
ಮೈಸೂರು (ಅ.21) : ಮಹಿಷ ಉತ್ಸವದಲ್ಲಿ ಒಕ್ಕಲಿಗ ಸಮಾಜ ಬಗ್ಗೆ ಅವಹೇಳನ ಮಾಡಿರುವ ಸಾಹಿತಿ ಪ್ರೊ.ಕೆ.ಎಸ್. ಭಗವಾನ್ ಅವರನ್ನು ಬಂಧಿಸಿ ಗಡಿಪಾರಿಗೆ ಆಗ್ರಹಿಸಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದವರು ಗುರುವಾರ ಪ್ರತಿಭಟಿಸಿದರು.
ನಗರದ ಜಿಪಂ ಕಚೇರಿ ಮುಂಭಾಗದಲ್ಲಿ ಪ್ರತಿಭಟಿಸಿ, ನಂತರ ನ್ಯಾಯಾಲಯ ಮುಂಭಾಗದ ಗಾಂಧಿ ಪುತ್ಥಳಿ ಸುತ್ತಾ ಮಾನವ ಸರಪಳಿ ರಚಿಸಿ ರಸ್ತೆತಡೆದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ಸಹ ನಡೆಯಿತು.
ಪ್ರೊ. ಭಗವಾನ್ ವಿರುದ್ಧ ಮೈಸೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ಸಲ್ಲಿಸಿದ್ದರೂ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ದಿವ್ಯ ನಿರ್ಲಕ್ಷ್ಯ ತೋರಿರುವುದು ಸರಿಯಲ್ಲ ಎಂದು ಅವರು ಖಂಡಿಸಿದರು.
'ಒಕ್ಕಲಿಗರು ಸಂಸ್ಕೃತಿಹೀನರು' ಎಂಬ ಕೆಎಸ್ ಭಗವಾನ್ ಹೇಳಿಕೆಗೆ ಮುಖ್ಯಮಂತ್ರಿ ಚಂದ್ರು ಆಕ್ಷೇಪ
ಒಕ್ಕಲಿಗರನ್ನು ಅವಹೇಳನ ಮಾಡಿದ ಭಗವಾನ್ ಬಂಧಿಸಿ, ಗಡಿಪಾರು ಮಾಡಿ ಎಂಬ ಭಿತ್ತಿಪತ್ರಗಳನ್ನು ಹಿಡಿದು ಘೋಷಣೆ ಕೂಗಿದರು. ಪ್ರತಿಭಟನಾಕಾರರು ರಸ್ತೆತಡೆ ನಡೆಸಲು ಯತ್ನಿಸಿದಾಗ ಪೊಲೀಸರು ತಡೆದರು. ಈ ವೇಳೆ ಪ್ರತಿಭಟನಾಕಾರರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಸಿ.ಜಿ. ಗಂಗಾಧರ್, ಎಂ.ಬಿ. ಮಂಜೇಗೌಡ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ. ಮರಿಸ್ವಾಮಿ, ಪದಾಧಿಕಾರಿಗಳಾದ ರವಿ, ಮಹೇಶ್, ಚೇತನ್, ಆರ್. ಲೋಕೇಶ್, ನಿರ್ದೇಶಕರಾದ ಕೆ.ಪಿ. ನಾಗಣ್ಣ, ಕುಮಾರ್ ಗೌಡ, ಗೋಪಾಲ್, ಗುರುರಾಜ್, ಪಿ. ಪ್ರಶಾಂತ್ ಗೌಡ, ಗಿರೀಶ್ ಗೌಡ, ಸುಶೀಲಾ ನಂಜಪ್ಪ, ಉಮೇಶ್, ಎ. ರವಿ, ನಗರ ಪಾಲಿಕೆ ಸದಸ್ಯೆ ಶಾಂತಕುಮಾರಿ, ಮುಖಂಡರಾದ ಸುಕೃತ್ ಗೌಡ, ಉಮಾಶಂಕರ್, ವಿಕ್ರಾಂತ್ ದೇವೇಗೌಡ, ಜಗದೀಶ್ ಮಾಯಣ್ಣ, ಕಿರಣ್ ಮಾದೇಗೌಡ, ಸತೀಶ್ ಗೌಡ , ಕಾರ್ತಿಕ್ ಗೌಡ, ತೇಜಸ್, ಲಕ್ಷ್ಮಿದೇವಿ, ನೇಹಾ, ವಸಂತ ಮೊದಲಾದವರು ಇದ್ದರು.
ಕಪ್ಪು ಬಾವುಟ ಪ್ರದರ್ಶನ- ಎಚ್ಚರಿಕೆ
ಮುಂದಿನ 48 ಗಂಟೆಗಳಲ್ಲಿ ಒಕ್ಕಲಿಗರ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಪ್ರೊ. ಭಗವಾನ್ ವಿರುದ್ಧ ಕೇಸು ದಾಖಲಿಸಿ ಬಂಧಿಸದಿದ್ದಲ್ಲಿ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘವು ಎಚ್ಚರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ