
ಬೆಂಗಳೂರು (ನ.24): ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಡಿ.12ರಂದು ವಿಧಾನಸೌಧ ಮುತ್ತಿಗೆ ಹಾಕುವ ನಿರ್ಧಾರ ಮಾಡಲಾಗಿತ್ತು. ಆದರೆ, ಸರ್ಕಾರಕ್ಕೆ ಮುಖಭಂಗವಾಗಲಿದ್ದು, ಮುತ್ತಿಗೆ ನಿರ್ಧಾರ ಕೈಬಿಡಲು ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದರಿಂದ ಮುತ್ತಿಗೆ ತೀರ್ಮಾನ ವಾಪಸ್ ಪಡೆಯಲಾಗುತ್ತಿದೆ. ಆದರೆ, ಡಿ.19ರೊಳಗೆ ವರದಿ ತರಿಸಿಕೊಂಡು ಮೀಸಲಾತಿ ನಿರ್ಧಾರ ಕೈಗೊಳ್ಳುವುದಕ್ಕೆ ಗಡುವು ನೀಡಲಾಗಿದೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸರ್ಕಾರಿ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ರಾಜ್ಯದಲ್ಲಿ ಕಳೆದ 2 ವರ್ಷಗಳಿಂದ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಪ್ರತಿಭಟನೆ, ಹೋರಾಟ, ಧರಣಿ, ಪಾದಯಾತ್ರೆ ಹಾಗೂ ಸಮಾವೇಶಗಳನ್ನು ಮಾಡಿದರೂ ರಾಜ್ಯ ಸರ್ಕಾರ ಮೀಸಲಾತಿ ಬಗ್ಗೆ ನಿರ್ಧಾರ ಕೈಗೊಂಡಿಲ್ಲ. ಹೀಗಾಗಿ, ಅ.22ರಂದು ನಡೆದಿದ್ದ ಬೆಳಗಾವಿಯ ಪಂಚಮಸಾಲಿ ಸಮಾವೇಶದಲ್ಲಿ ಡಿ.12ರಂದು ವಿಧಾನಸೌಧ ಮುತ್ತಿಗೆ ಹಾಕುವ ನಿರ್ಣಯ ಕೈಗೊಳ್ಳಲಾಗಿತ್ತು.
ಮೀಸಲಾತಿ ನಮ್ಮ ಹಕ್ಕು ಪಡದೇ ತಿರುತ್ತೇವೆ: ಕೂಡಲ ಶ್ರೀ
ಆದರೆ, ನಮ್ಮ ಸಮುದಾಯದಿಂದ ಮುಂದಿನ ನಡೆಯ ಬಗ್ಗೆ ಎಚ್ಚರಿಕೆ ನೀಡಲು ಸಿಎಂ ಅವರನ್ನು ಭೇಟಿಯಾದಾಗ, ಸರ್ಕಾರಕ್ಕೆ ಮುಜುಗರ ಆಗುವುದನ್ನು ತಡೆಯುವ ಹಿನ್ನೆಲೆಯಲ್ಲಿ ಮುತ್ತಿಗೆ ನಿರ್ಧಾರ ವಾಪಸ್ಗೆ ಮನವಿ ಮಾಡಿದರು. ಹೀಗಾಗಿ, ಮುತ್ತಿಗೆ ವಾಪಸ್ಗೆ ಒಪ್ಪಿಕೊಂಡಿದ್ದು, ಹಿಂದುಳಿದ ವರ್ಗದ ಆಯೋಗದಿಂದ ಡಿ.೧೯ರೊಳಗೆ ವರದಿ ತರಿಸಿಕೊಳ್ಳುವುದಕ್ಕೆ ಗಡುವು ನೀಡಿದ್ದೇವೆ. ಇಲ್ಲವಾದಲ್ಲಿ ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುವ ಅಧಿವೇಶನದ ವೇಳೆ ಮುತ್ತಿಗೆ ಹಾಲಕುವುದು ಖಚಿತವೆಂದು ಎಚ್ಚರಿಕೆ ನೀಡಿದ್ದೇವೆ ಎಂದರು.
ದಾರಿ ತಪ್ಪಿಸಿದರೆ ತಕ್ಕ ಪಾಠ ಕಲಿಸ್ತೀವಿ: ಮೀಸಲಾತಿ ವಿಚಾರವಾಗಿ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳದೇ ನಮ್ಮನ್ನು ದಾರಿ ತಪ್ಪಿಸಿದಲ್ಲಿ ಮುಂದೆ ಏನಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಗೊತ್ತಿದೆ. ಮುಂಬರುವ ಚುನಾವಣೆ ವೇಳೆ ನಮ್ಮ ಸಮುದಾಯದಿಂದ ಸರಿಯಾದ ಬುದ್ಧಿ ಕಲಿಸುವ ಬಗ್ಗೆಯೂ ಅರಿವಿದೆ. ಹೀಗಾಗಿ, ಸಿಎಂ ಬೊಮ್ಮಾಯಿ ಅವರೂ ಕೂಡ ನಮ್ಮ ಮನವಿಗೆ ಧನಾತ್ಮಕವಾಗಿ ಸ್ಪಂದಿಸಿದ್ದಾರೆ. ಹಿಂದುಳಿದ ವರ್ಗದ ಆಯೋಗದಿಂದ ವರದಿ ತರಿಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟ ಮಾಡುತ್ತೇವೆ. ನಮ್ಮ ಸಮುದಾಯದ ಲಕ್ಷಾಂತರ ಜನರಿಂದ ಮುತ್ತಿಗೆ ಹಾಕುತ್ತೇವೆ. ಈಗ ಕಾನೂನು ರೀತಿಯಲ್ಲಿ ನ್ಯಾಯ ಒದಗಿಸಲು ಅವಕಾಶ ನೀಡಿದ್ದೇವೆ. ಅದನ್ನು ಮರೆತಲ್ಲಿ ದೊಡ್ಡ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪಂಚಮಸಾಲಿಗೆ 2ಎ ಮೀಸಲಾತಿ ನಂತರವೇ ಹರಜಾತ್ರೆ ಆಚರಣೆ: ವಚನಾನಂದ ಶ್ರೀ
ಚುನಾವಣೆಗೂ ಮೊದಲು ಮೀಸಲಾತಿ: ನಿನ್ನೆ ಚಿಕ್ಕೋಡಿ ತಾಲೂಕಿನ ಕಬ್ಬೂರ ಗ್ರಾಮದಲ್ಲಿ ನಡೆದ 2ಎ ಮೀಸಲಾತಿ ಹಕ್ಕೋತ್ತಾಯ ಬೃಹತ್ ರಾರಯಲಿಯ ಬಳಿಕ ಆಯೋಜಿಸಿದ್ದ ಪಂಚ ಹಂತದ ಚಳವಳಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಬಸವಜಯ ಮೃತುಂಜಯ ಸ್ವಾಮಿಜೀಯವರು ಚುನಾವಣೆಯ ನೀತಿ ಸಂಹಿತೆ ಮೊದಲು 2ಎ ಮೀಸಲಾತಿಯ ನಮ್ಮ ಹಕ್ಕು ಪಡದೇ ತಿರುತ್ತೇವೆ ಎಂದು ಹೇಳಿದ್ದರು. ಈ ವೇಳೆ ಸಮಾಜದ ಮುಖಂಡರು ಏನೇ ಬಿನ್ನಾಭಿಪ್ರಾಯ ಇದ್ದರು ಬರುವ ಡಿಸೆಂಬರ್ 12ರಂದು ಬೆಂಗಳೂರಿಗೆ ಬಂದು ನಮ್ಮ ಮಕ್ಕಳ ಸಲುವಾಗಿ ನಮ್ಮ ಶಕ್ತಿ ತೋರಿಸುವಂತೆಯೂ ಸೂಚಿಸಿದ್ದರು. ಒಕ್ಕಲುತನವನ್ನೇ ನಂಬಿಕೊಂಡು ಬಂದ ಈ ಪಂಚಮಶಾಲಿ ಲಿಂಗಾಯತ ಸಮುದಾಯವು ಆರ್ಥಿಕವಾಗಿ ಹಿಂದುಳಿದಿದ್ದರೂ ಸ್ವಾತಂತ್ರ್ಯ ಸಿಕ್ಕು 78 ವರ್ಷಗಳು ಗತಿಸಿದರೂ ನಮ್ಮ ಮಕ್ಕಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಾಗಲಿ ಯಾವುದೇ ಮೀಸಲಾತಿ ಇಲ್ಲಿಯವರೆಗೆ ಸಿಕ್ಕಿಲ್ಲ ಎಂದು ತಿಳಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ