ಮತಾಂತರ: ಸುಪ್ರೀಂ ರೀತಿ ಹಿಂದೆಯೇ ಎಚ್ಚರಿಸಿದ್ದ ಅಂಬೇಡ್ಕರ್ ಮಾತು ನಿಜವಾಯಿತೇ?

Kannadaprabha News   | Kannada Prabha
Published : Mar 28, 2026, 12:47 PM IST
Religious conversion

ಸಾರಾಂಶ

Supreme Court on Religious Conversion ಮತಾಂತರಗೊಂಡರೆ ಪರಿಶಿಷ್ಟ ಜಾತಿ ಸೌಲಭ್ಯ ಸಿಗುವುದೇ? ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪು ಮತ್ತು ಅಂಬೇಡ್ಕರ್ ಅವರ ಎಚ್ಚರಿಕೆಯ ಕುರಿತು ಸಂಪೂರ್ಣವಾಗಿ ತಿಳಿಯಿರಿ.

ಡಾ। ಸುಧಾಕರ ಹೊಸಳ್ಳಿ ಮೈಸೂರು, ಸಂವಿಧಾನ ತಜ್ಞರು

ಇದೇ ಮಾರ್ಚ್ 24ರಂದು ಮತಾಂತರದ ಕುರಿತಾಗಿ ಈ ಹಿಂದೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಎತ್ತಿ ಹಿಡಿದ ಸರ್ವೋಚ್ಚ ನ್ಯಾಯಾಲಯವು ಮತಾಂತರದ ಕುರಿತಾದ ಸಾಂವಿಧಾನಿಕ ವ್ಯಾಖ್ಯಾನವನ್ನು ಮತ್ತೊಮ್ಮೆ ಸಮರ್ಥಿಸಿದೆ.

2025ರ ಏ.30ರಂದು ಆಂಧ್ರಪ್ರದೇಶ ಹೈಕೋರ್ಟ್ ಕ್ರೈಸ್ತ ಧರ್ಮಕ್ಕೆ ಮತಾಂತರವಾದ ಪಾದ್ರಿ ಒಬ್ಬರು ಎಸ್‌ಸಿಎಸ್ ಟಿ ದೌರ್ಜನ್ಯ ಕಾಯ್ದೆಯ ಅಡಿಯಲ್ಲಿ ರಕ್ಷಣೆ ಪಡೆಯಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದ್ದರು. ಸದರಿ ತೀರ್ಪಿನ ವಿರುದ್ಧ ದೂರುದಾರ ಆನಂದ್ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ಪ್ರಸ್ತುತ ಸರ್ವೋಚ್ಚ ನ್ಯಾಯಾಲಯವು ಹೈಕೋರ್ಟ್ ಆದೇಶವನ್ನು ಮಾನ್ಯ ಮಾಡಿ ಒಬ್ಬ ವ್ಯಕ್ತಿ ಏಕಕಾಲದಲ್ಲಿ ತನ್ನ ಮೂಲ ಧರ್ಮದ ಜೊತೆಗೆ ಮತ್ತೊಂದು ಧರ್ಮದ ಜೊತೆ ಸಂಬಂಧ ಇಟ್ಟುಕೊಳ್ಳಲು ಮತ್ತು ಎರಡನ್ನು ಜೊತೆಯಲ್ಲಿ ಆಚರಣೆ ಮಾಡಲು ಸಾಧ್ಯವಿಲ್ಲ ಎಂದು ಮಹತ್ವದ ತೀರ್ಪು ನೀಡಿದೆ.

ಒಬ್ಬ ಹಿಂದೂ, ಬೌದ್ಧ ಸಿಖ್ ಮತ ಪಂಥಗಳನ್ನು ಹೊರತುಪಡಿಸಿ ಬೇರೆ ಧರ್ಮಕ್ಕೆ ಮತಾಂತರವಾದವರಿಗೆ ಪರಿಶಿಷ್ಟ ಜಾತಿ ಸೌಲಭ್ಯ ನೀಡುವುದು ಅಸಾಧ್ಯ ಮತ್ತು ಅಂತಹ ಕ್ರಮ ಅಸಂವಿಧಾನಿಕ ಎಂದು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಹಿಂದಿನ ತೀರ್ಪುಗಳಲ್ಲೂ ಉಲ್ಲೇಖ:

ಸೂಸೈ ವರ್ಸಸ್‌ ಯೂನಿಯನ್‌ ಆಫ್‌ ಇಂಡಿಯಾ( 1986)ಪ್ರಕರಣದಲ್ಲೂ 1950ರ ಭಾರತ ಸರ್ಕಾರ ಕಾಯ್ದೆಯ, ಕ್ರೈಸ್ತರಾದವರು ಪರಿಶಿಷ್ಟ ಜಾತಿ ಸೌಲಭ್ಯ ವಂಚಿತರಾಗುತ್ತಾರೆ ಎಂಬ ನಿಯಮವನ್ನೇ ಮಾನ್ಯ ಮಾಡಲಾಗಿದೆ.

ಮೇ 2025 ರಲ್ಲಿ ಮಧುರೈ ನ್ಯಾಯಾಲಯವು ಕೂಡ ಮತಾಂತರವಾದ ನಂತರ ಪರಿಶಿಷ್ಟ ಜಾತಿ ಪಡೆಯುವುದು ಸಾಂವಿಧಾನಿಕ ವಂಚನೆ ಎಂಬ ತೀರ್ಪು ನೀಡಿದೆ. ಡಿಸೆಂಬರ್ 2025 ರಲ್ಲಿ ಅಲಹಾಬಾದ್ ನ್ಯಾಯಾಲಯವು ಜಿತೇಂದ್ರ ಶಾನೆ ಮತ್ತು ಉತ್ತರ ಪ್ರದೇಶ ಸರ್ಕಾರ ಪ್ರಕರಣದಲ್ಲಿ ಇಂತಹದ್ದೇ ತೀರ್ಪು ನೀಡಿದೆ.

ಅಗಸ್ಟ್ 3 202ರಂದು ಕೇಂದ್ರ ಸಾಮಾಜಿಕ ನ್ಯಾಯಮಂತ್ರಿ ಎನ್‌. ನಾರಾಯಣಸ್ವಾಮಿ ಸಂಸತ್ತಿನಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸುತ್ತಾ ಬೌದ್ಧ ಸಿಖ್ ಹೊರತುಪಡಿಸಿ ಉಳಿದ ಎಲ್ಲಾ ಮತಾಂತರವೂ ಪರಿಶಿಷ್ಟ ಜಾತಿಯ ಸಂವಿಧಾನಿಕ ರಕ್ಷಣೆಗಳಿಂದ ಹೊರತದ್ದು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ನ್ಯಾಯಾಲಯಗಳ ಈ ತೀರ್ಪು ಮತಾಂತರದ ಕುರಿತಾಗಿ ಸ್ಪಷ್ಟ ಸಂದೇಶ ನೀಡಿದ್ದು ಆಸೆ ಆಮಿಷಗಳನ್ನು ಒಡ್ಡಿ ದಲಿತರನ್ನು ಮತಾಂತರಗೊಳಿಸುವ ದುರುಳರಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ.

ಇಂದು ನ್ಯಾಯಾಲಯವು ನೀಡಿರುವ ಎಚ್ಚರಿಕೆಯನ್ನೇ 90 ವರ್ಷಗಳ ಹಿಂದೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರರು, ನೀಡಿದ್ದರೂ ಎಂಬುದು ದೂರದೃಷ್ಟಿಯ ದರ್ಶನವಾಗಿದೆ.

ಹಿಂದೆಯೇ ಹೇಳಿದ್ದ ಅಂಬೇಡ್ಕರ್‌:

‘ಇಸ್ಲಾಂ-ಕ್ರಿಶ್ಚಿಯನ್‌ ಧರ್ಮ ಸೇರಿದರೆ ಮೋಸ ಹೋಗುತ್ತೀರಿ’ ಎಂದಿದ್ದರು ಅಂಬೇಡ್ಕರರು. ಹೌದು, ಅಂದು 1936 ಮೇ 11 ರಂದು ಅಂಬೇಡ್ಕರರು ವಾರ್ಧಾದಲ್ಲಿ ನಿಮ್ನ ವರ್ಗದ ಜನಗಳನ್ನು ಕುರಿತು ಮಾತನಾಡುವಾಗ , ಮತಾಂತರದ ಅಪಾಯವನ್ನು ಹೇಗೆ? ಎದುರಿಸಬೇಕೆಂಬ ಮಾರ್ಗದರ್ಶನವನ್ನು ಮಾಡಿದ್ದರು.

‘ನಾನು ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮಗಳನ್ನು ಯಾರಿಗೂ ಸೇರಲು ಒತ್ತಾಸೆ ಮಾಡುತ್ತಿಲ್ಲ. ಯಾರೇ ಆಗಲಿ, ಇನ್ನೊಬ್ಬರಿಗೆ ಇಸ್ಲಾಂ ಅಥವಾ ಬೇರೆ ಯಾವುದೇ ಸೇರಲು ಶಿಫಾರಸ್ಸು ಮಾಡಿದರೆ ಶಿಫಾರಸ್ಸನ್ನು ಪಾಲಿಸುವವರು ಮೋಸ ಹೋಗುತ್ತಾರೆ. ಅದಕ್ಕೆ ನಾನು ಹೊಣೆಗಾರನಾಗುವುದಿಲ್ಲ. ನಾನು ಮತಾಂತರದ ಬಗ್ಗೆ ಘೋಷಣೆ ಮಾಡಿರುವುದು ನಿಜ.ಆದರೆ ಯಾವುದೇ ನಿರ್ದಿಷ್ಟ ಧರ್ಮ, ಪಂಥಗಳಿಗೆ ಸೇರಿಕೊಳ್ಳಿ ಎಂದು ಇದುವರೆಗೆ ಹೇಳಿಲ್ಲ. ಅಲ್ಲಿಯವರೆಗೂ ಎಲ್ಲರೂ ಮತಾಂತರದ ಬಗ್ಗೆ ಪ್ರಚಾರ ಮಾಡಲೇಬೇಕು. ಆದರೆ ಇಂಥದ್ದೇ ಧರ್ಮ ಅಥವಾ ಮತಕ್ಕೆ ಮತಾಂತರ ಆಗಬೇಕೆಂದು ಪ್ರಚಾರ ಮಾಡಬೇಡಿ. ನಾನು ಘೋಷಣೆ ಮಾಡಿದ ನಂತರವೇ ಅಸ್ಪೃಶ್ಯರೆಲ್ಲರೂ ಮುಂದುವರಿಯಬೇಕು’ ಎಂದು ತಿಳಿ ಹೇಳಿದ್ದರು.

ಅಂಬೇಡ್ಕರರು ಮತಾಂತರದ ಬಗ್ಗೆ ಪ್ರಸ್ತಾಪ ಮಾಡಿದ್ದ ತಕ್ಷಣವೇ ಮುಸ್ಲಿಮರು, ಕ್ರಿಶ್ಚಿಯನ್ನರು ದೊಡ್ಡ ದೊಡ್ಡ ಆಮಿಷಗಳನ್ನು ಮುಂದಿಟ್ಟು ತಮ್ಮ ತಮ್ಮ ಧರ್ಮಕ್ಕೆ ಸೇರುವಂತೆ ದುಂಬಾಲು ಬಿದ್ದರೂ, ಒಬ್ಬ ಉತ್ಕೃಷ್ಟ ರಾಷ್ಟ್ರ ಪ್ರೇಮಿಯಾದ ಅಂಬೇಡ್ಕ ರರು ‘ನಾನು ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಸೇರುವುದು ಮತಾಂತರವಾಗುವುದಿಲ್ಲ, ಬದಲಾಗಿ ಅದು ರಾಷ್ಟ್ರಾಂತರವಾಗುತ್ತದೆ. ನಾನು ರಾಷ್ಟ್ರಾಂತರವನ್ನು ಎಂದಿಗೂ ಒಪ್ಪುವುದಿಲ್ಲ’ ಎಂದು ಅವರ ಆಹ್ವಾನವನ್ನು ತಿರಸ್ಕರಿಸಿದ್ದರು.

ಈ ನೆಲೆಯಲ್ಲಿ ಕೋರ್ಟ್ ನ ತೀರ್ಪುಗಳು ಮತ್ತು ಅಂಬೇಡ್ಕರರ ಎಚ್ಚರಿಕೆಯೂ ಅಕ್ರಮ ಮತಾಂತರಕ್ಕೆ ತಡೆಗೋಡೆಯಾಗಿ ನಿಂತಿರುವುದನ್ನು ಶೋಷಿತರು, ದಮನಿತರು ಪ್ರಜ್ಞಾಪೂರ್ವಕವಾಗಿ ಅರ್ಥೈಸಿಕೊಳ್ಳುವ ಅಗತ್ಯ ಸೃಜಿಸಿದೆ.

ಆಧಾರ

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು

ಭಾಷಣಗಳು, ಸಂಪುಟ 18

ಪುಟ- 342,343

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Breaking News: ಮೈಸೂರಿನಲ್ಲಿ ದೆಹಲಿ ಪೊಲೀಸರ ಬಿಗ್ ಆಪರೇಷನ್; ದೇಶಾದ್ಯಂತ ಹುಸಿ ಬಾಂಬ್ ಬೆದರಿಕೆ ಹಾಕುತ್ತಿದ್ದ ಕಿಡಿಗೇಡಿ ಕೊನೆಗೂ ಅರೆಸ್ಟ್!
ಕ್ಷೌರಕ್ಕೆ ಹೋದಾಗ ಜಾತಿ ಕೇಳಿ ಬೈದು ತಳ್ಳಿದರು, ಅಂದಿನಿಂದ ನನ್ನ ಕ್ಷೌರ ನಾನೇ ಮಾಡಿಕೊಳ್ತೇನೆ: ಛಲವಾದಿ ನಾರಾಯಣಸ್ವಾಮಿ!