ಎಟಿಎಂ ಸೆಕ್ಯುರಿಟಿ ಗಾರ್ಡ್‌ಗೆ ಚಿನ್ನದ ಪದಕ : ಏನೀ ಸಾಧನೆ..?

Published : Nov 14, 2018, 09:40 AM IST
ಎಟಿಎಂ ಸೆಕ್ಯುರಿಟಿ ಗಾರ್ಡ್‌ಗೆ ಚಿನ್ನದ ಪದಕ : ಏನೀ ಸಾಧನೆ..?

ಸಾರಾಂಶ

ರಾತ್ರಿ ಪಾಳಿಯಲ್ಲಿ ಎಟಿಎಂ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯ ನಿರ್ಹಿಸುವ ಸೆಕ್ಯೂರಿಟಿ ಗಾರ್ಡ್ ಓರ್ವನ ಅಭೂತಪೂರ್ವ ಸಾಧನೆಯಿದು. 

ಕೊಪ್ಪಳ : ಎಟಿಎಂನಲ್ಲಿ ಸೆಕ್ಯುರಿಟಿ ಗಾರ್ಡ್‌ ಆಗಿ ರಾತ್ರಿ ಕೆಲಸ ಮಾಡುತ್ತಲೇ ಹಗಲು ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಯೊಬ್ಬ ಬಳ್ಳಾರಿ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕನ್ನಡ ಸ್ನಾತಕೋತ್ತರ (ಎಂ.ಎ,) ಪದವಿಯಲ್ಲಿ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕ ಬಾಚಿಕೊಂಡಿದ್ದಾನೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಕಾಲು ಚಾಚಿ ಮಲಗಲು ಆಗದಷ್ಟುಜೋಪಡಿ ಇದ್ದರೂ ಓದುವ ಛಲ ಬಿಡದ ಯುವಕ ಇಂದು ಸ್ಫೂರ್ತಿದಾಯಕ ಸಾಧನೆ ಮಾಡಿದ್ದಾನೆ.

ಈ ಸಾಧನೆ ಮಾಡಿದ್ದು ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಗೂಂಡೂರು ಗ್ರಾಮದ ರಮೇಶ ಚಲವಾದಿ. ಚಿಕ್ಕವನಿಂದಲೂ ಓದು ಎಂದರೆ ಈತನಿಗೆ ಇಷ್ಟ. ಆದರೆ, ಮನೆಯಲ್ಲಿನ ಬಡತನದಿಂದ ಮಗನ ಓದಿಗೆ ಪಾಲಕರು ಬೇಡ ಎಂದಿದ್ದರು. ಆದರೆ, ಇವರ ಓದಿನ ಹಸಿವು ಮಾತ್ರ ಹಮ್ಮಿಯಾಗಿರಲಿಲ್ಲ. ಕೂಲಿ ಮಾಡುತ್ತಲೇ ಶಾಲಾ, ಕಾಲೇಜಿನಲ್ಲಿ ತೇರ್ಗೆಡೆಯಾಗಿದ್ದ.

ಸದ್ಯ ಗಂಗಾವತಿಯ ಸಿಂಡಿಕೇಟ್‌ ಬ್ಯಾಂಕ್‌ನ ಎಟಿಎಂನಲ್ಲಿ ರಾತ್ರಿ ವೇಳೆ ಸೆಕ್ಯುರಿಟಿ ಗಾರ್ಡ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಇದೇ ಸಮಯದಲ್ಲಿ ಗಂಗಾವತಿ ಕೊಲ್ಲಿ ನಾಗೇಶ್ವರರಾವ್‌ ಪದವಿ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದ. ಇದೀಗ 2017-18ನೇ ಸಾಲಿನ ಕನ್ನಡ ಎಂಎ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ಈತ ವಿಶ್ವವಿದ್ಯಾಲಯಕ್ಕೆ ಪ್ರಥಮ ರಾರ‍ಯಂಕ್‌ ಪಡೆದು ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾನೆ. ಸ್ನಾತಕೋತ್ತರ ಪದವಿಯ ಕನ್ನಡ ವಿಭಾಗದಲ್ಲಿ 2200 ಅಂಕಗಳಿಗೆ 1734 ಅಂಕ ಪಡೆಯುವ ಮೂಲಕ ಶೇ.78.08ರಷ್ಟುಸಾಧನೆ ಮಾಡಿ ವಿಶ್ವವಿದ್ಯಾಲಯಕ್ಕೆ ಪ್ರಥಮ ರಾರ‍ಯಂಕ್‌ ಪಡೆದಿದ್ದಾನೆ. ಈ ಮೂಲಕ ಕಲಿಕೆಗೆ ಬಡತನ ಅಡ್ಡಿಯಾಗದು ಎಂಬುದನ್ನು ಸಾಧಿಸಿ ತೋರಿಸಿದ್ದಾನೆ. ಇದಕ್ಕೂ ಮುನ್ನ ಕೂಲಿ ಮಾಡುತ್ತಲೇ ಬಿ.ಇಡಿ ಸಹ ಮುಗಿಸಿದ್ದಾರೆ.

ಬೆಳಗ್ಗೆ ಕಾಲೇಜ್‌ಗೆ ಹಾಜರ್‌:

ರಾತ್ರಿ ಸೆಕ್ಯುರಿಟಿ ಗಾರ್ಡ್‌ ಕೆಲಸಕ್ಕೆ ಹೋಗುತ್ತಿದ್ದರೂ ನಿತ್ಯ ತಪ್ಪದೆ ಕಾಲೇಜಿಗೆ ಹೋಗುತ್ತಿದ್ದ. ಕಾಲೇಜಿನ ಎಲ್ಲ ಚಟುವಟಿಕೆಯಲ್ಲಿಯೂ ಲವಲವಿಕೆಯಿಂದ ಭಾಗವಹಿಸುತ್ತಿದ್ದ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದ. ಕವನ ಬರೆಯುವ ಹವ್ಯಾಸವೂ ಇತ್ತು. ಟೆಸ್ಟ್‌ ಸೇರಿದಂತೆ ಯಾವುದೇ ಪರೀಕ್ಷೆಗಳನ್ನು ಸರಳವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ರಾತ್ರಿ ಪೂರ್ತಿ ಕೆಲಸ ಮಾಡಿದರೂ ಕಾಲೇಜಿನಲ್ಲಿ ಇಂಥ ಸಾಧನೆ ಮಾಡಿದ್ದು, ವಿಶಿಷ್ಟವಾಗಿದೆ.

ಬಡತನದಲ್ಲಿಯೇ ಬೆಳೆದ ಪ್ರತಿಭೆ:

ತಂದೆ-ತಾಯಿ ಕೂಲಿ ಮಾಡಿಕೊಂಡು ಐವರು ಮಕ್ಕಳನ್ನು ಸಾಕುತ್ತಿದ್ದಾರೆ. ಈ ಐದು ಮಕ್ಕಳಲ್ಲಿ ರಮೇಶ ಮೊದಲನೆಯವರು. ಓದಿನೊಂದಿಗೆ ಮನೆ ಜವಾಬ್ದಾರಿ ನಿಭಾಯಿಸಬೇಕಿತ್ತು. ಹೀಗಾಗಿ ಎಟಿಎಂನಲ್ಲಿ ಸೆಕ್ಯುರಿಟಿ ಗಾರ್ಡ್‌ ಆಗಿ ದುಡಿಯುತ್ತಲೇ ತನ್ನ ಓದಿನ ಕನಸನ್ನು ಪೂರ್ಣಗೊಳಿಸಿಕೊಂಡಿದ್ದಾರೆ.

ರಮೇಶ ಅತ್ಯಂತ ಪ್ರತಿಭಾವಂತನಾಗಿದ್ದ. ರಾತ್ರಿ ಎಟಿಎಂನಲ್ಲಿ ಕೆಲಸ ಮಾಡುತ್ತಿದ್ದರೂ ನಿತ್ಯವೂ ಕಾಲೇಜಿಗೆ ತಪ್ಪದೇ ಆಗಮಿಸ್ತುತಿದ್ದ. ನಿಜಕ್ಕೂ ಪ್ರತಿಭೆಗೆ ಗೌರವ ದೊರೆತಿದೆ.

-ಮಮ್ಜಾತ್‌ ಬೇಗಂ, ಉಪನ್ಯಾಸಕರು


ವರದಿ :  ಸೋಮರಡ್ಡಿ ಅಳವಂಡಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ
ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ