
ಉತ್ತರ ಕನ್ನಡ (ಡಿ.13):: ಕೇಂದ್ರ ನವೋದಯ ಶಾಲೆಯ 6ನೇ ತರಗತಿ ಪ್ರವೇಶಾತಿ ಪರೀಕ್ಷೆಯಲ್ಲಿ ಕರ್ತವ್ಯ ನಿರತನಲ್ಲದ ಶಾಲಾ ಶಿಕ್ಷಕನೊಬ್ಬ ತನ್ನ ಮಗನಿಗೆ ಅಕ್ರಮವಾಗಿ ಉತ್ತರಗಳನ್ನು ಹೇಳಿಕೊಡುತ್ತಿದ್ದ ಘಟನೆ ಉತ್ತರಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದ ಕಾರ್ಮೆಲ್ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಶಾಲೆಯ ಶಿಕ್ಷಕನಾದ ಚರ್ಚಿಲ್ ಸಂತಾನ್ ದಾಲ್ಮೆಟ್ ಎಂಬಾತನು ಪರೀಕ್ಷಾ ಕೇಂದ್ರಕ್ಕೆ ಅಕ್ರಮವಾಗಿ ಪ್ರವೇಶಿಸಿ, ಅಲ್ಲಿನ ಸೂಪರ್ವೈಸರ್ ಜೊತೆ ಕೈಜೋಡಿಸಿ ತನ್ನ ಮಗನಿಗೆ ಉತ್ತರಗಳನ್ನು ಹೇಳಿಕೊಡುತ್ತಿದ್ದನು ಎಂದು ಆರೋಪಿಸಲಾಗಿದೆ. ಈ ಪರೀಕ್ಷೆಯು ನವೋದಯ ಶಾಲೆಗೆ 5ನೇ ತರಗತಿ ವಿದ್ಯಾರ್ಥಿಗಳ ಪ್ರವೇಶಾತಿಗಾಗಿ ನಡೆಯುತ್ತಿತ್ತು. ಡ್ಯೂಟಿ ಇಲ್ಲದಿದ್ದರೂ ಶಿಕ್ಷಕ ಚರ್ಚಿಲ್ ಪರೀಕ್ಷಾ ಕೇಂದ್ರದಲ್ಲಿ ಈ ರೀತಿ ಮೋಸ ಮಾಡುತ್ತಿರುವುದು ಇತರ ವಿದ್ಯಾರ್ಥಿಗಳ ಪೋಷಕರ ಕಣ್ಣಿಗೆ ಬಿದ್ದಿದೆ.
ಶಿಕ್ಷಕ ಚರ್ಚಿಲ್ನ ಈ ವರ್ತನೆಯಿಂದ ಇತರ ವಿದ್ಯಾರ್ಥಿಗಳ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಪ್ರಮೋದ್ ಮಹಾಲೆ ಅವರಿಗೆ ಪೋಷಕರು ದೂರು ಸಲ್ಲಿಸಿದ್ದಾರೆ.
ಇದೇ ವೇಳೆ, ಶಿಕ್ಷಕ ಚರ್ಚಿಲ್ ಸಂತಾನ್ ದಾಲ್ಮೆಟ್ನ ಮೇಲೆ ಬಡ್ಡಿ ವ್ಯವಹಾರ ನಡೆಸುತ್ತಿರುವುದು ಮತ್ತು ಚೆಕ್ ಬೌನ್ಸ್ ಪ್ರಕರಣಗಳನ್ನು ದಾಖಲಿಸಿರುವ ಕುರಿತು ಕೂಡ ಸ್ಥಳೀಯರು ದೂರು ನೀಡಿದ್ದಾರೆ.
ಈ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ, ಈ ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಅಕ್ರಮದಲ್ಲಿ ಭಾಗಿಯಾದ ಶಿಕ್ಷಕ ಚರ್ಚಿಲ್ ಸಂತಾನ್ ದಾಲ್ಮೆಟ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಬಿಇಒ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ