Karnataka Rain: ರಾಜ್ಯಾದ್ಯಂತ ಮಹಾಮಳೆಗೆ ಒಂದೇ ದಿನ 3 ಬಲಿ: ಒಬೊಬ್ಬರದ್ದೂ ದುರಂತ ಸಾವು

By Sathish Kumar KHFirst Published May 21, 2023, 7:56 PM IST
Highlights

ರಾಜ್ಯದಲ್ಲಿ ಭಾನುವಾರ ಸುರಿದ ಮಹಾಮಳೆಗೆ ಬೆಂಗಳೂರು, ಚಿಕ್ಕಮಗಳೂರು ಹಾಗೂ ಕೊಪ್ಪಳದಲ್ಲಿ ತಲಾ ಒಬ್ಬೊಬ್ಬರು ಮೃತಪಟ್ಟಿರುವ ದುರ್ಘಟನೆ ನಡೆದಿದೆ.

ಬೆಂಗಳೂರು (ಮೇ 21): ರಾಜ್ಯದಲ್ಲಿ ಭಾನುವಾರ ಸುರಿದ ಮಹಾಮಳೆಗೆ ಬೆಂಗಳೂರು, ಚಿಕ್ಕಮಗಳೂರು ಹಾಗೂ ಕೊಪ್ಪಳದಲ್ಲಿ ತಲಾ ಒಬ್ಬೊಬ್ಬರು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಕೊಪ್ಪಳದಲ್ಲಿ ಸಿಡಿಲು ಬರಿದು ಯುವಕ, ಬೆಂಗಳೂರಿನ ಅಂಡರ್‌ಪಾಸ್‌ನಲ್ಲಿ ನಿಂತ ನೀರಿನಲ್ಲಿ ಕಾರು ಮುಳುಗಿ ಯುವತಿ ಹಾಗೂ ಚಿಕ್ಕಮಗಳೂರಿನಲ್ಲಿ ಗಾಳಿ ಮಳೆಗೆ 5 ಮರಗಳು ಬಿದ್ದು ಮೂವರು ದುರಂತ ಸಾವನ್ನಪ್ಪಿದ್ದಾರೆ.

ಇತ್ತೀಚೆಗೆ ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಮೋಚಾ ಸೈಕ್ಲೋನ್‌ ಉಂಟಾಗಿತ್ತು. ರಾಜ್ಯದ ಮೇಲೆ ತುಸು ಪರಿಣಾಮ ಬೀರಿ ಈಶಾನ್ಯ ರಾಜ್ಯಗಳ ಮೂಲಕ ಬಾಂಗ್ಲಾದೇಶಕ್ಕೆ ಹೋಗಿತ್ತು. ಇದರ ಬೆನ್ನಲ್ಲೇ ಮುಂಗಾರು ಮಳೆ ರಾಜ್ಯಕ್ಕೆ ಆಗಮಿಸುವುದಾಗಿ ಹವಾಮಾನ ಇಲಾಖೆ ತಜ್ಞರು ಹೇಳಿದ್ದರು. ಆದರೆ, ಮುಂಗಾರು ಮಳೆ ಆಗಮಿಸುವ 10 ದಿನ ಮೊದಲೇ ಮುಂಗಾರು ಪೂರ್ವ ಮಳೆಯ ಅಬ್ಬರ ರಾಜ್ಯಾದ್ಯಂತ ಭರ್ಜರಿ ಮಳೆಯಾಗಿದೆ. ಆದರೆ, ಈ ಮಹಾಮಳೆಗೆ ವಿವಿಧೆಡೆ ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗಿವೆ.

Bengaluru Rain:ಮಹಾಮಳೆಗೆ ಸಿಲುಕಿ ಯುವತಿ ಸಾವು: ಪ್ರವಾಸಕ್ಕೆ ಬಂದವಳು ದುರಂತ ಅಂತ್ಯ

ಕೊಪ್ಪಳದಲ್ಲಿ ಸಿಡಿಲಿಗೆ ಯುವಕ ಬಲಿ:  ಭಾನುವಾರ ಮಧ್ಯಾಹ್ನ ಸುರಿದ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಮಿಶ್ರಿತ ಮಹಾಮಳೆಗೆ ಕೊಪ್ಪಳ ತಾಲೂಕಿನ ಶಿವಪುರದಲ್ಲಿ ಸಿಡಿಲು ಬಡಿದು ಬಾಲಕನೊಬ್ಬ ಸಾವನ್ನಪ್ಪಿದ್ದಾರೆ. ಮೃತ ಬಾಲಕನನ್ನು ಶ್ರೀಕಾಂತ ದೊಡ್ಡನಗೌಡ್ರ ಮೇಟಿ (16) ಎಂದು ಗುರುತಿಸಲಾಗಿದೆ. ಇಂದು ಮಧ್ಯಾಹ್ನ ಮಳೆ ಬರುತ್ತಿದ್ದಾಗ ರಸ್ತೆಯಲ್ಲಿದ್ದ ಮರದ ಬಳಿ ಯುವಕ ನಿಂತುಕೊಂಡಿದ್ದನು. ಆಗ ಏಕಾಏಕಿ ಸಿಡಿಲು ಬಡಿದು ತೀವ್ರವಾಗಿ ಗಾಯಗೊಂಡು ಬಿದ್ದಿದ್ದನು. ಗಾಯಗೊಂಡ ಶ್ರೀಕಾಂತನನ್ನು ಜಿಲ್ಲಾಸ್ಪತ್ರೆಗೆ ರವಾನಿಸುವಾಗ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಈ ಘಟನೆಯು ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮುಂಗಾರು ಮಳೆಗೆ ಮಲೆನಾಡಲ್ಲಿ ಮೊದಲ ಬಲಿ:  ಮುಂಗಾರು ಪೂರ್ವ ಮಳೆಗೆ ಮಲೆನಾಡಿನಲ್ಲಿ ಮೊದಲ ಬಲಿಯಾಗಿದೆ. ಮಳೆಯ ನಡುವೆಯೇ ಬೈಕ್ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ವಯಕ್ತಿಯ ಮೇಲೆ ಬೃಹತ್‌ ಮರ ಬಿದ್ದಿದ್ದು, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಘಟನೆ ಮೂಡಿಗೆರೆ ತಾಲೂಕಿನ ಚಿಕ್ಕಹಳ್ಳ ಬಳಿ ನಡೆದಿದೆ. ಮೃತ ವ್ಯಕ್ತಿಯನ್ನು ವೇಣುಗೋಪಾಲ್ (45) ಎಂದು ಗುರುತಿಸಲಾಗಿದೆ. ಚಿಕ್ಕಹಳ್ಳ ಗ್ರಾಮದಲ್ಲಿ ಹೋಮ್‌ ಸ್ಟೇ ನಡೆಸುತ್ತಿದ್ದ ವೇಣುಗೋಪಾಲ್, ಅಲ್ಲಿಂದ ಬರುವಾಗ ಮರ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಒಂದರ ಮೇಲೊಂದರಂತೆ 5 ಮರ ಬಿದ್ದಿವೆ: ಮೂಲತಃ ಉತ್ತರ ಕರ್ನಾಟಕ ಮೂಲದ ವೇಣುಗೋಪಾಲ್, ಮೂಡಿಗೆರೆಯಲ್ಲಿ ಮದುವೆಯಾಗಿ ಇಲ್ಲೇ ವಾಸವಿದ್ದರು. ಚಿಕ್ಕಹಳ್ಳ ಗ್ರಾಮದಲ್ಲಿ ಹೋಮ್‌ ಸ್ಟೇ ನಡೆಸುವ ಜೊತೆಗೆ ಮೂಡಿಗೆರೆಯಲ್ಲಿ ಬಳೆ ಅಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದರು. ಇನ್ನು ಮೂಡಿಗೆರೆಯಿಂದ ಹೋಮ್‌ಸ್ಟೇಗೆ ಬೈಕ್‌ನಲ್ಲಿ ಹೋಗುವಾದ ಇನ್ನು 200 ಮೀ ದೂರವಿದೆ ಎನ್ನುವಾಗ ರಸ್ತೆಯ ಬದಿಯಲ್ಲಿದ್ದ ಬೃಹತ್‌ ಮರ ಬೈಕ್‌ನ ಮೇಲೆ ಬಿದ್ದಿದೆ. ಒಂದು ಬಿದ್ದು ಗಾಯಗೊಂಡಿದ್ದ ವ್ಯಕ್ತಿಯ ಮೇಲೆ ಮೇಲಿಂದ ಮೇಲೆ ಒಟ್ಟು 5 ಮರಗಳು ಬಿದ್ದಿವೆ. ಇನ್ನು ಮರದಡಿ ಸಿಲುಕಿ ತೀವ್ರ ಗಾಯಗೊಂಡ ವೇಣುಗೋಪಾಲ್‌ ತಪ್ಪಿಸಿಕೊಳ್ಳಲಾಗದೇ ಸ್ಥಳದಲ್ಲೇ ಸಾವನ್ನಪ್ಪಿದ್ದರು. 

Bengaluru Traffic: ಜೀರೋ ಟ್ರಾಫಿಕ್‌ ಹಿಂಪಡೆದ ಸಿಎಂ ಸಿದ್ದರಾಮಯ್ಯ

ಬೆಂಗಳೂರಿನ ನೀರಲ್ಲಿ ಕಾರು ಮುಳುಗಿ ಯುವತಿ ಸಾವು: ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಪ್ರವಾಸಕ್ಕೆ ಬಂದಿದ್ದ 6 ಮಂದಿ ಕುಟುಂಬ ಸದಸ್ಯರು ಕಾರಿನಲ್ಲಿ ಹೋಗುವಾಗ ಕೆ.ಆರ್. ವೃತ್ತದ ಬಳಿ ಅಂಡರ್‌ಪಾಸ್‌ನಲ್ಲಿ ನೀರು ಸಂಗ್ರಹವಾಗಿದೆ. ಇನ್ನು ಕಾರು ಅಂಡರ್‌ಪಾಸ್‌ ದಾಟುವಾಗ ಆಫ್‌ ಆಗಿದ್ದು, ಕೆಲವೇ ಕ್ಷಣಗಳಲ್ಲಿ ಹೆಚ್ಚಿನ ನೀರು ಸಂಗ್ರಹಗೊಂಡು ಕಾರು ಮುಳುಗಿದೆ. ಕಾರಿನ ಬಾಗಿಲು ತೆಗೆಯಲು ಸಾಧ್ಯವಾಗದೇ ಎಲ್ಲರೂ ಕಿರುಚಾಡಿದ್ದಾರೆ. ಆಗ, ಕಾರಿನೊಳಗೆ ನೀರು ಕೂಡ ನುಗ್ಗಿದ್ದು, ಯುವತಿ ಭಾನುರೇಖಾ (22) ಎಂಬ ಯುವತಿ ನೀರು ಸೇವಿಸಿ ಉಸಿರಾಟ ಸಮಸ್ಯೆಯಿಂದ ಬಳಲುತ್ತಾ ಗಂಭೀರ ಸ್ಥಿತಿ ತಲುಪಿದ್ದಳು. ಸ್ಥಳೀಯರ ಸಹಾಯದಿಂದ ಅವರನ್ನು ರಕ್ಷಣೆ ಮಾಡಲಾಗಿದ್ದು, ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಆಸ್ಪತ್ರೆ ಸಿಬ್ಬಂದಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡದೇ ನಿರ್ಲಕ್ಷ್ಯ ತೋರಿದ್ದರಿಂದ ಯುವತಿ ಮೃತಪಟ್ಟಿದ್ದಾಳೆ.

click me!