
ತುಮಕೂರು (ಮೇ.31): ಹೇಮಾವತಿ ಲಿಂಕ್ ಕೆನಾಲ್ ಯೋಜನೆ ವಿರೋಧಿಸಿ ತುಮಕೂರಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದ್ದು, ನಡು ರಸ್ತೆಯಲ್ಲಿಯೇ ಟೈರ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಶಿವಮೊಗ್ಗ ಬೆಂಗಳೂರು ಹೆದ್ದಾರಿ ತಡೆದು ರೈತ ಮುಖಂಡರು, ಜನಪ್ರತಿನಿಧಿಗಳು ಪ್ರತಿಭಟನೆ ಮಾಡಿದ್ದು, ಕ್ಷಣದಿಂದ ಕ್ಷಣಕ್ಕೆ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಸುಂಕಾಪುರ ನಾಲೆ ಸುತ್ತ 10 ಕಿಮೀ ವ್ಯಾಪ್ತಿಯಲ್ಲಿ ಈಗಾಗಲೇ ಜಿಲ್ಲಾಡಳಿತ ಸೆಕ್ಷನ್ 144 ಜಾರಿ ಮಾಡಿದೆ. ಇಡೀ ನಾಲೆಯ ಸುತ್ತಮುತ್ತಲೂ ಸೆಕ್ಷನ್ 144 ಜಾರಿ ಮಾಡಲಾಗಿದ್ದರೂ ಬಿಜೆಪಿ ಹಾಗೂ ರೈತ ಸಂಘಟನೆಗಳು ಜಂಟಿಯಾಗಿ ಪ್ರತಿಭಟನೆ ಮಾಡುತ್ತಿದೆ. ಆದರೆ, ಈ ನಾಲೆಯ ವ್ಯಾಪ್ತಿಯ ಹೊರಗೆ ರೈತ ಮುಖಂಡರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಪ್ರತಿಭಟನಾಕಾರರ ಮನವೊಲಿಕೆಗೆ ಪೊಲೀಸರು ಪ್ರಯತ್ನಿಸಿದ್ದಾರೆ. ಆದರೆ, ಜಗ್ಗದೆ ಪ್ರತಿಭಟನೆ ನಡೆಸುತ್ತಿದ್ದ ನೂರಾರು ಮುಖಂಡರು ಕಾಮಗಾರಿ ನಡೆಯುತ್ತಿದ್ದ ಸುಂಕಾಪುರ ನಾಲೆ ಬಳಿ ತೆರಳಿದ್ದಾರೆ. ಈ ವೇಳೆ ಪೊಲೀಸರು ಅವರನ್ನು ಮಾರ್ಗ ಮಧ್ಯೆಯೇ ತಡೆದು ಬಂಧಿಸಿದ್ದಾರೆ.
ಈ ವೇಳೆ ಪ್ರತಿಭಟನಾಕಾರರನ್ನು ಕರೆದೊಯ್ಯಲು ಬಂದಿದ್ದ ಕೆಎಸ್ಆರ್ಟಿಸಿ ಬಸ್ನ ಚಕ್ರದ ಗಾಳಿಯನ್ನು ಹೋರಾಟರರರು ತೆಗೆದು ಹಾಕಿದ್ದಾರೆ. ಪ್ರತಿಭಟನಕಾರರನ್ನು ತುಂಬಿಕೊಂಡು ಹೋಗಲು ಬಸ್ ಬಂದಿತ್ತು. ಬಂಧಿಸಲು ಮುಂದಾಗುತ್ತಿದ್ದಂತೆ ಪ್ರತಿಭಟನಾಕಾರರು ರೊಚ್ಚಿಗೆದ್ದಿದ್ದರು. ಬಸ್ ಮುಂದಕ್ಕೆ ಹೋಗದಂತೆ ತಡೆದ ಪ್ರತಿಭಟನಕಾರರು, ಬಸ್ ಅನ್ನು ಮಗುಚಿ ಹಾಕಲು ಪ್ರಯತ್ನಿಸಿದ್ದಾರೆ. ಕಾಲ್ನಡಿಗೆಯಲ್ಲೇ ಕಾಮಗಾರಿ ಸ್ಥಳಕ್ಕೆ ತೆರಳುವ ಪ್ರಯತ್ನ ಮಾಡಿದ್ದರು. 10 ಕಿಲೋಮೀಟರ್ ದೂರ ಕಾಲ್ನಡಿಗೆಯಲ್ಲಿ ಹೋಗಲು ಮುಂದಾಗಿದ್ದರು.
ರಾಮನಗರದಲ್ಲಿ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ಮಾತನಾಡಿದ್ದು, ಕುಣಿಗಲ್ ಮತ್ತು ಮಾಗಡಿಗೆ ನೀರು ತರಬೇಕು ಅಂತ ಡಿಸಿಎಂ ಡಿಕೆಶಿಗೆ ಬದ್ಧತೆ ಇದೆ. ಆದರೆ ನೀರನ್ನ ರಾಮನಗರ, ಕನಕಪುರಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಅಪಪ್ರಚಾರ ಆಗುತ್ತಿದೆ. ನಮಗೆ ಅಲೋಕೇಷನ್ ಆಗಿರೋ 0.6ಟಿಎಂಸಿ ನೀರನ್ನ ಮಾತ್ರ ನಾವು ಕೇಳ್ತಿದ್ದೇವೆ. ಅದನ್ನ ತರಲು ಲಿಂಕ್ ಕೆನಾಲ್ ಯೋಜನೆ ಮಾಡಲಾಗುತ್ತಿದೆ ಎಂದಿದ್ದಾರೆ.
ಇದರ ಬಗ್ಗೆ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗಲೂ ಡಿಕೆಶಿ ಇದನ್ನ ಮಂಜೂರು ಮಾಡಿಸಿದ್ದರು. ಬಳಿಕ ಸಮ್ಮಿಶ್ರ ಸರ್ಕಾರ ಬಂದಾಗ ಬಿಜೆಪಿಯವರು ವಜಾ ಮಾಡಿದ್ದರು. ಈಗ ನಮ್ಮ ಸರ್ಕಾರ ಬಂದ ಮೇಲೆ ಮತ್ತೆ ಮಂಜೂರಾತಿ ಪಡೆದು ಕೆಲಸ ಪ್ರಾರಂಭಿಸಿದ್ದೇವೆ. ರಾಜಕೀಯವಾಗಿ ಮಾತ್ರ ಇದನ್ನ ವಿರೋಧ ಮಾಡುತ್ತಿದ್ದಾರೆ. ಪರಮೇಶ್ವರ್, ಡಿಕೆಶಿ ನೇತೃತ್ವದಲ್ಲಿ ಯೋಜನೆ ಮಾಡುತ್ತಿದ್ದಾರೆ ಎಂದರು.
ಪ್ರತಿಭಟನೆ ಮಾಡೋದು ಅವರ ಹಕ್ಕು ಆದರೆ ನಾವೆಲ್ಲ ಅಣ್ಣತಮ್ಮಂದಿರು. ತುಮಕೂರಿನ ಹಾಲು ಬೆಂಗಳೂರು, ಕುದೂರು ಭಾಗದಲ್ಲಿ ಮಾರಾಟ ಆಗುತ್ತದೆ. ಅದನ್ನ ಮಾರಾಟ ಮಾಡಬೇಡಿ ಅಂತ ನಾವು ನಿಲ್ಲಿಸಲು ಆಗುತ್ತಾ.? ಅದನ್ನ ನಿಲ್ಲಿಸಿದ್ರೆ ಆ ಭಾಗದ ರೈತರಿಗೆ ತೊಂದರೆ ಆಗಲ್ವಾ.? ನಾವೇನು ಅವರ ಹಕ್ಕನ್ನ ಕಿತ್ತುಕೊಳ್ತಿಲ್ಲ, ನಮ್ಮ ನೀರಿನ ಹಕ್ಕು ಕೇಳ್ತಿದ್ದೇವೆ. ಹೋರಾಟ ಮಾಡೋದರಿಂದ ಏನು ಪ್ರಯೋಜನ ಇಲ್ಲ. ನಿಮ್ಮ ಹೆಣ್ಣುಮಕ್ಕಳು ಕೂಡಾ ನಮ್ಮ ತಾಲೂಕಿಗೆ ಮದುವೆ ಮಾಡಿಕೊಟ್ಟಿದ್ದೀರಿ. ನಿಮ್ಮ ಹೆಣ್ಣುಮಕ್ಕಳ ಬದುಕು ಹಸನಾಗಬೇಕು. ಹಾಗಾಗಿ ಹೋರಾಟಗಾರರು ಯೋಜನೆಗೆ ಸಹಕಾರ ಕೊಡಿ ಎಂದು ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ತುಮಕೂರು ಜಿಲ್ಲೆಯ ಎಲ್ಲ ತಾಲೂಕಿಗೂ ಹೇಮಾವತಿ ನೀರು ಸಿಗಬೇಕು. ರೈತರಿಗೆ ನ್ಯಾಯಸಿಬೇಕು ಎನ್ನುವುದು ಬಿಜೆಪಿ ಹಾಗೂ ಅನ್ನದಾತರ ಬೇಡಿಕೆ. ಆದರೆ, ಬಿಜೆಪಿ ಕಾರ್ಯಕರ್ತರನ್ನ ಬಂಧಿಸುವ ಕೆಲಸ ಮಾಡುತ್ತಿದೆ. ರೈತರ ಹೋರಾಟವನ್ನ ಹತ್ತಿಕ್ಕೋಕೆ ರಾಜ್ಯ ಸರ್ಕಾರದಿಂದ ಸಾಧ್ಯವಿಲ್ಲ. ಸರ್ಕಾರ ತುಮಕೂರು ಜಿಲ್ಲೆಯ ತಾಲೂಕುಗಳಿಗೆ ಅನ್ಯಾಯ ಮಾಡಲು ಹೊರಟಿದೆ. ಇದರಿಂದ ಜನರು ಕೂಡ ಎಚ್ಚೆತ್ತುಕೊಂಡಿದ್ದಾರೆ. ಮುಂದಿನ ದಿನದಲ್ಲಿ ಹೋರಾಟ ಹೆಚ್ಚಾಗಲಿದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ