
ಹುಬ್ಬಳ್ಳಿ (ಏ.11): ಹುಬ್ಬಳ್ಳಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸ್ವಾಮೀಜಿಯವರ ನೇಮಕವು ಟ್ರಸ್ಟ್ನ ನಿಬಂಧನೆಗಳಿಗೆ ಒಳಪಟ್ಟಿದ್ದರೂ, ಅವರು ಸಮಾಜವನ್ನು ಸಂಘಟಿಸುವ ಬದಲು ಕೇವಲ ಒಬ್ಬ ವ್ಯಕ್ತಿಯನ್ನು ಬೆಂಬಲಿಸುತ್ತಿರುವುದು ಸರಿಯಲ್ಲ ಎಂದು ಕಾಶಪ್ಪನವರ್ ಟೀಕಿಸಿದ್ದಾರೆ.
ಯತ್ನಾಳ್ ಹಾಗೂ ಸ್ವಾಮೀಜಿಯವರು ಸಂಸ್ಥಾಪಕ ಅಧ್ಯಕ್ಷರ ಬಗ್ಗೆ ಕೀಳುಮಟ್ಟದ ಭಾಷೆ ಬಳಸುತ್ತಿದ್ದಾರೆ. 'ಹಂದಿ, ನಾಯಿ, ನರಿ' ಎಂಬಂತಹ ಶಬ್ದಗಳನ್ನು ಉಪಯೋಗಿಸುವುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಇಂತಹ ವರ್ತನೆಯಿಂದಾಗಿಯೇ ಅವರ ಪಕ್ಷದವರು ಯತ್ನಾಳ್ರನ್ನು ಉಚ್ಚಾಟನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಪಂಚಮಸಾಲಿ ಪೀಠಾಧ್ಯಕ್ಷ ಬದಲಾವಣೆ ಸುಳಿವು ನೀಡಿದ ಕಾಶಪ್ಪನವರ್
ಯತ್ನಾಳ್ ಬಗ್ಗೆ ವ್ಯಂಗ್ಯ:
ಕಾಶಪ್ಪನವರ್ ಮಾತನ್ನು ಮುಂದುವರಿಸುತ್ತಾ, ಯತ್ನಾಳ್ ತಾವೇ ಸ್ವಯಂ ಘೋಷಿತ ನಾಯಕರಾಗಿ, 'ನಾನೇ ಮುಂದಿನ ಮುಖ್ಯಮಂತ್ರಿ' ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಇವರು ಮುಖ್ಯಮಂತ್ರಿಯಾಗುತ್ತಾರೋ ಅಥವಾ ಮಾಜಿಯಾಗಿ ಮನೆಯಲ್ಲಿ ಕೂರುತ್ತಾರೋ, ಕಾಲವೇ ತೀರ್ಮಾನಿಸಲಿದೆ' ಎಂದು ವ್ಯಂಗ್ಯವಾಡಿದರು.
ಶ್ರೀಗಳಿಗೆ ಖಾದಿ ಸಲಹೆ:
ಸ್ವಾಮೀಜಿಯವರ ವಿರುದ್ಧವೂ ತೀಕ್ಷ್ಣ ಟೀಕೆ ಮಾಡಿದ ಕಾಶಪ್ಪನವರ್, ಸ್ವಾಮೀಜಿಯವರು ಕಾವಿ ತೊರೆದು ಖಾದಿ ಧರಿಸಲು ಮುಂದಾಗಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ. ಯತ್ನಾಳ್ ಜೊತೆಗೂಡಿ ಚುನಾವಣೆಗೆ ಸ್ಪರ್ಧಿಸುವ ಯೋಜನೆಯಲ್ಲಿದ್ದಾರೆ. ಇದಕ್ಕಾಗಿಯೇ ಫ್ರೀಡಂ ಪಾರ್ಕ್ನಲ್ಲಿ 2D, 2C ಡೀಲ್ಗಳು ನಡೆದಿವೆ ಎಂಬ ಆರೋಪವಿದೆ ಎಂದು ಹೇಳಿದರು.
ಆಸ್ತಿಪಾಸ್ತಿ ಆರೋಪ
ಕಾಶಪ್ಪನವರ್, ಸ್ವಾಮೀಜಿಯವರು ದಾವಣಗೆರೆಯಲ್ಲಿ ವೈಯಕ್ತಿಕ ಶಿಕ್ಷಣ ಸಂಸ್ಥೆ ಸ್ಥಾಪಿಸಿ, ಕೋಟ್ಯಂತರ ರೂಪಾಯಿ ಆಸ್ತಿ ಸಂಪಾದಿಸಿರುವ ಆರೋಪವನ್ನೂ ಮಾಡಿದ್ದಾರೆ. ಕೂಡಲಸಂಗಮದಲ್ಲಿ ಪ್ರತ್ಯೇಕ ಸಂಸ್ಥೆ ನಡೆಸುತ್ತಿರುವ ಸ್ವಾಮೀಜಿಯವರು ಆರ್ಥಿಕವಾಗಿ ಸಬಲರಾಗಲು ಈ ಡೀಲ್ಗಳನ್ನು ಮಾಡಿಕೊಂಡಿದ್ದಾರೆ. ಒಂದು ವಾರದೊಳಗೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪಕ್ಷಕ್ಕೆ ಗಡುವು, ಮೀಸಲಾತಿ ಮರೆವು
ಸ್ವಾಮೀಜಿಯವರು ಒಂದು ಪಕ್ಷಕ್ಕೆ ಗಡುವು ನೀಡಿ, ಯತ್ನಾಳ್ರನ್ನು ಮತ್ತೆ ಸ್ವೀಕರಿಸುವಂತೆ ಒತ್ತಾಯಿಸುತ್ತಿರುವುದನ್ನು ಖಂಡಿಸಿದ ಕಾಶಪ್ಪನವರ್, ಸ್ವಾಮೀಜಿಯವರು 2A ಮೀಸಲಾತಿಯ ಬಗ್ಗೆ ಒಂದು ಮಾತೂ ಆಡದೆ, ಯತ್ನಾಳ್ ಪರವಾಗಿ ಮಾತನಾಡುತ್ತಿದ್ದಾರೆ. ಇದು ಗುರುಗಳು ಮತ್ತು ಯತ್ನಾಳ್ ನಡುವಿನ ಅಡ್ಜಸ್ಟ್ಮೆಂಟ್ ರಾಜಕೀಯವನ್ನು ತೋರಿಸುತ್ತದೆ. ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿದ್ದು ಕೂಡ ಆರ್ಥಿಕ ಲಾಭಕ್ಕಾಗಿಯೇ ಎಂದು ಜನ ನಿರಾಸೆ ವ್ಯಕ್ತಪಡಿಸಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: ವಿಜಯೇಂದ್ರಗೆ ಶಾಸಕ ಯತ್ನಾಳ್ ಓಪನ್ ಚಾಲೆಂಚ್
ಪ್ರತಿಭಟನೆಗೆ ಕರೆ
ಯತ್ನಾಳ್ ಮತ್ತು ಸ್ವಾಮೀಜಿಯವರ ಈ ರೀತಿಯ ವರ್ತನೆ ಸಮಾಜಕ್ಕೆ ಒಳಿತು ತರುವುದಿಲ್ಲ. ಅವರ ವಿರುದ್ಧ ಜನ ಒಗ್ಗೂಡಿ ಧ್ವನಿಯೆತ್ತಬೇಕು. ಸಮಾಜದ ಒಳಿತಿಗಾಗಿ ನಾವು ಈ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಕರೆ ನೀಡಿದರು.
ಒಟ್ಟಿನಲ್ಲಿ ಈ ಬೆಳವಣಿಗೆಗಳು ಹುಬ್ಬಳ್ಳಿಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಈ ವಿವಾದ ಯಾವ ರೀತಿ ಬಿರುಗಾಳಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ