
ಬೆಂಗಳೂರು(ಜೂ.18): ಬೆಂಗಳೂರು-ಧಾರವಾಡ ನಡುವಿನ ಇಂಟರ್ಸಿಟಿ ಸೆಮಿ ಹೈಸ್ಪೀಡ್ ‘ವಂದೇ ಭಾರತ್ ರೈಲು’ ಶನಿವಾರ ಮೊದಲ ಬಾರಿಗೆ ಅರಸೀಕೆರೆವರೆಗೆ ಪ್ರಾಯೋಗಿಕ ಸಂಚಾರ ನಡೆಸಿದ್ದು, ಸೋಮವಾರದಂದು ಧಾರವಾಡದವರೆಗೆ ಪೂರ್ಣ ಪ್ರಮಾಣದಲ್ಲಿ ಸಂಚರಿಸಲಿದೆ.
ಬೆಳಗ್ಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಹೊರಟ ರೈಲು ಅರಸೀಕೆರೆವರೆಗೆ 195 ಕಿಮೀ ಸಂಚರಿಸಿ ವಾಪಸ್ಸಾಯಿತು. ಯಶವಂತಪುರ, ಚಿಕ್ಕಬಾಣಾವರ, ಕ್ಯಾತಸಂದ್ರ, ತುಮಕೂರು, ಗುಬ್ಬಿ, ಅಮ್ಮಸಂದ್ರ, ತಿಪಟೂರು ಮೂಲಕ ಅರಸೀಕೆರೆ ತಲುಪಿತು. ಅರಸೀಕೆರೆ ನಿಲ್ದಾಣದ ವ್ಯವಸ್ಥಾಪಕ ಪ್ರಭಾತ್ ಕುಮಾರ್ ಸಿಂಗ್ ಸೇರಿ ಸಿಬ್ಬಂದಿ ರೈಲನ್ನು ಸ್ವಾಗತಿಸಿದರು.
ಈಶಾನ್ಯ ಭಾರತಕ್ಕೂ ಸಿಕ್ತು ವಂದೇ ಭಾರತ್ ರೈಲು: ದೇಶದ 18ನೇ ಸೆಮಿ ಹೈ ಸ್ಪೀಡ್ ಟ್ರೈನಿಗೆ ಪ್ರಧಾನಿ ಮೋದಿ ಚಾಲನೆ
ಈ ಮಧ್ಯೆ ರೈಲಿನ ವೇಗ, ಹಳಿ ಬದಲಾವಣೆ ಸೇರಿ ಇತರೆ ಸಂಗತಿಗಳ ಕುರಿತು ನೈಋುತ್ಯ ರೈಲ್ವೇ ಎಂಜಿನಿಯರ್ಗಳು ಮಾಹಿತಿ ಕಲೆ ಹಾಕಿದರು. ಜೊತೆಗೆ ಚೆನ್ನೈ ಪೆರಂಬೂರು ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯ ಸಿಬ್ಬಂದಿಯು ನೈಋುತ್ಯ ರೈಲ್ವೆ ಲೋಕೋಪೈಲಟ್ ಸೇರಿ ಸಿಬ್ಬಂದಿಗೆ ವಂದೇ ಭಾರತ್ ರೈಲಿನ ಚಾಲನೆ, ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ಬೆಂಗಳೂರು ವಿಭಾಗದಲ್ಲಿ ಈ ರೈಲು ಸರಾಸರಿ 110 ಕಿಮೀ ವೇಗದಲ್ಲಿ ಸಂಚರಿಸಿದೆ ಎನ್ನಲಾಗಿದೆ. ಅಂದರೆ 2 ತಾಸಿನೊಳಗೆ ಅರಸೀಕೆರೆ ತಲುಪಿದೆ. ಈಗಿನ ಎಕ್ಸ್ಪ್ರೆಸ್ ರೈಲುಗಳು ಹೆಚ್ಚು ಕಡಿಮೆ ಎರಡೂವರೆ ತಾಸಿನಲ್ಲಿ ಬೆಂಗಳೂರಿನಿಂದ ಅರಸೀಕೆರೆ ತಲುಪುತ್ತವೆ.
ಈ ಮಾರ್ಗದ ರಾಣಿ ಚೆನ್ನಮ್ಮ ಮತ್ತು ಬೆಂಗಳೂರು -ಬೆಳಗಾವಿ ಎಕ್ಸ್ಪ್ರೆಸ್ ರೈಲುಗಳು ಧಾರವಾಡವನ್ನು 7.28 ಗಂಟೆಯಲ್ಲಿ ಅಂತರ ಕ್ರಮಿಸುತ್ತಿದ್ದರೆ, ವಂದೇ ಭಾರತ್ ರೈಲು 6.55 ಗಂಟೆಯಲ್ಲಿ ತಲುಪಲಿದೆ.
530 ಆಸನ:
ಧಾರವಾಡ- ಬೆಂಗಳೂರು ವಂದೇ ಭಾರತ್ ರೈಲು 8 ಬೋಗಿ ಹೊಂದಿದ್ದು, 530 ಪ್ರಯಾಣಿಕರು ಸಂಚರಿಸಬಹುದು. ಐದು ಚೇರ್ಕಾರ್ ಬೋಗಿಗಳ ಒಳಗಿನ ಇಕ್ಕೆಲದಲ್ಲಿ 3+2ರಂತೆ 390 ಆಸನಗಳಿವೆ. 180 ಡಿಗ್ರಿ ತಿರುಗುವ ಆಸನ ಒಳಗೊಂಡಿರುವ ಒಂದು ಎಕ್ಸಿಕ್ಯುಟಿವ್ ಬೋಗಿಯಿದ್ದು, ಇದರಲ್ಲಿ 52 ಆಸನಗಳಿವೆ. ಉಳಿದಂತೆ 2 ಮೋಟರ್ಕಾರ್ ಬೋಗಿಯಲ್ಲಿ 88 ಆಸನ ವ್ಯವಸ್ಥೆಯಿದೆ.
ಮುಂದಿನ ತಿಂಗಳಿಂದ ದೇಶದ 21 ರಾಜ್ಯಗಳಲ್ಲಿ ವಂದೇ ಭಾರತ ಹೈ ಸ್ಪೀಡ್ ರೈಲು ಸಂಚಾರ
16 ಅಲ್ಲ, ಕೇವಲ 8 ಬೋಗಿ:
ಮೈಸೂರು-ಚೆನ್ನೈ ವಂದೇ ಭಾರತ್ನಲ್ಲಿ 16 ಕೋಚ್ಗಳಿವೆ. ಆದರೆ ಧಾರವಾಡ-ಬೆಂಗಳೂರು ರೈಲಲ್ಲಿ 8 ಬೋಗಿಗಳಿವೆ. ಒಂದು ವೇಳೆ 16 ಕೋಚ್ ರೈಲು ನಡೆಸಿ ಪ್ರಯಾಣಿಕರು ನಿರೀಕ್ಷೆಯಷ್ಟುಬಾರದಿದ್ದರೆ ಆರ್ಥಿಕ ನಷ್ಟವಾಗಲಿದೆ. ಜೊತೆಗೆ ಒಂದೇ ರಾಜ್ಯದ ಎರಡು ನಗರಗಳ ನಡುವೆ ಮಿನಿ ವಂದೇ ಭಾರತ್ ರೈಲು ಸಾಕಾಗುತ್ತದೆ ಎಂದು ರೈಲ್ವೆ ಮಂಡಳಿ ತಿಳಿಸಿದ್ದಾಗಿ ಅಧಿಕಾರಿಗಳು ತಿಳಿಸಿದರು.
ಸೌಕರ್ಯಗಳು:
ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸುಂದರವಾದ ಒಳಾಂಗಣ ವಿನ್ಯಾಸದೊಂದಿಗೆ ಪ್ರಯಾಣಿಕರಿಗೆ ಐಷಾರಾಮಿ ಸೌಕರ್ಯ ಕಲ್ಪಿಸಲಿದೆ. ಆರಾಮದಾಯಕ ಆಸನ, ವೈ-ಫೈ , ಜಿಪಿಎಸ್ ಮಾಹಿತಿ ವ್ಯವಸ್ಥೆ, , ಟಚ್ ಫ್ರೀ ಸೌಕರ್ಯಗಳೊಂದಿಗೆ ಜೈವಿಕ ನಿರ್ವಾತ ಶೌಚಾಲಯಗಳು, ಪ್ರತಿ ಸೀಟಿನ ಕೆಳಗೆ ಎಲ್ಇಡಿ ಲೈಟಿಂಗ್ ಚಾರ್ಜಿಂಗ್ ಪಾಯಿಂಟ್, ವೈಯಕ್ತಿಕ ರೀಡಿಂಗ್ ಲೈಟ್ಗಳು, ಒಂದರಿಂದ ಇನ್ನೊಂದು ಬೋಗಿಗೆ ತೆರಳುವಾಗ ಆಟೋಮೆಟೆಡ್ ಸ್ಲೈಡಿಂಗ್ ಬಾಗಿಲುಗಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ