
ತುಮಕೂರು: ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೇ ನಾಡಿನಾದ್ಯಂತ ಪ್ರಖ್ಯಾತರಾದ ತುಮಕೂರು ಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ 119ನೇ ಜಯಂತಿ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸುತ್ತಿದ್ದು, ಶ್ರೀಕ್ಷೇತ್ರದಲ್ಲಿ ಭರದ ಸಿದ್ಧತೆ ನಡೆದಿವೆ.
ನಗರದಲ್ಲಿ ಬುಧವಾರ ಗುರುವಂದನಾ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು, ಕಳೆದ 4-5 ದಿನಗಳಿಂದ ಶ್ರೀಕ್ಷೇತ್ರದಲ್ಲಿ ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ. ಶ್ರೀಗಳ ಜಯಂತಿ ಪ್ರಯುಕ್ತ ಶ್ರೀಮಠದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿದ್ದು, ಅತ್ಯಂತ ವೈಭವೋಪೇತವಾಗಿ ಕಾರ್ಯಕ್ರಮಗಳು ನಡೆಯಲಿವೆ. ಶ್ರೀಗಳ ಗದ್ದುಗೆ ದರ್ಶನ ಮಾಡಲು ಭಕ್ತರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಶ್ರೀಗಳ ಗದ್ದುಗೆ, ದೇವಸ್ಥಾನ ಸೇರಿದಂತೆ ಮಠವನ್ನು ಬಗೆಬಗೆಯ ಹೂವುಗಳಿಂದ ಸಿಂಗರಿಸಲಾಗಿದೆ.
ರಾಷ್ಟ್ರಪತಿ ಅವರು ಶ್ರೀಮಠಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರದಲ್ಲಿ ಬಿಗಿ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿದ್ದು, ಭದ್ರತಾ ದೃಷ್ಠಿಯಿಂದ ಮಂಗಳವಾರವೂ ಕೇಂದ್ರ ಮೀಸಲು ಪಡೆಯಿಂದ ತಪಾಸಣೆ ನಡೆಸಲಾಯಿತು.
ಶ್ರೀಕ್ಷೇತ್ರಕ್ಕೆ ಏ.1ರಂದು ಆಗಮಿಸುವ ಸುಮಾರು 1 ಲಕ್ಷಕ್ಕೂ ಅಧಿಕ ಭಕ್ತರಿಗಾಗಿ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಮಹಾಪ್ರಸಾದ ವಿನಿಯೋಗದ ವ್ಯವಸ್ಥೆ ಮಾಡಲಾಗಿದೆ. ಶ್ರೀಮಠದ ಪ್ರಾರ್ಥನಾ ಮಂದಿರ, ಡಾ.ಶ್ರೀ ಶಿವಕುಮಾರ ಸ್ವಾಮೀಜಿ ದಾಸೋಹ ಮಂಟಪ, ಲಿಂಗಾಯತರ ಕೊಪ್ಪಲು, ಸಾದರ ಕೊಪ್ಪಲು, ಮಠದ ಸಮುದಾಯದ ಭವನ, ಅತಿಥಿ ಗೃಹಗಳು ಸೇರಿದಂತೆ ಶ್ರೀಕ್ಷೇತ್ರದ 6 ಕಡೆಗಳಲ್ಲಿ ಪ್ರಸಾದ ನಿಲಯಗಳನ್ನು ನಿರ್ಮಿಸಲಾಗಿದ್ದು, ಬೆಳಗ್ಗೆಯಿಂದ ರಾತ್ರಿವರೆಗೂ ನಿರಂತರವಾಗಿ ದಾಸೋಹ ನಡೆಯಲಿದೆ. ಭಕ್ತಾದಿಗಳು ಪ್ರಸಾದ ಸೇವಿಸಲು ಟೇಬಲ್ ಮತ್ತು ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ.
ಈಗಾಗಲೇ ಕಳೆದ 4-5 ದಿನಗಳಿಂದ ನೂರಾರು ಬಾಣಸಿಗರು ಸಿಹಿಬೂಂದಿ ಸೇರಿದಂತೆ ಸಿಹಿ ಖಾದ್ಯ ಹಾಗೂ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿದ್ದಾರೆ. ಏ.1ರಂದು ಉಪ್ಪಿನಕಾಯಿ, ಕೋಸಂಬರಿ, ಪಾಯಸ, ಬೂಂದಿ, ಚಿತ್ರಾನ್ನ, ಅನ್ನ, ಸಾರು, ಮಜ್ಜಿಗೆ, ಕೇಸರಿ ಬಾತ್, ಖಾರಾಬಾತ್, ಖಾರಾಬೂಂದಿ ಸೇರಿದಂತೆ ವಿಶೇಷ ದಾಸೋಹ ಇರಲಿದೆ.
ತುಮಕೂರಿನ ಸಿದ್ದಗಂಗಾ ಮಠದಲ್ಲಿ ಏ.1ರಂದು ಆಯೋಜಿಸಲಾಗಿರುವ ಡಾ.ಶಿವಕುಮಾರ ಮಹಾಸ್ವಾಮಿಗಳ 119ನೇ ಜಯಂತೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಮಂಗಳವಾರ ಸಂಜೆ ಬೆಂಗಳೂರಿಗೆ ಆಗಮಿಸಿದರು. ಮುರ್ಮು ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಆತ್ಮೀಯವಾಗಿ ಬರಮಾಡಿಕೊಂಡರು.
ನಡೆದಾಡುವ ದೇವರು, ಮಹಾನ್ ಮಾನವತಾವಾದಿ, ತ್ರಿವಿಧ ದಾಸೋಹ ಕರ್ತೃ, ಸಿದ್ಧಗಂಗಾ ಮಠದ ಶಿವಕುಮಾರ ಮಹಾ ಸ್ವಾಮೀಜಿ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ವೀರಾಪುರದಲ್ಲಿ 1 ಏಪ್ರಿಲ್ 1907 ರಂದು ಜನಿಸಿದರು. 1930ರಲ್ಲಿ ತುಮಕೂರಿನ ಸಿದ್ಧಗಂಗಾ ಮಠದ ಜವಾಬ್ದಾರಿ ಹೊತ್ತು ಅಂದು ಶ್ರೀ ಸಿದ್ಧಗಂಗಾ ಎಜುಕೇಶನ್ ಸೊಸೈಟಿ ಸ್ಥಾಪಿಸಿದರು, ನರ್ಸರಿಯಿಂದ ಎಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳವರೆಗೂ 132ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಾ ಲಕ್ಷಾಂತರ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ವಿಧದ ಮಹಾನ್ ದಾಸೋಹ ಸೇವೆ ಸಲ್ಲಿಸಿದರು. ಸುಮಾರು 77 ವರ್ಷಗಳ ಕಾಲ ಮಠದಲ್ಲಿ ಸೇವೆ ಸಲ್ಲಿಸಿ ಜಾತಿ, ಧರ್ಮ, ಲಿಂಗ ಬೇಧವಿಲ್ಲದೆ ಸರ್ವಜನರ ಏಳ್ಗೆಗಾಗಿ ದುಡಿದ ಮಹಾನ್ ಸಂತ ಶಿವಕುಮಾರ ಶ್ರೀಗಳಿಗೆ ಭಾರತ ಸರ್ಕಾರ 2015ರಲ್ಲಿ ಪದ್ಮವಿಭೂಷಣ, ಕರ್ನಾಟಕ ಸರ್ಕಾರದಿಂದ ಅತ್ಯುನ್ನತ ಗೌರವ ಕರ್ನಾಟಕ ರತ್ನ ನೀಡಿ ಗೌರವಿಸಲಾಗಿದೆ. ಅಂತಿಮವಾಗಿ ಈ ಮಹಾನ್ ಕಾಯಕಯೋಗಿ 21 ಜನವರಿ 2019 ರಂದು ತಮ್ಮ 111ನೇ ವಯಸ್ಸಿನಲ್ಲಿ ಅಪಾರ ಭಕ್ತಗಣವನ್ನು ಆಗಲಿ ಲಿಂಗೈಕ್ಯರಾದರು. ಪ್ರತಿ ವರ್ಷ ಏಪ್ರಿಲ್ 1 ಶ್ರೀಗಳ ಜನ್ಮದಿನದಂದು ಅವರ ಸೇವೆ ಸ್ಮರಿಸಲು ರಾಜ್ಯಾದ್ಯಂತ ದಾಸೋಹ ದಿನವನ್ನಾಗಿ ಆಚರಿಸಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ