ತಾಂತ್ರಿತ ಸಮಸ್ಯೆ: 1 ಗಂಟೆ ತಡವಾಗಿ ಡ್ರೈ ರನ್ ಆರಂಭ

Kannadaprabha News   | Asianet News
Published : Jan 09, 2021, 06:41 AM IST
ತಾಂತ್ರಿತ ಸಮಸ್ಯೆ: 1 ಗಂಟೆ ತಡವಾಗಿ ಡ್ರೈ ರನ್ ಆರಂಭ

ಸಾರಾಂಶ

ನಗರದಲ್ಲಿ ಡ್ರೈ ರನ್‌ ತಡವಾಗಿ ಆರಂಭ | ಐಸಿಎಂಆರ್‌ ಪೋರ್ಟಲ್‌ನಲ್ಲಿ ತಾಂತ್ರಿತ ಸಮಸ್ಯೆಯಿಂದ 1 ತಾಸು ತಡವಾಗಿ ಶುರು | ಈ ಬಾರಿ ಒಟಿಪಿ ಸಮಸ್ಯೆ ಪರಿಹಾರ

ಬೆಂಗಳೂರು(ಜ.09): ಬಿಬಿಎಂಪಿ ವ್ಯಾಪ್ತಿಯಲ್ಲಿ ಎರಡನೇ ಹಂತದ ಕೋವಿಡ್‌ ಲಸಿಕೆ ತಾಲೀಮು(ಡ್ರೈ ರನ್‌) ತಂತ್ರಾಂಶದ ಸಮಸ್ಯೆಯಿಂದಾಗಿ ನಿಗದಿತ ಅವಧಿಗಿಂತ ತಡವಾಗಿ ಆರಂಭಗೊಂಡರೂ ಸಹ ಯಶಸ್ವಿಯಾಗಿ ನಡೆದಿದೆ ಎಂದು ಬಿಬಿಎಂಪಿ ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯ ಆರೋಗ್ಯಾಧಿಕಾರಿ ವಿಜೇಂದ್ರ ತಿಳಿಸಿದ್ದಾರೆ.

ಬೊಮ್ಮನಹಳ್ಳಿಯ ಸಿಂಗಸಂದ್ರ(ಪಿಎಚ್‌ಸಿ), ಪೂರ್ವ ವಲಯದಲ್ಲಿ ಹಲಸೂರಿನ ರೆಫರಲ್‌ ಆಸ್ಪತ್ರೆ, ಮಹದೇವಪುರ ವಲಯದಲ್ಲಿ ಕೆ.ಆರ್‌.ಪುರದ ಸಾರ್ವಜನಿಕ ಆಸ್ಪತ್ರೆ, ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ ಕೆಂಗೇರಿಯ ಸಾರ್ವಜನಿಕ ಆರೋಗ್ಯ ಕೇಂದ್ರ, ಪಶ್ಚಿಮ ವಲಯದಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜು, ದಕ್ಷಿಣ ವಲಯದಲ್ಲಿ ಕಿಮ್ಸ್‌ ವೈದ್ಯಕೀಯ ಕಾಲೇಜು, ದಾಸರಹಳ್ಳಿ ವ್ಯಾಪ್ತಿಯಲ್ಲಿ ಸಪ್ತಗಿರಿ ವೈದ್ಯಕೀಯ ಕಾಲೇಜು ಮತ್ತು ಯಲಹಂಕ ವಲಯದಲ್ಲಿ ಆಸ್ಟರ್‌ ಸಿಎಂಐ ಆಸ್ಪತ್ರೆಗಳಲ್ಲಿ ಕೋವಿಡ್‌ ಲಸಿಕೆ ತಾಲೀಮು ನಡೆಯಿತು.

ಡ್ರಗ್ಸ್‌ ಮಾರುತ್ತಿದ್ದ ಕಾಂಗೋ, ನೈಜೀರಿಯಾ ಪ್ರಜೆಗಳ ಬಂಧನ

ಐಸಿಎಂಆರ್‌ ಪೋರ್ಟಲ್‌ನಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಬೆಳಗ್ಗೆ 9ರ ಬದಲು ತಾಲೀಮು 10ಕ್ಕೆ ಆರಂಭವಾಯಿತು. ಬೆಂಗಳೂರು ವೈದ್ಯಕೀಯ ಕಾಲೇಜಿನ ವಾಣಿ ವಿಲಾಸ ಆವರಣದಲ್ಲಿ ತಾಲೀಮು ನಡೆಯಿತು. ಕಾಯುವ ಕೊಠಡಿ (ವೇಟಿಂಗ್‌ ರೂಂ), ಲಸಿಕೆ ಕೊಠಡಿ ಹಾಗೂ ಪರಿಶೀಲನಾ ಕೊಠಡಿಗಳ ನಿರ್ಮಾಣ ಮಾಡಲಾಗಿತ್ತು. ಸ್ಥಳದಲ್ಲಿಯೇ ನೋಂದಣಿಗೆ ಅವಕಾಶವಿರಲಿಲ್ಲ. ಗುರುವಾರವೇ ನೋಂದಣಿ ಮಾಡಿಕೊಂಡು ಓಟಿಪಿ ಪಡೆದ 25 ಆರೋಗ್ಯ ಕಾರ್ಯಕರ್ತರು ಲಸಿಕಾ ತಾಲೀಮಿನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಪ್ರತಿ ಕೇಂದ್ರದಲ್ಲಿ ತಲಾ ಐದು ಮಂದಿ ಸಿಬ್ಬಂದಿ ಕಾರ್ಯನಿರ್ವಹಿಸಿದ್ದು, ಎಂಟು ಕೇಂದ್ರಗಳಲ್ಲಿ 200 ಆರೋಗ್ಯ ಕಾರ್ಯಕರ್ತರು ತಾಲೀಮಿನಲ್ಲಿ ಭಾಗಿಯಾಗಿದ್ದರು.

ಕಳೆದ ಬಾರಿ ಮೊದಲ ಹಂತದ ಲಸಿಕಾ ತಾಲೀಮಿನಲ್ಲಿ ಎದುರಾದ ಸಮಸ್ಯೆಗಳನ್ನು ಪರಿಹರಿಸಲು ಆದ್ಯತೆ ನೀಡಲಾಗಿತ್ತು. ಕಳೆದ ಬಾರಿ ಲಸಿಕಾ ಫಲಾನುಭವಿಗಳ ನೋಂದಣಿ ಬಳಿಕ ಓಟಿಪಿ ಬರುವುದು ತಡವಾಗಿತ್ತು. ಆದರೆ ಈ ಸಲ ತಾಂತ್ರಿಕ ದೋಷ ಸರಿಪಡಿಸಲಾಗಿತ್ತು. ಜತೆಗೆ ಹಿಂದಿನ ದಿನವೇ ನೋಂದಣಿ ಆಗಿದ್ದರಿಂದ ಓಟಿಪಿ ಸಮಸ್ಯೆಯುಂಟಾಗಲಿಲ್ಲ.

ಸಚಿವರ ಭೇಟಿ

ಕೊರೋನಾ ಲಸಿಕಾ ತಾಲೀಮು ಹಿನ್ನೆಲೆಯಲ್ಲಿ ಹೆಬ್ಬಾಳದಲ್ಲಿರುವ ಆಸ್ಟರ್‌ ಆಸ್ಪತ್ರೆಗೆ ಭೇಟಿ ನೀಡಿದ ಆರೋಗ್ಯ ಸಚಿವ ಡಾ ಕೆ.ಸುಧಾಕರ್‌ ಅವರು ಡ್ರೈರನ್‌ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಲಿನಿಕಲ್‌ ಟ್ರಯಲ್‌ ಸೇರಿದಂತೆ ಲಸಿಕೆಗೆ ಮೂರು ಹಂತದ ಪರಿಶೀಲನೆ ನಡೆಸಬೇಕಾಗುತ್ತದೆ. ವಿಜ್ಞಾನಿಗಳು, ಸಂಶೋಧಕರ ಮೇಲೆ ನಂಬಿಕೆ ಇಡೋಣ. ಆದಷ್ಟುಬೇಗ ಲಸಿಕೆ ಎಲ್ಲರಿಗೂ ಲಭ್ಯವಾಗಲಿದೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗ್ರೇಟರ್‌ ಬೆಂಗಳೂರು.. ವೈಜ್ಞಾನಿಕವಾಗಿ ಕಸ ಸಂಸ್ಕರಣೆ, ಆತಂಕ ಬೇಡ: ಡಿ.ಕೆ.ಶಿವಕುಮಾರ್‌
ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ ಪ್ರಕರಣ: ಎಸ್ಐಟಿ ತನಿಖೆಗೆ ಸಿ.ಟಿ.ರವಿ ಆಗ್ರಹ