
ವಿಧಾನಸಭೆ (ಮಾ.11) ‘ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸರ್ಕಾರವು ಖಾಸಗಿ ಕಟ್ಟಡಗಳಿಗೆ ಡ್ರೋನ್ ಕ್ಯಾಮೆರಾ ಮೂಲಕ ಸಮೀಕ್ಷೆ ನಡೆಸಿ, ಹೆಚ್ಚುವರಿ ಆಸ್ತಿ ತೆರಿಗೆ ಮತ್ತು ದಂಡ ವಿಧಿಸಿ ಶೋಕಾಸ್ ನೋಟಿಸ್ ನೀಡಲಾಗುತ್ತಿದೆ. ಇದು ತೆರಿಗೆ ಭಯೋತ್ಪಾದನೆ’ ಎಂದು ಬಿಜೆಪಿ ಸದಸ್ಯರು ಕಿಡಿಕಾರಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ಜನರ ಲೂಟಿ ಮಾಡುವುದು, ಶೋಷಣೆ ಮಾಡುವುದು ನಮ್ಮ ಉದ್ದೇಶವಲ್ಲ. ಡ್ರೋನ್ ಸಮೀಕ್ಷೆಯಲ್ಲಿ ಲೋಪಗಳಾಗಿದ್ದರೆ, ಅಂಥವರು ಬಂದು ಅರ್ಜಿ ಸಲ್ಲಿಸಲಿ. ಖಂಡಿತ ಸಮಸ್ಯೆ ಬಗೆಹರಿಸುತ್ತೇವೆ’ ಎಂದು ಭರವಸೆ ನೀಡಿದರು.
ಪ್ರಶ್ನೋತ್ತರ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಿ.ಕೆ. ರಾಮಮೂರ್ತಿ, ಡ್ರೋನ್ ಮೂಲಕ ಸರ್ವೆ ನಡೆಸಿ ಆಸ್ತಿ ತೆರಿಗೆ ಪಾವತಿಸುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಉಪಮುಖ್ಯಮಂತ್ರಿಗಳ ಪ್ರಕಾರವೇ 24,874 ಆಸ್ತಿಗಳಿಗೆ ನೋಟಿಸ್ ನೀಡಲಾಗಿದೆ ಎಂದರು.
ದನಿಗೂಡಿಸಿದ ಬಿಜೆಪಿಯ ಎಸ್. ಸುರೇಶ್ ಕುಮಾರ್, ಇದು ಆಸ್ತಿ ತೆರಿಗೆ ಭಯೋತ್ಪಾದನೆ. ಈ ತೆರಿಗೆ ನೋಟಿಸ್ ವಾಪಸು ಪಡೆಯಬೇಕು ಎಂದು ಒತ್ತಾಯಿಸಿದರು.
ಅದಕ್ಕೆ ಶಿವಕುಮಾರ್, ಸ್ವಯಂ ಘೋಷಿತ ಆಸ್ತಿ (ಎಸ್ಎಸ್ಎಸ್) ತೆರಿಗೆ ಪದ್ಧತಿ ತಂದವನು ನಾನು. ಸ್ವಯಂ ಘೋಷಣೆ ವೇಳೆ ಹಲವರು ಕಟ್ಟಡದ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ನೆಲ ಮಹಡಿಗೆ ಮಾತ್ರ ತೆರಿಗೆ ಕಟ್ಟಿ ಅದರ ಮೇಲೆಯೂ ಕಟ್ಟಿಕೊಂಡಿರುತ್ತಾರೆ. ಅಂತಹವರನ್ನು ಪತ್ತೆ ಹಚ್ಚಿ ತೆರಿಗೆ ಬಾಕಿ ಉಳಿಸಿಕೊಂಡವರು ಒಂದೇ ಬಾರಿಗೆ ಬಾಕಿ ಪಾವತಿಸಲು ಒಟಿಎಸ್ ಅವಕಾಶವೂ ನೀಡುತ್ತಿದ್ದೇವೆ. ಜತೆಗೆ ನಿಮ್ಮ ಅವಧಿಯಲ್ಲಿದ್ದ ಶೇ. 24 ರಷ್ಟು ದಂಡವನ್ನು ಶೇ.9ಕ್ಕೆ ಇಳಿಸಿದ್ದೇವೆ. ತಪ್ಪಾಗಿ ಸರ್ವೆ ಮಾಡಿ ಯಾರಿಗಾದರೂ ಸಮಸ್ಯೆ ಆಗಿದ್ದರೆ ಅರ್ಜಿ ಕೊಡಲಿ. ಸಮಸ್ಯೆ ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ ಮಧ್ಯಪ್ರವೇಶಿಸಿ, ಇದು ತುಘಲಕ್ ದರ್ಬಾರ್ ಆಯಿತು. ಇದು ಅನಾಗರಿಕ ನೀತಿ, ಡ್ರೋನ್ ಮೂಲಕ ಸಮೀಕ್ಷೆಯಲ್ಲಿ ವ್ಯತ್ಯಾಸ ಆಗಿಯೇ ಆಗುತ್ತದೆ. ಇದು ಒಳ್ಳೆಯದಲ್ಲ. ಭೌತಿಕವಾಗಿ ಸಮೀಕ್ಷೆ ಮಾಡಬೇಕು ಎಂದರು.
ಇದು ತೆರಿಗೆ ಭಯೋತ್ಪಾದನೆ. ಒಂದೊಂದು ಪಾಲಿಕೆಗೂ ₹509 ಕೋಟಿ, ₹1000 ಕೋಟಿ ತೆರಿಗೆ ಸಂಗ್ರಹಿಸಿ ಕೊಡುವಂತೆ ಸರ್ಕಾರ ಕೇಳಿದೆ. ಸದ್ಯಕ್ಕೆ ಡ್ರೋನ್ ಸಮೀಕ್ಷೆ ಸ್ಥಗಿತ ಮಾಡಿ. ಭೌತಿಕವಾಗಿ ಸಮೀಕ್ಷೆ ಮಾಡಿ ತೆರಿಗೆ ಸಂಗ್ರಹಿಸಿ. ಸಂಪನ್ಮೂಲ ಸಂಗ್ರಹಕ್ಕೆ ಬೇರೆ ದಾರಿ ಹುಡುಕಿ ಎಂದು ಸಲಹೆ ನೀಡಿದರು.
ಇದಕ್ಕೆ ಡಿ.ಕೆ.ಶಿವಕುಮಾರ್, ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಅಡಿಯೇ ದಂಡ ಮತ್ತು ಬಡ್ಡಿ ವಿಧಿಸಲಾಗುತ್ತಿದೆ. ಹೆಚ್ಚುವರಿ ತೆರಿಗೆ ಮತ್ತು ದಂಡವನ್ನು ವಿಧಿಸುತ್ತಿಲ್ಲ. ಭೌತಿಕ ಸಮೀಕ್ಷೆಯನ್ನೂ ಮಾಡುತ್ತೇವೆ ಎಂದರು.
ಶೋಕಾಸ್ ನೋಟಿಸ್ ನೀಡಿರುವ ಆಸ್ತಿ ವಿವರ:
ಕೇಂದ್ರ ನಗರ ಪಾಲಿಕೆ- 1760
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ