
ಬೆಂಗಳೂರು (ಮೇ.16) : ಆದಾಯ ತೆರಿಗೆ ಇಲಾಖೆ ಇ-ಫೈಲಿಂಗ್ ಪೋರ್ಟಲ್ನ ನ್ಯೂನ್ಯತೆ ದುರ್ಬಳಕೆ ಮಾಡಿಕೊಂಡು ಅಸಲಿ ತೆರಿಗೆದಾರರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದು ಕೋಟ್ಯಂತರ ರುಪಾಯಿ ವರ್ಗಾಯಿಸಿಕೊಂಡು ವಂಚಿಸುತ್ತಿದ್ದ ಖತರ್ನಾಕ್ ವಂಚಕನೊಬ್ಬನನ್ನು ಸಿಐಡಿ ಸೈಬರ್ ಕ್ರೈಂ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಹಾಸನ ಜಿಲ್ಲೆ ಹಿರಿಸಾವೆ ಮೂಲದ ದಿಲೀಪ್ ರಾಜೇಗೌಡ(32) (Dileep rajegowda hirisave) ಬಂಧಿತ ವಂಚಕ. ಆರೋಪಿಯು ವ್ಯಕ್ತಿಯೊಬ್ಬರ ಆದಾಯ ತೆರಿಗೆ ಮರುಪಾವತಿ ವಿವರಗಳನ್ನು ಬದಲಾಯಿಸಿ .1.41 ಕೋಟಿಯನ್ನು ನಕಲಿ ಬ್ಯಾಂಕ್ ಖಾತೆ(Fake bank account)ಗೆ ವರ್ಗಾಯಿಸಿಕೊಂಡು ವಂಚಿಸಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಸಿಐಡಿ ಆರ್ಥಿಕ ಅಪರಾಧಗಳ ವಿಭಾಗದ (CID Economic Offenses Wing)ಪೊಲೀಸ್ ಅಧೀಕ್ಷಕ ಎಂ.ಡಿ.ಶರತ್ ಅವರ ನೇತೃತ್ವದಲ್ಲಿ ಸೈಬರ್ ಕ್ರೈಂ(Cyber crime) ವಿಭಾಗದ ಅಧಿಕಾರಿಗಳು ಧಾರವಾಡದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ವಾಟ್ಸಾಪ್ಗೆ ಬಂದ ಲಿಂಕ್ ಕ್ಲಿಕ್ ಮಾಡಿ 6.16 ಲಕ್ಷ ಕಳೆದುಕೊಂಡ ಯುವಕ
ಆರು ಮಂದಿಗೆ ವಂಚನೆ:
ಬಿಇ ಪದವೀಧರನಾದ ದಿಲೀಪ್ ಆರಂಭದಲ್ಲಿ ಖಾಸಗಿ software ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಬಳಿಕ ಸರ್ಕಾರಿ ವೆಬ್ಸೈಟ್ಗಳ ಲೋಪಗಳನ್ನು ತಿಳಿದುಕೊಂಡು ವಂಚನೆಯನ್ನೇ ವೃತ್ತಿಯಾಗಿಸಿಕೊಂಡಿದ್ದ. ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್(E-Filing Portal)ನ ನ್ಯೂನತೆ ತಿಳಿದುಕೊಂಡು ಆರು ಮಂದಿ ತೆರಿಗೆದಾರರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದು ಸುಮಾರು .3.60 ಕೋಟಿ ಹಣ ವರ್ಗಾಯಿಸಿಕೊಂಡು ವಂಚಿಸಿರುವುದು ತನಿಖೆಯಿಂದ ಬಯಲಾಗಿದೆ.
ಅಷ್ಟೇ ಅಲ್ಲದೆ, ಈ ಹಿಂದೆ ನಕಲಿ ದಾಖಲೆ ಸೃಷ್ಟಿಸಿ ಹಲವು ಬ್ಯಾಂಕ್ಗಳು ಹಾಗೂ ಫೈನಾನ್ಸ್ ಕಂಪನಿಗಳಲ್ಲಿ ವಾಹನ ಸಾಲ ಪಡೆದು ವಂಚಿಸಿರುವುದು ಗೊತ್ತಾಗಿದೆ. ಈತನ ವಿರುದ್ಧ ಕರ್ನಾಟಕ, ಮಹಾರಾಷ್ಟ್ರ, ಗೋವಾ, ತೆಲಂಗಾಣ ರಾಜ್ಯಗಳಲ್ಲಿ ಸುಮಾರು 15ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿವೆ. ಕೆಲ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ ಆರೋಪಿಯು ಜಾಮೀನು ಪಡೆದು ಹೊರಬಂದ ಬಳಿಕವೂ ಮತ್ತೆ ವಂಚನೆ ಕೃತ್ಯಗಳನ್ನು ಮುಂದುವರೆಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಂಚನೆ ಹೇಗೆ?
ಸಾಫ್್ಟವೇರ್ ಇಂಜಿನಿಯರ್ ಆಗಿರುವ ಆರೋಪಿ ದಿಲೀಪ್ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್ನ ನ್ಯೂನತೆಗಳನ್ನು ತಿಳಿದುಕೊಂಡು ಅಸಲಿ ತೆರಿಗೆದಾರರ ಖಾತೆಗಳಿಗೆ ಅಕ್ರಮ ಪ್ರವೇಶ ಪಡೆಯುತ್ತಿದ್ದ. ಬಳಿಕ ತೆರಿಗೆದಾರರ ಪ್ಯಾನ್ ಸಂಖ್ಯೆ ಸೇರಿದಂತೆ ಇತರೆ ಮಾಹಿತಿ ಪಡೆದು, ಆದಾಯ ತೆರಿಗೆ ಮರುಪಾವತಿ ವಿವರಗಳನ್ನು ಮಾರ್ಪಡಿಸುತ್ತಿದ್ದ. ಬಳಿಕ ನಕಲಿ ಕೆವೈಸಿ ದಾಖಲೆಗಳನ್ನು ಸೃಷ್ಟಿಸಿ ಅಸಲಿ ತೆರಿಗೆದಾರನ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದು ಹಣ ವರ್ಗಾಯಿಸಿಕೊಂಡು ವಂಚಿಸುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಹೆಚ್ಚಿನ ತನಿಖೆಯಿಂದ ಮತ್ತಷ್ಟುಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೋಪ ಸರಿಪಡಿಸಲು ಸೂಚನೆ
ಆದಾಯ ತೆರಿಗೆ ಇಲಾಖೆ ಇ-ಫೈಲಿಂಗ್ ಪೋರ್ಟಲ್ನಲ್ಲಿನ ಲೋಪಗಳನ್ನು ಸರಿಪಡಿಸುವಂತೆ ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳು ಆದಾಯ ತೆರಿಗೆ ಇಲಾಖೆಗೆ ಸೂಚಿಸಿದ್ದಾರೆ. ಅಂತೆಯೆ ಆರೋಪಿಯು ಆಸ್ತಿ ನೋಂದಣಿ ವಿವರಗಳಿರುವ ರಾಜ್ಯ ಸರ್ಕಾರದ ಕಾವೇರಿ ಆನ್ಲೈನ್ ಪೋರ್ಟಲ್ ದುರುಪಯೋಗ ಪಡಿಸಿಕೊಂಡಿರುವುದರಿಂದ ಈ ಬಗ್ಗೆಯೂ ಸಂಬಂಧಪಟ್ಟಅಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ.
ಶೋಕಿಲಾಲ
ಆರೋಪಿ ದಿಲೀಪ್ ಶೋಕಿಲಾಲನಾಗಿದ್ದಾನೆ. ನೆರೆ ರಾಜ್ಯದ ಕ್ಯಾಸಿನೋ, ಪ್ರವಾಸಿ ಸ್ಥಳಗಳಿಗೆ ತೆರಳಿ ಮೋಜು-ಮಸ್ತಿ ಮಾಡುತ್ತಿದ್ದ. ಐಷಾರಾಮಿ ಜೀವನ ಹಾಗೂ ಶೋಕಿಗಳಿಗೆ ಸುಲಭವಾಗಿ ಹಣ ಹೊಂದಿಸಲು ವಂಚನೆ ದಾರಿ ಹಿಡಿದಿದ್ದ. ಸಾಫ್್ಟವೇರ್ ಎಂಜಿನಿಯರ್ ಆಗಿರುವುದರಿಂದ ಸೈಬರ್ ವಂಚನೆಯನ್ನೇ ವೃತ್ತಿಯಾಗಿಸಿಕೊಂಡಿದ್ದ.
ಓದಿರೋದು 12ನೇ ಕ್ಲಾಸ್: ದುಡಿಯೋದು ದಿನಕ್ಕೆ 3 - 5 ಕೋಟಿ ರೂ.; 5 ಸ್ಟಾರ್ ಹೋಟೆಲ್ನಲ್ಲಿ ವಾಸ!
ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ತಪ್ಪದೇ ಆನ್ಲೈನ್ ಸುರಕ್ಷತಾ ಕ್ರಮಗಳ ಬಗ್ಗೆ ತಿಳಿದುಕೊಳ್ಳಬೇಕು. ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವಾಗ ಅಗತ್ಯ ಮುಂಜಾಗ್ರತೆ ವಹಿಸಬೇಕು.
-ಕೆ.ವಿ.ಶರತ್ಚಂದ್ರ, ಸಿಐಡಿ ಪೊಲೀಸ್ ಮಹಾನಿರ್ದೇಶಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ