮ್ಮೆ ಹೇಳಿದರು.

click me!