
ಬೆಂಗಳೂರು : ರಾಜ್ಯದಲ್ಲಿ ಕೊರೆಯುವ ಚಳಿ ಜನರ ಮೇಲೆ ಪರಿಣಾಮ ಬೀರುವ ಜತೆಗೆ ತರಕಾರಿ ಬೆಳೆಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದ್ದು, ಮಾರುಕಟ್ಟೆಗಳಲ್ಲಿ ಟೊಮೆಟೊ ಬೆಲೆ ಏರಿಕೆ ಕಂಡಿದ್ದು, ಪ್ರತಿ ಕೆ.ಜಿಗೆ 70 ರು. ಮುಟ್ಟಿದೆ. ದಿನದಿಂದ ದಿನಕ್ಕೆ ಹೆಚ್ಚಳಗೊಳ್ಳುತ್ತಿರುವ ಚಳಿಯಿಂದ ಟೊಮೆಟೊ ಬೆಳೆಗೆ ಹೊಡೆತ ಬಿದ್ದಿದೆ. ಇಬ್ಬನಿ, ಶೀತಗಾಳಿಗೆ ಇಳುವರಿ ಶೇಕಡ ೪೦ರಷ್ಟು ಕುಂಠಿತಗೊಂಡಿದ್ದು, ಮಾರುಕಟ್ಟೆಗಳಿಗೆ ಈ ಹಿಂದಿನಷ್ಟು ಪೂರೈಕೆಯಾಗುತ್ತಿಲ್ಲ.
ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ, ಮಂಡ್ಯ ಜಿಲ್ಲೆಗಳಲ್ಲಿ ಟೊಮೆಟೊ ಬೆಳೆಯು ತ್ತಿದ್ದು, ಚಳಿ ಹಾಗೂ ಇಬ್ಬನಿಗೆ ಗಿಡದಲ್ಲಿ ಕಾಯಿ ಕಟ್ಟುತ್ತಿಲ್ಲ. ಇದ್ದಷ್ಟು ಕಾಯಿ ಸಹ ಚಳಿಗೆ ಹಣ್ಣಾಗುತ್ತಿಲ್ಲ, ಬೆಳವಣಿಗೆಯೂ ಕಾಣುತ್ತಿಲ್ಲ. ಪರಿಣಾಮ ಮಾರುಕಟ್ಟೆಗೆ ಪೂ ರೈಕೆ ಕಡಿಮೆಯಾಗಿದೆ. ಇದರಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಈ ಹಿಂದೆ ಕೆ.ಜಿ.ಗೆ 20 ಕ್ಕೆ ಮಾರಾಟಗೊಳ್ಳುತ್ತಿದ್ದ ಟೊಮೆಟೊ
ಇದೀಗ 60 ರಿಂದ 70 ರು.ಮುಟ್ಟಿದೆ.
ಕಳೆದ ಜೂನ್ ಹಾಗೂ ಜುಲೈ ಮಾಸದಲ್ಲಿ ಟೊಮೆಟೊ ಬೆಲೆ ಕೆ.ಜಿ.ಗೆ 15 ರಿಂದ 25 ರು.ನೊಳಗೆ ಇರುತ್ತಿತ್ತು. ನಂತರದ ದಿನಗಳಲ್ಲಿ ಇನ್ನಷ್ಟು ಕುಸಿತ ಕಂಡಿದ್ದ ಟೊಮೆಟೊ ಕೆ.ಜಿ.ಗೆ 8 ರಿಂದ 10 ಕ್ಕೆ ಖರೀದಿಯಾಗಿತ್ತು. ಬೆಲೆ ಇಳಿಕೆ ಟೊಮೆಟೊ ಬೆಳೆದ ರೈತರು, ವ್ಯಾಪಾರಿಗಳನ್ನು ಸಂಕಷ್ಟಕ್ಕೀಡು ಮಾಡಿತ್ತು. ಡಿಸೆಂಬರ್ನ ಮೊದಲ ವಾರದಲ್ಲಿ ಕೆ.ಜಿ.ಗೆ 17 ರಿಂದ 20 ರು. ಏರಿಕೆ ಕಂಡ ಟೊಮೆಟೊ 24 ರು.ಗೆ ಮಾರಾಟವಾಗಿತ್ತು.
ಹೊಸ ವರ್ಷದ ಪ್ರಾರಂಭದಲ್ಲಿ ಚೇತರಿಸಿಕೊಂಡ ಬೆಲೆ 25 ರಿಂದ 27 ರು.ಗೆ ಏರಿಕೆಯಾಗಿತ್ತು. ಜ.5ರಿಂದ ಇಲ್ಲಿಯವರೆಗೆ ದಿನದಿಂದ ದಿನಕ್ಕೆ ದಾಖಲೆಯ ಬೆಲೆ ಗಿಟ್ಟಿಸಿಕೊಳ್ಳುತ್ತಿರುವ ಟೊಮೆಟೊ ಸದ್ಯ ಮಾರುಕಟ್ಟೆಗಳಲ್ಲಿ 65 ರಿಂದ 75 ರವರೆಗೆ ಬೆಲೆ ನಿಗದಿಯಾಗಿದೆ. ಬೆಂಗಳೂರಿನ ಕೇಂದ್ರ ಬಿಂದುವಾದ ಎಪಿಎಂಸಿ ಮಾರುಕಟ್ಟೆಗೆ ಪ್ರತಿದಿನ ಬರುತ್ತಿದ್ದ ಟೊಮೆಟೊ ಪ್ರಮಾಣದಲ್ಲಿ ಶೇ.40ರಷ್ಟು ಕಡಿಮೆಯಾಗಿದೆ.
ಟೊಮೆಟೊ ಬೆಲೆ 800 ರಿಂದ 1000 ರು. ದವರೆಗೆ ನಿಗದಿಯಾಗಿದೆ. ಸಗಟು ದರ ಕೆ.ಜಿ.ಗೆ 50 ರಿಂದ 55 ರು. ನಿಗದಿಯಾಗಿದ್ದು, ಚಿಲ್ಲರೆ ಮಾರುಕಟ್ಟೆಗಳಲ್ಲಿ ಕೆ.ಜಿ. ಟೊಮೆಟೊ 60 ರಿಂದ 70 ರು.ಗೆ ಖರೀದಿ ಯಾಗುತ್ತಿದೆ. ಶೀತಕ್ಕೆ ಇಳುವರಿ ಕಡಿಮೆಯಾಗಿದ್ದು, ಬೇಡಿಕೆ ಕುದುರಿದೆ. ಎಪಿಎಂಸಿಗೆ ಮಂಡ್ಯ, ಕೋಲಾರ, ಚಿಂತಾಮಣಿ, ಚಿಕ್ಕಬಳ್ಳಾಪುರ, ಮಾಗಡಿ ಸೇರಿದಂತೆ ಬೆಂಗಳೂರು ಸುತ್ತಮುತ್ತ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಟೊಮೆಟೊ ಸರಬರಾಜಾಗುತ್ತದೆ. ಪ್ರಸ್ತುತ ದಿನಗಳಲ್ಲಿ ಟೊಮೆಟೊ ಇಳುವರಿ ಕುಂಠಿತವಾಗಿದೆ.
ತಮಿಳುನಾಡು, ನಾಸಿಕ್, ಮುಂಬೈಗೆ ಸಹ ಹೆಚ್ಚಿನ ಪ್ರಮಾಣದಲ್ಲಿ ಕಳುಹಿಸುತ್ತಿಲ್ಲ. ರಾಜ್ಯದಲ್ಲಿ ಬೆಳೆಯುತ್ತಿರುವ ಟೊಮೆಟೊ ಬೆಂಗಳೂರು ನಗರ ಹಾಗೂ ಇತರೆ ಸ್ಥಳೀಯ ಮಾರುಕಟ್ಟೆಗಳಿಗೆ ಪೂರೈಕೆಯಾಗುತ್ತಿದೆ ಎನ್ನುತ್ತಾರೆ ಎಪಿಎಂಸಿ ವರ್ತಕ ಚಂದ್ರಶೇಖರ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ