ಲಕ್ಕುಂಡಿ: ಮನೆ ಅಡಿಪಾಯ ತೋಡುವಾಗ ಪುರಾತನ ನಿಧಿ ಪತ್ತೆ! 101 ದೇವಸ್ಥಾನಗಳ ಊರಲ್ಲಿದೆಯೇ ಚಿನ್ನದ ಗಣಿ?

Published : Jan 10, 2026, 05:53 PM IST
 Treasure Found in Lakkundi gadag Gold Discovered While Digging House Foundation

ಸಾರಾಂಶ

ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ, ಹಳೆಯ ಮನೆಯ ಅಡಿಪಾಯ ತೋಡುವಾಗ ಪುರಾತನ ಚಿನ್ನಾಭರಣಗಳಿದ್ದ ನಿಧಿ ಪತ್ತೆಯಾಗಿದೆ. ಈ ಆಭರಣಗಳು ಸಮೀಪದ ಲಕ್ಷ್ಮೀ ದೇವಸ್ಥಾನಕ್ಕೆ ಸೇರಿದ್ದೆಂದು ಶಂಕಿಸಲಾಗಿದ್ದು, ಕಲ್ಯಾಣ ಚಾಲುಕ್ಯರ ಕಾಲದ ಇತಿಹಾಸಕ್ಕೆ ಹೊಸ ಸೇರ್ಪಡೆಯಾಗಿದೆ.

ಲಕ್ಕುಂಡಿ (ಜ.10): ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಇಂದು ಮಧ್ಯಾಹ್ನ ಅಚ್ಚರಿ ಘಟನೆಯೊಂದು ನಡೆದಿದೆ. ಹಳೆಯ ಮನೆಯ ಅಡಿಪಾಯ ತೋಡುವಾಗ ಅಪಾರ ಪ್ರಮಾಣದ ಪುರಾತನ ನಿಧಿ ಪತ್ತೆಯಾಗಿದ್ದು, ಇಡೀ ಗ್ರಾಮದಲ್ಲಿ ಸಂಚಲನ ಮೂಡಿಸಿದೆ.

ಮನೆ ಅಡಿಪಾಯ ತೋಡುವಾಗ ಸಿಕ್ಕಿತು ನಿಧಿ!

ಗದಗ ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದ ಕಸ್ತೂರೆವ್ವ ರಿತ್ತಿ ಎನ್ನುವವರ ಮನೆಯಲ್ಲಿ ಈ ವಿಸ್ಮಯ ನಡೆದಿದೆ. ಹೊಸ ಮನೆ ನಿರ್ಮಾಣಕ್ಕಾಗಿ ಹಳೆಯ ಅಡಿಪಾಯವನ್ನು ತೋಡುತ್ತಿದ್ದಾಗ ಕಾರ್ಮಿಕರಿಗೆ ಲೋಹದ ಚೆಂಬು ಪತ್ತೆಯಾಗಿದೆ. ಕುತೂಹಲದಿಂದ ಆ ಚೆಂಬನ್ನು ಪರೀಕ್ಷಿಸಿದಾಗ ಅದರ ಒಳಗೆ ಪಳಪಳ ಹೊಳೆಯುವ ಚಿನ್ನಾಭರಣಗಳು ಕಂಡುಬಂದಿವೆ.

ಚೆಂಬಿನಲ್ಲಿ ಏನೇನು ಅಭರಣಗಳಿವೆ?

ಪತ್ತೆಯಾದ ಪುರಾತನ ಚೆಂಬಿನಲ್ಲಿ ಚಿನ್ನದ ಚೈನ್, ಬೆಲೆಬಾಳುವ ಬಳೆಗಳು ಹಾಗೂ ವಿವಿಧ ವಿನ್ಯಾಸದ ಉಂಗುರಗಳು ಪತ್ತೆಯಾಗಿವೆ. ವಿಶೇಷವೆಂದರೆ, ನಿಧಿ ಸಿಕ್ಕ ಮನೆಯ ಪಕ್ಕದಲ್ಲೇ ಪುರಾತನ ಲಕ್ಷ್ಮೀ ದೇವಸ್ಥಾನವಿದೆ. ಈ ಹಿನ್ನೆಲೆಯಲ್ಲಿ, ಸಿಕ್ಕಿರುವ ಚಿನ್ನಾಭರಣಗಳು ದೇವಸ್ಥಾನಕ್ಕೆ ಸೇರಿದ ಪುರಾತನ ಒಡವೆಗಳಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಕಲ್ಯಾಣ ಚಾಲುಕ್ಯರ ಕಾಲದ ಇತಿಹಾಸ ಹೊಂದಿರುವ ಈ ಮಣ್ಣಿನಲ್ಲಿ ಮತ್ತೆ ನಿಧಿ ಪತ್ತೆಯಾಗಿರುವುದು ಕುತೂಹಲ ಕೆರಳಿಸಿದೆ.

ಅಧಿಕಾರಿಗಳ ಭೇಟಿ ಚಿನ್ನಾಭರಣ ತಪಾಸಣೆ

ನಿಧಿ ಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪತ್ತೆಯಾದ ಆಭರಣಗಳ ಕಾಲಮಾನ ಮತ್ತು ಅವುಗಳ ಮೌಲ್ಯದ ಬಗ್ಗೆ ಸಂಶೋಧನೆ ನಡೆಸಲು ಮುಂದಾಗಿದ್ದಾರೆ. ಜಿಲ್ಲಾಡಳಿತವು ಸ್ಥಳವನ್ನು ವಶಕ್ಕೆ ಪಡೆದು, ಹೆಚ್ಚಿನ ಉತ್ಖನನ ನಡೆಸುವ ಸಾಧ್ಯತೆಯೂ ಇದೆ.

ಶಿಲ್ಪಕಲೆಯ ತೊಟ್ಟಿಲು ಲಕ್ಕುಂಡಿ ಗ್ರಾಮ

ಲಕ್ಕುಂಡಿ ಗ್ರಾಮವು 11 ಮತ್ತು 12ನೇ ಶತಮಾನದ ದೇವಸ್ಥಾನಗಳಿಗೆ ಹೆಸರುವಾಸಿಯಾಗಿದೆ. 101 ದೇವಸ್ಥಾನ ಹಾಗೂ 101 ಬಾವಿಗಳನ್ನು ಹೊಂದಿರುವ ಈ ಗ್ರಾಮವು 'ಶಿಲ್ಪಕಲೆಯ ತೊಟ್ಟಿಲು' ಎಂದೇ ಪ್ರಖ್ಯಾತಿ ಪಡೆದಿದೆ. ಕಲ್ಯಾಣ ಚಾಲುಕ್ಯರ ಕಾಲದ ವೈಭವಕ್ಕೆ ಈ ಗ್ರಾಮ ಸಾಕ್ಷಿಯಾಗಿದ್ದು, ಆಗಾಗ ಇಂತಹ ಪುರಾತನ ವಸ್ತುಗಳು ಪತ್ತೆಯಾಗುತ್ತಲೇ ಇವೆ. ಇಂದು ಪತ್ತೆಯಾದ ನಿಧಿಯು ಆ ಕಾಲದ ಆರ್ಥಿಕ ಸಮೃದ್ಧಿಯನ್ನು ನೆನಪಿಸುವಂತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

2 ಕೋಟಿ ಉದ್ಯೋಗ ಕೊಡೋದಾಗಿ ಅಧಿಕಾರ ಹಿಡಿದ ಬಿಜೆಪಿ ಗಾಂಧಿಯನ್ನೇ ಹೊರ ಹಾಕಲೆತ್ನಿಸುತ್ತಿದೆ: ಮಧು ಬಂಗಾರಪ್ಪ
ಸಿದ್ದರಾಮಯ್ಯರನ್ನು ಲೀಸ್ ಸಿಎಂ ಎಂದು ಅಣಕಿಸಿದ ಹೆಚ್‌ಡಿಕೆಗೆ ಪ್ರದೀಪ್ ಈಶ್ವರ್ ಖಡಕ್ ಪ್ರಶ್ನೆ, 'ಡ್ಯಾಡಿ' ಯಾರು?