
ಹಾವೇರಿ (ಅ.22) : ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಶಾಲಿಯಾಗಿದ್ದು, ಹಾವೇರಿ ಸೇರಿ ರಾಜ್ಯದಲ್ಲಿ ೨೦ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಕಾನೂನು ಸಂಸದೀಯ, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಜನರ ವಿಶ್ವಾಸಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಸರ್ವಾನುಮತದ ಒಗ್ಗಟ್ಟಿನ ಮಂತ್ರ ಪಕ್ಷವನ್ನು ಗೆಲ್ಲಿಸುತ್ತದೆ. ಮೋದಿ ಅವರಿಗೆ ನಮ್ಮ ರಾಜ್ಯದಲ್ಲಿ ಸುಳ್ಳು ಹೇಳಿ ಒಲಿಸಿಕೊಳ್ಳಲು ಸಾಧ್ಯವಾಗಲಿಲ್ಲ, ಮಹಾ ಸುಳ್ಳು ಹೇಳುವ ಮೋದಿ ಅವರನ್ನು ಈ ಸಾರಿ ಚುನಾವಣೆಯಲ್ಲಿ ಜನತೆ ಕೆಳಗಿಳಿಸಲಿದ್ದಾರೆ ಎಂದರು.
ಬರ ಸ್ಥಿತಿ ಎದುರಿಸಲು ಸಕಲ ಸಿದ್ಧತೆ: ಸಚಿವ ಎಚ್.ಕೆ. ಪಾಟೀಲ
ಕೇಂದ್ರ ಸರ್ಕಾರ ರಾಜ್ಯದ ನೀರಾವರಿ ಯೋಜನೆಗಳಾದ ಕಾವೇರಿ, ಕೃಷ್ಣಾ, ಮಹದಾಯಿ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿದೆ. ಮುಂಬರುವ ದಿನಗಳಲ್ಲಿ ಬಿಜೆಪಿಗೆ ಭ್ರಮನಿರಸನ ಆಗುವಂತೆ ಜನತೆ ತೀರ್ಮಾನ ಮಾಡುತ್ತಾರೆ. ನಮ್ಮದು ನುಡಿದಂತೆ ನಡೆಯುವ ಸರ್ಕಾರ. ಇಂಡಿಯಾ ಆದ ಮೇಲೆ ಬಿಜೆಪಿ ತತ್ತರಿಸಿ ಹೋಗಿದೆ. ರಾಜ್ಯದಲ್ಲಿ ವಿಪಕ್ಷ ನಾಯಕನನ್ನು ಮಾಡಲು ಬಿಜೆಪಿಗೆ ಆಗುತ್ತಿಲ್ಲ, ಕಾಂಗ್ರೆಸ್ಸಿನಲ್ಲಿ ಬಣವಿಲ್ಲ, ವ್ಯತ್ಯಾಸ ಇಲ್ಲ, ಇದೆಲ್ಲ ಬಿಜೆಪಿ ಸೃಷ್ಟಿ ಎಂದರು.
ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮಾತನಾಡಿ, ಹಾವೇರಿ ಲೋಕಸಭಾ ಕ್ಷೇತ್ರದ ಪೂರ್ವಭಾವಿ ಸಭೆ ಮಾಡಲು ಬಂದಿದ್ದೇವೆ. ಜಿಲ್ಲೆಯಲ್ಲಿ ಮೂರು ಬಾರಿ ಕಾಂಗ್ರೆಸ್ ಸೋತಿದೆ. ಹೀಗಾಗಿ ಈ ಸಾರಿ ನನ್ನನ್ನು ವೀಕ್ಷಕರನ್ನಾಗಿ ಹಾಕಿದ್ದಾರೆ. ಈ ಬಾರಿ ಗೆಲ್ಲಬೇಕಾಗಿದೆ. ಅದಕ್ಕಾಗಿ ಪೂರ್ವಭಾವಿ ಸಭೆ ಮಾಡುತ್ತಿದ್ದೇವೆ ಎಂದರು.
ಹಾವೇರಿ ಆಯ್ತು, ಗದಗ ಜಿಲ್ಲೆಯಲ್ಲೂ ಮೋಡ ಬಿತ್ತನೆ: ಸಚಿವ ಎಚ್.ಕೆ. ಪಾಟೀಲ ಮಾಹಿತಿ
ಮೋದಿ ಬರೀ ಸುಳ್ಳು ಹೇಳುತ್ತಾ ೧೦ವರ್ಷ ಕಳೆದಿದ್ದಾರೆ. ಸುಳ್ಳು ಹೇಳುವುದರಲ್ಲಿ ಆಸ್ಕರ್ ಅವಾರ್ಡ್ ಕೊಡುವುದಾದರೆ ಅದನ್ನು ಪ್ರಧಾನಿ ಮೋದಿ ಅವರಿಗೆ ನೀಡಬೇಕು. ಜನರ ಖಾತೆಗೆ ₹೧೫ ಲಕ್ಷ ಹಾಕುತ್ತೇವೆ ಎಂದು ಹೇಳಿ ಈವರೆಗೂ ₹೧೫ ರುಪಾಯಿ ಹಾಕಿಲ್ಲ, ಯುವಕರಿಗೆ ಉದ್ಯೋಗ ಕೊಟ್ಟಿಲ್ಲ, ಹಾವೇರಿ ಕ್ಷೇತ್ರದಿಂದ ಯಾರಿಗೇ ಟಿಕೆಟ್ ಕೊಟ್ಟರೂ ಒಮ್ಮತದಿಂದ ಕೆಲಸ ಮಾಡುತ್ತೇವೆ. ಬಿಜೆಪಿ ಬಗ್ಗೆ ಜನತೆ ಭ್ರಮನಿರಸನಗೊಂಡಿದ್ದು, ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದು ರಾಹುಲ್ಗಾಂಧಿ ಪ್ರಧಾನಿ ಆಗಲಿದ್ದಾರೆ.
ಸಲೀಂ ಅಹ್ಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ