
ಬೆಂಗಳೂರು (ಏ.1): ಆರ್ಥಿಕ ಸಂಕಷ್ಟದಿಂದ ಹೊರಬರುವ ಉದ್ದೇಶದೊಂದಿಗೆ ಜಲಮಂಡಳಿಯು ಏಪ್ರಿಲ್ ತಿಂಗಳಿನಿಂದ ಅನ್ವಯವಾಗುವಂತೆ ನೀರು ಬಳಕೆ ಶುಲ್ಕವನ್ನು ಶೇ.3ರಷ್ಟು ಹೆಚ್ಚಿಸಲಿದೆ. ಪರಿಣಾಮ ಏಪ್ರಿಲ್ ತಿಂಗಳಿನಿಂದ ಗೃಹ ಬಳಕೆದಾರರಿಗೆ ಮಾಸಿಕ ಸರಾಸರಿ 20ರಿಂದ 30 ರು. ಹೆಚ್ಚುವರಿ ನೀರಿನ ಬಿಲ್ ಬರುವ ಸಾಧ್ಯತೆಗಳಿವೆ.
ನೀರಿನ ಸರಬರಾಜು ವೆಚ್ಚ, ನಿರ್ವಹಣಾ ವೆಚ್ಚ, ವಿದ್ಯುತ್ ಮತ್ತು ಮೂಲಸೌಕರ್ಯ ಖರ್ಚಿನಲ್ಲಿನ ಹೆಚ್ಚಳ ಸೇರಿ ಇನ್ನಿತರ ಕಾರಣಗಳಿಂದಾಗಿ ಜಲಮಂಡಳಿ ಆರ್ಥಿಕ ನಷ್ಟದಲ್ಲಿದೆ. ಅದನ್ನು ತಪ್ಪಿಸಲು ಪ್ರತಿವರ್ಷ ಶೇ.3ರಷ್ಟು ನೀರು ಬಳಕೆ ಶುಲ್ಕ ಹೆಚ್ಚಿಸಲು ಜಲಮಂಡಳಿ ನಿರ್ಧರಿಸಿದೆ. ಕಳೆದ ವರ್ಷವೂ ಇದೇ ಮಾದರಿಯಲ್ಲಿ ನೀರು ಬಳಕೆ ಶುಲ್ಕ ಹೆಚ್ಚಿಸಲಾಗಿತ್ತು. ಇದೀಗ ಏಪ್ರಿಲ್ ತಿಂಗಳಿನಿಂದ ಅನ್ವಯವಾಗುವಂತೆ ಮತ್ತೆ ಶೇ.3ರಷ್ಟು ನೀರಿನ ಬಿಲ್ ಹೆಚ್ಚಳ ಮಾಡಲಾಗುತ್ತಿದೆ.
ಈ ದರ ಹೆಚ್ಚಳದಿಂದಾಗಿ ಗೃಹ ಬಳಕೆದಾರರಿಗೆ ಪ್ರತಿ ಲೀ. ನೀರಿಗೆ ಗರಿಷ್ಠ 1 ಪೈಸೆವರೆಗೆ ದರ ಹೆಚ್ಚಳವಾಗಲಿದೆ. ಗೃಹೇತರ (ವಾಣಿಜ್ಯ-ಕೈಗಾರಿಕೆ) ಬಳಕೆದಾರರಿಗೆ ಗರಿಷ್ಠ 1.90 ಪೈಸೆ ಹೆಚ್ಚಾಗುವ ಸಾಧ್ಯತೆಗಳಿವೆ. ಇದರಿಂದ ಗೃಹ ಬಳಕೆದಾರರಿಗೆ ಮಾಸಿಕ ನೀರಿನ ಶುಲ್ಕ 20ರಿಂದ 30 ರು. ಮತ್ತು ವಾಣಿಜ್ಯ ಬಳಕೆದಾರರಿಗೆ ಮಾಸಿಕ 50ರಿಂದ 60 ರು. ಹೆಚ್ಚುವರಿ ಹೊರೆಯಾಗುವ ಸಾಧ್ಯತೆಗಳಿವೆ.
2025ಕ್ಕೂ ಮುಂಚಿನ 11 ವರ್ಷಗಳವರೆಗೆ ನಗರದಲ್ಲಿ ನೀರಿನ ದರ ಹೆಚ್ಚಳ ಮಾಡಿರಲಿಲ್ಲ. ಅಲ್ಲದೆ ವಿದ್ಯುತ್ ಸೇರಿ ಇನ್ನಿತರ ವೆಚ್ಚಗಳು ಹೆಚ್ಚಾಗಿವೆ. ಇನ್ನು, ಜಲಮಂಡಳಿಗೆ ನೀರು ಸರಬರಾಜಿಗೆ ಮಾಸಿಕ 200 ಕೋಟಿ ರು. ವೆಚ್ಚವಾಗುತ್ತಿದ್ದರೆ, 2025ರವರೆಗೆ ಮಾಸಿಕ 120 ಕೋಟಿ ರು. ಮಾತ್ರ ಸಂಗ್ರಹವಾಗುತ್ತಿತ್ತು. ಇದರಿಂದ ರೆ ಜಲಮಂಡಳಿಗೆ ಮಾಸಿಕ 80 ಕೋಟಿ ರು. ನಷ್ಟವಾಗುತ್ತಿದೆ ಎಂದು ಅಂದಾಜಿಸಲಾಗಿತ್ತು. ಹೀಗಾಗಿ ಪ್ರತಿ ವರ್ಷ ಶೇ. 3ರಷ್ಟು ನೀರಿನ ದರ ಹೆಚ್ಚಿಸಲು 2025ರಲ್ಲಿಯೇ ನಿರ್ಣಯಿಸಲಾಗಿತ್ತು. ಅದರಂತೆ ಇದೀಗ ದರ ಹೆಚ್ಚಳ ಮಾಡಲಾಗಿದೆ.
ನೀರಿನ ದರ ಪರಿಷ್ಕರಣೆಯಿಂದಾಗಿ ಗೃಹ ಬಳಕೆದಾರರು 8 ಸಾವಿರ ಲೀ.ವರೆಗಿನ ಬಳಕೆಗೆ ಪ್ರತಿ ಲೀ.ಗೆ 0.15 ಪೈಸೆ ಹೆಚ್ಚಳವಾಗುವ ಅಂದಾಜಿಸಲಾಗಿದೆ. ಉಳಿದಂತೆ 8001-25 ಸಾವಿರ ಲೀ.ವರೆಗೆ ಪ್ರತಿ ಲೀ.ಗೆ 0.30 ಪೈಸೆ, 25001-50 ಸಾವಿರ ಲೀ. ಪ್ರತಿ ಲೀ.ಗೆ 0.80 ಪೈಸೆ, 50001-1 ಲಕ್ಷ ಲೀ.ಗೂ ಹೆಚ್ಚಿನ ಬಳಕೆಗೆ ಪ್ರತಿ ಲೀ.ಗೆ 1 ಪೈಸೆ ಹೆಚ್ಚಾಗಲಿದೆ.
ಗೃಹಯೇತರ ಬಳಕೆಗೆ 10 ಸಾವಿರ ಲೀ.ವರೆಗಿನ ಬಳಕೆಗೆ ಪ್ರತಿ ಲೀ.ಗೆ 1 ಪೈಸೆ, 10001-25 ಸಾವಿರ ಲೀ. ಪ್ರತಿ ಲೀ.ಗೆ 1.30 ಪೈಸೆ, 25001-50 ಸಾವಿರದವರೆಗೆ ಪ್ರತಿ ಲೀ.ಗೆ 1.50 ಪೈಸೆ, 50001-75 ಸಾವಿರದವರೆಗೆ ಪ್ರತಿ ಲೀ.ಗೆ 1.90 ಪೈಸೆವರೆಗೆ ಹೆಚ್ಚಳವಾಗುವ ನಿರೀಕ್ಷೆಯಿದೆ.
ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆಯ ಆದೇಶದಂತೆ ಸಾರ್ವಜನಿಕರು ಹಸಿ, ಒಣ, ಸ್ಯಾನಿಟರಿ ವೇಸ್ಟ್ ಹಾಗೂ ಸ್ಪೆಷಲ್ ಕೇರ್ ವೇಸ್ಟ್ಗಳನ್ನು ವಿಂಗಡಿಸಿ ನೀಡಬೇಕು. ಒಂದು ವೇಳೆ ಕಸ ವಿಂಗಡಿಸದೆ ಮಿಶ್ರ ತ್ಯಾಜ್ಯ ನೀಡಿದರೆ ಮೊದಲ ಬಾರಿಯ ತಪ್ಪಿಗೆ 500 ರು. ಹಾಗೂ ಅದೇ ತಪ್ಪು ಮುಂದುವರಿಸಿದರೆ 1 ಸಾವಿರ ರು. ದಂಡ ವಿಧಿಸಲಾಗುವುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ