
-ಬೆಂಗಳೂರು (ಮಾ.19) ಯುಗಾದಿ ಹಬ್ಬವಾಗಿರುವುದರಿಂದ ಗುರುವಾರ ಮನೆಗಳಲ್ಲಿ ಸಿಹಿ ಊಟ ತಯಾರಿಸಲಿದ್ದು ಸಸ್ಯಾಹಾರಿ ಹೋಟೆಲ್ಗಳು ಬಹುತೇಕ ಬಂದ್ ಆಗಲಿವೆ. ಮತ್ತೊಂದೆಡೆ, ಶುಕ್ರವಾರ ಹೊಸ ತೊಡಕು ಇರುವುದರಿಂದ ಮಾಂಸಾಹಾರಿ ಹೋಟೆಲ್ಗಳು ರಜೆ ಮಾಡಲಿದ್ದು, ಹೋಟೆಲ್ ಉದ್ಯಮಕ್ಕೆ ಅನಿಲ ಸಿಲಿಂಡರ್ ಬಿಸಿ ಈ ಎರಡು ದಿನದಲ್ಲಿ ಅಷ್ಟೇನೂ ತಟ್ಟುವುದಿಲ್ಲ.
ಹೋಟೆಲ್ ಉದ್ಯಮಕ್ಕೆ ದಿನಕ್ಕೆ 1000 ಸಿಲಿಂಡರ್ ಸರಬರಾಜು ಮಾಡುವುದಾಗಿ ಸ್ಪಷ್ಟಪಡಿಸಿದ್ದರೂ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಹೋಟೆಲ್ ಮಾಲೀಕರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಈ ನಡುವೆ ಯುಗಾದಿ ಮತ್ತು ಹೊಸ ತೊಡಕು ಹೋಟೆಲ್ಗಳಿಗೆ ಒಂದಷ್ಟು ನಿಶ್ಚಿಂತೆ ತಂದಿರುವುದು ಕಂಡುಬಂದಿದೆ.
ಮಲ್ಲೇಶ್ವರದ ಹಳ್ಳಿಮನೆ, ಶ್ರೀನಗರದ ಅನ್ನಪೂರ್ಣೇಶ್ವರಿ ಹೋಳಿಗೆ ಮನೆ ಸೇರಿದಂತೆ ಕೆಲ ಹೋಟೆಲ್ಗಳು ಮಾತ್ರ ಹಬ್ಬದ ದಿನವೇ ಹೋಳಿಗೆ ಊಟ ತಯಾರಿಸಿ ಉಣಬಡಿಸುವ ಸಂಪ್ರದಾಯ ಇಟ್ಟುಕೊಂಡಿವೆ. ಇಂತಹ ಹೋಟೆಲ್ಗಳು ವಾಣಿಜ್ಯ ಬಳಕೆಯ ಸಿಲಿಂಡರ್ ಸಿಗದೇ ಸೌದೆ ಒಲೆ ಸೇರಿದಂತೆ ಪರ್ಯಾಯ ಮಾರ್ಗಗಳತ್ತ ಮುಖ ಮಾಡಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀನಗರದ ಅನ್ನಪೂರ್ಣೇಶ್ವರಿ ಹೋಳಿಗೆ ಮನೆ ಹೋಟೆಲ್ ಮಾಲೀಕ ಚಂದ್ರಶೇಖರ್, ‘ಯುಗಾದಿ ಹಬ್ಬಕ್ಕೆ ಹೋಳಿಗೆಗೆ ಬೇಡಿಕೆ ಇದೆ. ದುಬಾರಿ ಬೆಲೆ ನೀಡಿ ಗ್ಯಾಸ್ ಸಿಲಿಂಡರ್ ಖರೀದಿಸಿ ತರಲು ಆಗುತ್ತಿಲ್ಲ. ಆದ್ದರಿಂದ ಸೌದೆ ಒಲೆಯಲ್ಲಿ ಅಡುಗೆ ಮಾಡುತ್ತೇವೆ. ಹೋಳಿಗೆ ಬೆಲೆ ಹೆಚ್ಚಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಮಲ್ಲೇಶ್ವರದ ಹಳ್ಳಿ ಮನೆ ಹೋಟೆಲ್ ಮಾಲೀಕ ರಾಘವೇಂದ್ರ ಮಾತನಾಡಿ, ‘20 ವರ್ಷದಿಂದ ಯುಗಾದಿ ಹಬ್ಬದಲ್ಲಿ ಹೋಳಿಗೆ ಊಟ ತಯಾರು ಮಾಡುತ್ತಿದ್ದೇವೆ. ಹೋಳಿಗೆಗೆ ಭಾರೀ ಬೇಡಿಕೆ ಇದೆ. ಅನಿಲ ಸಿಲಿಂಡರ್ ಅಭಾವ ಇರುವುದರಿಂದ ಈ ಬಾರಿ ಸೌದೆ ಒಲೆ ಮತ್ತು ಇಂಡಕ್ಷನ್ ಮೂಲಕ ಹೋಳಿಗೆ ತಯಾರಿಸಲಾಗುವುದು. ಸಂಕಷ್ಟ ಪರಿಸ್ಥಿತಿಯಿಂದಾಗಿ ಸಗಟು ಸರಬರಾಜು ಮಾಡುವುದಿಲ್ಲ’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ