Vijayapura : ಸಿದ್ದೇಶ್ವರ ಶ್ರೀಗಳ ಪವಾಡ: ಮೊನ್ನೆ ಪಾರಿವಾಳ- ಇಂದು ಶ್ವಾನದಿಂದ ನಮನ

By Sathish Kumar KHFirst Published Jan 14, 2023, 11:28 AM IST
Highlights

ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ನುಡಿ ನಮನ ಕಾರ್ಯಕ್ರಮದ ವೇಳೆ ಶ್ರೀಗಳ ಭಾವಚಿತ್ರದ ಮುಂದೆ ಶ್ವಾನವೊಂದು ಬಂದು ನಮಿಸಿದ ಆಶ್ಚರ್ಯಕರ ಘಟನೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ನಡೆದಿದೆ. 

ವಿಜಯಪುರ (ಜ.14): ನಾಡಿನ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ನುಡಿ ನಮನ ಕಾರ್ಯಕ್ರಮದ ವೇಳೆ ಶ್ರೀಗಳ ಭಾವಚಿತ್ರದ ಮುಂದೆ ಶ್ವಾನವೊಂದು ಬಂದು ನಮಿಸಿದ ಆಶ್ಚರ್ಯಕರ ಘಟನೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ನಡೆದಿದೆ. 

ವಿಜಯಪುರದ ಜ್ಞಾನಯೋಗಾಶ್ರಮ ಮಠದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ನಮ್ಮನ್ನು ಬಿಟ್ಟು ಅಗಲಿ ಇಂದಿಗೆ 12 ದಿನಗಳು ಪೂರೈಸುತ್ತಿವೆ. ಆದರೆ, ವಿಜಯಪುರ ಜಿಲ್ಲೆಯ  ವಿವಿಧ ಗ್ರಾಮಗಳು ಸೇರಿದಂತೆ ನಾಡಿನಾದ್ಯಂತ ಮಠ, ಮಂದಿರ, ಭವನ ಹಾಗೂ ಸಂಘ- ಸಂಸ್ಥೆಗಳಿಂದ ನುಡಿ-ನಮನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಂತಹ ಕಾರ್ಯಕ್ರಮಗಳಲ್ಲಿ ವಿವಿಧ ಗಣ್ಯರು ಪಾಲ್ಗೊಂಡು ಸಿದ್ದೇಶ್ವರ ಶ್ರೀಗಳು ಹಾಗೂ ಮಠಗಳೊಂದಿಗೆ ಅವರು ಹೊಂದಿದ್ದ ಒಡನಾಟವನ್ನು ಹಂಚಿಕೊಂಡು ನಮನ ಅರ್ಪಣೆ ಮಾಡುತ್ತಿದ್ದಾರೆ. ಆದರೆ, ಮಾತನಾಡಲು ಬರದ ಪ್ರಾಣಿಗಳೂ ಕೂಡ ನಮನ ಅರ್ಪಣೆ ಮಾಡಲು ಬರುತ್ತಿರುವುದು ಶ್ರೀಗಳ ಪವಾಡವೇನೋ ಎನ್ನಿಸುವಂತಿದೆ. 

ವಿಜಯಪುರ: ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಜೀವನ ಪಠ್ಯವಾಗಬೇಕು..!

ಅಪರೂಪದ ಘಟನೆಯ ವಿವರವೇನು?:  ವಿಜಯಪುರ ಜಿ. ಚಡಚಣ ಪಟ್ಟಣದಲ್ಲಿ ಸಿದ್ದೇಶ್ವರ ಶ್ರೀಗಳಿಗೆ ನುಡಿ ನಮನ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿತ್ತು. ವೇದಿಕೆಯ ಮೇಲೆ ಹತ್ತಾರು ಜನರು ನಿಂತುಕೊಂಡು ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಅರ್ಪಿಸಿ, ದೀಪವನ್ನು ಬೆಳಗಿಸುತ್ತಿದ್ದರು. ಜನರ ನಡುವೆ ಹೋದರೆ ಹೊಡೆಯುತ್ತಾರೆ ಎನ್ನುವ ಭಯವನ್ನು ಬಿಟ್ಟು ಸ್ವಾನವೊಂದು ಸೀದಾ ಭಾವಚಿತ್ರದ ಮುಂದೆ ಹೋಗಿ ನಿಂತಿದೆ. ಶ್ವಾನ ವೇದಿಕೆಯತ್ತ ಹೋಗುವಾಗ ಓಡಿಸಲು ಮುಂದಾದರೂ ವೇದಿಕೆಯತ್ತ ನುಗ್ಗಿತ್ತು. ಇದನ್ನು ಗಮನಿಸಿದ ಅಲ್ಲಿನ ಗಣ್ಯ ವ್ಯಕ್ತಿಯೊಬ್ಬರು ಶ್ವಾನವನ್ನು ಹೊಡೆದು ಓಡಿಸದಂತೆ ತಡೆದಿದ್ದಾರೆ. ನಂತರ ಶ್ರೀಗಳ ಭಾವಚಿತ್ರದ ಮುಂದೆ ಹೋಗಿ ನಿಂತುಕೊಂಡು ಕ್ಷಣಹೊತ್ತು ಭಾವಚಿತ್ರವನ್ನು ನೋಡಿ ನಂತರ ಅಲ್ಲಿಂದ ತೆರಳಿದೆ. ಈ ಅಪರೂಪದ ಘಟನೆ ಅಲ್ಲಿದ್ದ ಎಲ್ಲರನ್ನು ಆಶ್ಚರ್ಯಚಕಿತವಾಗುವಂತೆ ಮಾಡಿತ್ತು. ಇದೇನು ಸಿದ್ದೇಶ್ವರ ಶ್ರೀಗಳ ಪವಾಡವೇನೋ ಎನ್ನುವಂತಿತ್ತು.

ಪಾರಿವಾಳವೊಂದು ಕಣ್ಣೀರಿಟ್ಟಿತ್ತು: ಬೀದರ್‌ನಲ್ಲಿ ಶಾಲೆಯಲ್ಲಿ ಸಂಜೆ ಸಿದ್ದೇಶ್ವರ ಶ್ರೀಗಳ ಫೋಟೋವನ್ನಿಟ್ಟು ಪೂಜೆ ಮಾಡುವಾಗ ಹಲವು ಜನರಿದ್ದರೂ ಅದನ್ನು ಲೆಕ್ಕಿಸದೇ ಪಾರಿವಾಳವೊಂದು ಫೋಟೋ ಬಳಿ ಕೂತು ಕಣ್ಣೀರು ಸುರಿಸಿದ್ದ ಘಟನೆ ನಡೆದಿತ್ತು. ಇಂಯಹ ವಿಚಿತ್ರ ಘಟನೆಗಳಿಂದ ಸಿದ್ದೇಶ್ವರ ಶ್ರೀಗಳು ಮನುಷ್ಯರ ಜೀವನವನ್ನು ತಿದ್ದುವುದು ಮಾತ್ರವಲ್ಲದೇ ಪ್ರಾಣಿ, ಪಕ್ಷಿಗಳ ಮೇಲೆಯೂ ಅಪಾರ ಪ್ರೀತಿ- ವಿಶ್ವಾಸವನ್ನು ಹೊಂದಿದ್ದರು. ಸಕಲ ಜೀವರಾಶಿಗಳ ಮೇಲೆಯೂ ದಯೆ ಮತ್ತು ಕರುಣೆಯನ್ನು ಹೊಂದಿದ ವ್ಯಕ್ತಿತ್ವದವರು ಆಗಿದ್ದರು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Vijayapura: 8 ವರ್ಷಗಳಿಂದ ನಡೆದಿಲ್ಲ ನವರಸಪುರ ಉತ್ಸವ, ಸಿದ್ದೇಶ್ವರ ಶ್ರೀ ಕಾಲವಾದ ಹಿನ್ನೆಲೆ ಈ ಬಾರಿಯು ಡೌಟು

ಇನ್ನೂ ಕರಗದ ಭಕ್ತರ ಭೇಟಿ: ಸಿದ್ದೇಶ್ವರ ಶ್ರೀಗಳಿಗೆ ಅನಾರೋಗ್ಯ ಕಾಣಿಸಿಕೊಂಡ ದಿನದಿಂದಲೂ (ಸುಮಾರು ಒಂದು ತಿಂಗಳು) ವಿಜಯಪುರ ಜ್ಞಾನಯೋಗಾಶ್ರಮದತ್ತ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸಿ ಶ್ರೀಗಳಿಗೆ ಭೇಟಿಗಾಗಿ ಕಾಯುತ್ತಿದ್ದರು. ಈ ವೇಳೆ ಒಂದು ದಿನ ಮಾತ್ರ ಸಂಜೆ ವೇಳೆ ಭಕ್ತರಿಗೆ ದರ್ಶನ ನೀಡಿದ್ದರು. ನಂತರ ಕೋವಿಡ್‌ ಹಾಗೂ ಇತರೆ ಕಾರಣಗಳಿಂದ ಭಕ್ತರ ಭೇಟಿಯನ್ನು ಸರ್ಕಾರವೇ ನಿರ್ಬಂಧಪಡಿಸಿತ್ತು. ಇದಾದ ಕೆಲವು ದಿನಗಳಲ್ಲಿ ಅಂದರೆ ಜ.2ರ ವೈಕುಂಠ ಏಕಾದಶಿ ದಿನದಂದು ಶ್ರೀಗಳು ಭಕ್ತರನ್ನು ಬಿಟ್ಟು ಅಗಲಿದ್ದರು.

ಆಗ ಎರಡು ದಿನ ಲಕ್ಷಾಂತರ ಜನರು ಆಗಮಿಸಿ ಶ್ರೀಗಳ ಪಾರ್ಥಿವ ಶರೀರದ ದರ್ಶನ ಪಡೆದು ಕಣ್ಣೀರಿಟ್ಟಿದ್ದರು. ನಂತರ ಅವರ ಗದ್ದಿಗೆಯನ್ನೂ ನಿರ್ಮಾಣ ಮಾಡದಂತೆ ಗುರುಗಳು ತಿಳಿಸಿದ್ದರಿಂದ ಅಗ್ನಿ ಸ್ಪರ್ಶ ನೆರವೇರಿಸಿ ಅವರ ಚಿತಾಭಸ್ಮವನ್ನು ಗುರುಗಳ ಉಯಿಲಿನಂತೆ ಕೂಡಲಸಂಗಮ ಮತ್ತು ಗೋಕರ್ಣದಲ್ಲಿ ವಿಸರ್ಜನೆ ಮಾಡಲಾಗಿತ್ತು. ಆದರೆ, ಶ್ರೀಗಳು ಅಗಲಿ ಇಂದಿಗೆ 12 ದಿನಗಳು ಕಳೆದಿದ್ದರೂ, ಪ್ರತಿನಿತ್ಯ ಜ್ಞಾನ ಯೋಗಾಶ್ರಮ ಮಠಕ್ಕೆ ನೂರಾರು ಭಕ್ತರು ಆಗಮಿಸುತ್ತಿದ್ದಾರೆ. ಇನ್ನು ಶ್ರೀಗಳ ಭಾವಚಿತ್ರಕ್ಕೆ ನಮಿಸಿ, ಸಿದ್ದೇಶ್ವರ ಸ್ವಾಮೀಜಿ ಅವರ ಗುರುಗಳಾದ ಮಲ್ಲಿಕಾರ್ಜುನ ಶಿವಯೋಗಿಗಳ ಗದ್ದುಗೆಗೆ ನಮನ ಅರ್ಪಿಸುತ್ತಿದ್ದಾರೆ.

click me!