ರಾಜ್ಯದ ಸಾರಿಗೆ ಇಲಾಖೆಗೆ ಈಗ ಸೌರವಿದ್ಯುತ್ತಿನ ಬಲ

Kannadaprabha News   | Kannada Prabha
Published : Aug 02, 2025, 08:22 AM IST
Solar Park

ಸಾರಾಂಶ

ಪರಿಸರಸ್ನೇಹಿ ವಾಹನಗಳ ಬಳಕೆಗೆ ಉತ್ತೇಜನ ನೀಡುವುದು ಸಾರಿಗೆ ಇಲಾಖೆ ಕಾರ್ಯವಾಗಿದೆ. ಅದರ ಜತೆಗೆ ರಾಜ್ಯ ಸಾರಿಗೆ ಇಲಾಖೆ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಕಟ್ಟಡಗಳಲ್ಲಿ ನವೀಕರಿಸಬಹುದಾದ ವಿದ್ಯುತ್‌ ಬಳಕೆಗೆ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ಮುಂದಾಗಿದೆ

ಗಿರೀಶ್‌ ಗರಗ

ಬೆಂಗಳೂರು : ಪರಿಸರಕ್ಕೆ ಹಾನಿಯುಂಟು ಮಾಡುವ ವಾಹನಗಳ ಮೇಲೆ ಕ್ರಮ ಕೈಗೊಳ್ಳುವುದು, ಎಲೆಕ್ಟ್ರಿಕ್‌ ವಾಹನ ಸೇರಿದಂತೆ ಪರಿಸರಸ್ನೇಹಿ ವಾಹನಗಳ ಬಳಕೆಗೆ ಉತ್ತೇಜನ ನೀಡುವುದು ಸಾರಿಗೆ ಇಲಾಖೆ ಕಾರ್ಯವಾಗಿದೆ. ಅದರ ಜತೆಗೆ ರಾಜ್ಯ ಸಾರಿಗೆ ಇಲಾಖೆ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಕಟ್ಟಡಗಳಲ್ಲಿ ನವೀಕರಿಸಬಹುದಾದ ವಿದ್ಯುತ್‌ ಬಳಕೆಗೆ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ಮುಂದಾಗಿದೆ.

ರಾಜ್ಯದಲ್ಲಿ ಸದ್ಯ 3.30 ಕೋಟಿ ವಾಹನಗಳು ನೋಂದಣಿಯಾಗಿವೆ. ಅದರಲ್ಲಿ ಬೆಂಗಳೂರಿನಲ್ಲಿಯೇ 1.20 ಕೋಟಿಗೂ ಹೆಚ್ಚಿನ ವಾಹನಗಳಿವೆ. ಅಲ್ಲದೆ, ರಾಜ್ಯದಲ್ಲಿನ ಮಾಲಿನ್ಯದ ಪ್ರಮಾಣದಲ್ಲಿ ಶೇ.25ಕ್ಕಿಂತ ಅಧಿಕ ವಾಹನಗಳಿಂದ ಉಂಟಾಗುತ್ತಿದೆ. ಅದನ್ನು ತಡೆಯುವ ಹೊಣೆ ಸಾರಿಗೆ ಇಲಾಖೆಯದ್ದಾಗಿದೆ. ಅದಕ್ಕಾಗಿಯೇ ಸಾರಿಗೆ ಇಲಾಖೆ ಎಲೆಕ್ಟ್ರಿಕ್‌ ವಾಹನಗಳ ಬಳಕೆಗೆ ಉತ್ತೇಜಿಸುತ್ತಿದೆ. ಅದರ ಜತೆಗೆ ಇದೀಗ ಬೇರೆಯವರಿಗೆ ಮಾದರಿಯಾಗುವಂತೆ ಕ್ರಮ ಕೈಗೊಳ್ಳಲು ಸಾರಿಗೆ ಇಲಾಖೆ ಮುಂದಾಗಿದ್ದು, ಇಲಾಖೆಗೆ ಸೇರಿದ 14 ಕಟ್ಟಡಗಳಲ್ಲಿ ಸಾಂಪ್ರದಾಯಿಕ ವಿದ್ಯುತ್‌ ಬಳಕೆಯನ್ನು ನಿಷೇಧಿಸಿ, ನವೀಕರಿಸಬಹುದಾದ ವಿದ್ಯುತ್‌ ಬಳಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.

400 ಕಿಲೋ ವ್ಯಾಟ್‌ ವಿದ್ಯುತ್‌ ಉತ್ಪಾದನೆ: ರಾಜ್ಯದಲ್ಲಿ ಸಾರಿಗೆ ಇಲಾಖೆಗೆ ಸಂಬಂಧಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸೇರಿದಂತೆ 35ಕ್ಕೂ ಹೆಚ್ಚಿನ ಸ್ವಂತ ಕಟ್ಟಡಗಳಿವೆ. ಅವುಗಳಲ್ಲಿ ಪ್ರತಿ ತಿಂಗಳು ಅಂದಾಜು 3 ಸಾವಿರ ಕಿಲೋ ವ್ಯಾಟ್‌ಗೂ ಹಚ್ಚಿನ ವಿದ್ಯುತ್‌ ಬಳಕೆಯಾಗುತ್ತಿದೆ. ಅದನ್ನು ತಪ್ಪಿಸುವ ಉದ್ದೇಶದೊಂದಿಗೆ ಹಂತಹಂತವಾಗಿ ಸಾರಿಗೆ ಇಲಾಖೆ ಕಟ್ಟಡಗಳಲ್ಲಿ ಸೋಲಾರ್‌ ವಿದ್ಯುತ್‌ ಬಳಕೆಗೆ ಉತ್ತೇಜಿಸಲು ನಿರ್ಧರಿಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಸೋಲಾರ್‌ ಪ್ಯಾನೆಲ್‌ ಅಳವಡಿಕೆಗೆ ಟೆಂಡರ್‌ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಅದರ ಮೊದಲ ಹಂತವಾಗಿ ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಬೆಳಗಾವಿ, ಮೈಸೂರು ಸಾರಿಗೆ ವಿಭಾಗ ವ್ಯಾಪ್ತಿಯ 14 ಆರ್‌ಟಿಒ, ಎಆರ್‌ಟಿಒ ಕಚೇರಿಗಳ ಕಟ್ಟಡಗಳಲ್ಲಿ ಸೋಲಾರ್‌ ವಿದ್ಯುತ್‌ ಪ್ಯಾನೆಲ್‌ಗಳ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಅದರಿಂದಾಗಿ ವಿದ್ಯುತ್‌ ಬಳಕೆ ಶುಲ್ಕ ಪಾವತಿಯನ್ನು ಉಳಿಸುವುದರ ಜತೆಗೆ ನವೀಕರಿಸಬಹುದಾದ ವಿದ್ಯುತ್‌ ಬಳಕೆಗೆ ಉತ್ತೇಜಿಸುವ ಉದ್ದೇಶವನ್ನು ಸಾರಿಗೆ ಇಲಾಖೆ ಹೊಂದಿದೆ.ಹಸಿರು ಸೆಸ್‌ನಿಂದ ವೆಚ್ಚ:ಸಾರಿಗೆ ಇಲಾಖೆ ರೂಪಿಸಿರುವ ಯೋಜನೆ ಅನುಷ್ಠಾನಕ್ಕೆ ವಾಹನ ನೋಂದಣಿ ವೇಳೆ ಸಂಗ್ರಹಿಸಲಾಗುವ ಹಸಿರು ಸೆಸ್‌ ಮೊತ್ತವನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

ಸೋಲಾರ್‌ ಪ್ಯಾನೆಲ್‌ ಅಳವಡಿಕೆಯು ಪರಿಸರ ಸ್ನೇಹಿ ಕಾರ್ಯವಾದ ಕಾರಣ ಹಸಿರು ಸೆಸ್‌ ಬಳಕೆ ಮಾಡಲಾಗುತ್ತದೆ. ಅಲ್ಲದೆ, ಮಾಹಿತಿಯಂತೆ ಕಳೆದ 5 ವರ್ಷಗಳಲ್ಲಿ (2025ರ ಮಾರ್ಚ್‌ ಅಂತ್ಯದವರೆಗೆ) ರಾಜ್ಯದಲ್ಲಿ 420 ಕೋಟಿ ರು.ಗೂ ಹೆಚ್ಚಿನ ಮೊತ್ತವನ್ನು ಹಸಿರು ಸೆಸ್‌ ರೂಪದಲ್ಲಿ ಸಂಗ್ರಹಿಸಲಾಗಿದೆ.

ಅದರಲ್ಲಿ ಸುಮಾರು 51 ಕೋಟಿ ರು.ಗಳನ್ನು ಮಾತ್ರ ಪರಿಸರ ಸ್ನೇಹಿ ಕಾರ್ಯಕ್ಕೆ ಬಳಸಲಾಗಿದೆ. ಇದರ ಬಗ್ಗೆ ಸಾಕಷ್ಟು ಆಕ್ಷೇಪಗಳು ವ್ಯಕ್ತವಾಗಿದ್ದವು. ಹೀಗಾಗಿ ಸಾರಿಗೆ ಇಲಾಖೆ ಇದೀಗ ಹಸಿರು ಸೆಸ್ ಮೊತ್ತದಲ್ಲಿ ನವೀಕರಿಸಬಹುದಾದ ಇಂಧನವಾದ ಸೋಲಾರ್‌ ವಿದ್ಯುತ್‌ ಬಳಸಿ ಹಸಿರು ಸೆಸ್‌ ಅನ್ನು ಪರಿಸರ ಸ್ನೇಹಿ ಕಾರ್ಯಕ್ಕೆ ವ್ಯಯಿಸಲಾಗುತ್ತಿದೆ ಎಂದು ತೋರಿಸಲು ನಿರ್ಧರಿಸಲಾಗಿದೆ.ಸೋಲಾರ್‌ ವಿದ್ಯುತ್‌ ಎಲ್ಲೆಲ್ಲಿ? ರಾಮನಗರ, ಚಿಕ್ಕಬಳ್ಳಾಪುರ, ತಿಪಟೂರು, ಮಡಿಕೇರಿ, ಸಾಗರ, ಚಿಕ್ಕಮಗಳೂರು, ಉಡುಪಿ, ಬೆಳಗಾವಿ, ಧಾರವಾಡ ಪೂರ್ವ, ಚಿಕ್ಕೋಡಿ, ಕಾರವಾರ, ದಾಂಡೇಲಿ, ಅಥಣಿ, ಹಾವೇರಿ ಸಾರಿಗೆ ಕಚೇರಿಗಳಲ್ಲಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌