ಅಗರಬತ್ತಿ ಉದ್ಯಮಕ್ಕೆ ಸಕಲ ನೆರವು: ಸಿಎಂ ಬೊಮ್ಮಾಯಿ ಭರವಸೆ

By Govindaraj SFirst Published Nov 25, 2022, 2:00 AM IST
Highlights

ಅಗರಬತ್ತಿ ಉದ್ಯಮಕ್ಕೆ ಎಲ್ಲ ಸಹಕಾರ ನೀಡಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಅಖಿಲ ಭಾರತ ಅಗರಬತ್ತಿ ಉತ್ಪಾದಕರ ಸಂಘ ಆಯೋಜಿಸಿರುವ ಮೂರು ದಿನಗಳ ‘ಐಮಾ ಎಕ್ಸ್‌ಪೋ- 2022’ ಅನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.

ಬೆಂಗಳೂರು (ನ.25): ಅಗರಬತ್ತಿ ಉದ್ಯಮಕ್ಕೆ ಎಲ್ಲ ಸಹಕಾರ ನೀಡಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಅಖಿಲ ಭಾರತ ಅಗರಬತ್ತಿ ಉತ್ಪಾದಕರ ಸಂಘ ಆಯೋಜಿಸಿರುವ ಮೂರು ದಿನಗಳ ‘ಐಮಾ ಎಕ್ಸ್‌ಪೋ- 2022’ ಅನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಅಗರಬತ್ತಿ ಉದ್ಯಮ ಗ್ರಾಮೀಣ ಭಾಗದಲ್ಲಿ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ. ಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರಿಗೆ ಉದ್ಯೋಗ ನೀಡುವುದರಿಂದ ಸಮಾಜಕ್ಕೆ ಹೆಚ್ಚಿನ ಪ್ರಯೋಜನವಾಗುತ್ತದೆ ಎಂದರು.

ಅಗರಬತ್ತಿ ಉದ್ಯಮಕ್ಕೆ ದೊಡ್ಡ ಇತಿಹಾಸವಿದೆ. ಇದೊಂದು ದೊಡ್ಡ ವಿಜ್ಞಾನ. ಪಾಶ್ಚಿಮಾತ್ಯ ದೇಶಗಳಲ್ಲಿ ಕೃತಕ ಪರಿಮಳ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ನಮ್ಮದು ಜೀವ ವೈವಿಧ್ಯವಿರುವ ದೇಶ. ನಮ್ಮಲ್ಲಿ ಪ್ರಾಕೃತಿಕವಾಗಿಯೇ ಪರಿಮಳ ಬೀರುವ ಉತ್ಪನ್ನಗಳು ದೊರೆಯುತ್ತಿವೆ. ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿಯೂ ಒಬ್ಬರು ಸುಮಾರು 2000 ಎಕರೆ ಪ್ರದೇಶದಲ್ಲಿ ಪುಷ್ಪ ಕೃಷಿ ಮಾಡುತ್ತಿದ್ದಾರೆ. ಇಂತಹ ಅವಕಾಶವನ್ನು ಬಳಸಿಕೊಂಡು ಉದ್ದಿಮೆ ಇನ್ನಷ್ಟುಸದೃಢಗೊಳ್ಳಲಿ ಎಂದು ಹೇಳಿದರು.

ಜೆಡಿಎಸ್‌ ಮೊದಲು ಬಹುಮತ ಪಡೆಯಲಿ: ಸಂಸದೆ ಸುಮಲತಾ ಅಂಬರೀಶ್‌

ಸರ್ಕಾರವು ಸಣ್ಣ ಪುಟ್ಟಸಮುದಾಯಗಳಾದ ಕುಂಬಾರ, ಕಮ್ಮಾರ, ಚಮ್ಮಾರ ಸೇರಿದಂತೆ ಇತರ ಸಮುದಾಯಗಳಿಗೆ ಸಾಲ ನೀಡುವ ಯೋಜನೆ ಜಾರಿಗೆ ತಂದಿದೆ. ಆರ್ಥಿಕತೆ ಕೆಳ ಸ್ತರದಿಂದ ಬಲಗೊಳ್ಳುತ್ತದೆ ಎಂಬ ಕಾರಣದಿಂದ ಸರ್ಕಾರ ಮಹಿಳೆಯರಿಗೆ ಸ್ತ್ರೀ ಸಾಮರ್ಥ್ಯ ಯೋಜನೆ ಜಾರಿಗೆ ತಂದಿದೆ. ಅವರಿಗೆ ಸರ್ಕಾರ 1.5 ಲಕ್ಷ ರು. ನೀಡುತ್ತದೆ. 5 ಲಕ್ಷ ರು.ವರೆಗೆ ಅನುದಾನ ನೀಡುತ್ತಿದೆ. ಇದರಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಕಲ್ಪಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ, ಐಮಾ ಅಧ್ಯಕ್ಷ ಅರ್ಜುನ್‌ ರಂಗಾ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ವಾರ ಸರ್ವಪಕ್ಷಗಳ ಸಭೆ: ಗಡಿ ವಿವಾದ ಸಂಬಂಧ ಚರ್ಚಿಸಲು ಮುಂದಿನ ವಾರ ಸರ್ವಪಕ್ಷ ಸಭೆ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಹೇಳಿಕೆ ಬಗ್ಗೆಯೂ ಆ ಸಭೆಯಲ್ಲಿಯೇ ಚರ್ಚಿಸಲಾಗುವುದು ಎಂದೂ ಅವರು ಹೇಳಿದ್ದಾರೆ. ಗುರುವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಕರ್ನಾಟಕದ ವಾದವನ್ನು ಮಂಡಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. 

ನಮ್ಮ ವಾದಕ್ಕೆ ಗಟ್ಟಿಯಾದ ಆಧಾರವೂ ಇದೆ ಎಂದು ತಿಳಿಸಿದರು. ಮಾತುಕತೆ ಮೂಲಕವೂ ವಿವಾದ ಬಗೆಹರಿಸಿಕೊಳ್ಳುವ ಚಿಂತನೆಯಿರುವುದಾಗಿ ಮಹಾರಾಷ್ಟ್ರ ಸರ್ಕಾರ ತಿಳಿಸಿರುವ ಮಾಹಿತಿ ದೊರೆತಿದೆ. ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ ಅವರು ದಾವೆ ಹೂಡಿದ್ದಾರೆ. ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡನೆಯ ನಿರ್ಣಯವನ್ನು ಸರ್ವಪಕ್ಷ ಸಭೆ ಹಾಗೂ ಗಡಿ ಪ್ರಾಧಿಕಾರದೊಂದಿಗೆ ಚರ್ಚಿಸಿ ತೆಗೆದುಕೊಳ್ಳಲಾಗಿದೆ. ಆದ್ದರಿಂದ ಕರ್ನಾಟಕ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸುವ ನಿರ್ಧಾರ ಕೈಗೊಂಡಿದೆ ಎಂದರು.

Chitradurga: ಮುರುಘಾ ಮಠ ಆಡಳಿತ ಡಿಸಿ ವರದಿ ಆಧರಿಸಿ ತೀರ್ಮಾನ: ಸಿಎಂ ಬೊಮ್ಮಾಯಿ

ಗಡಿ ವಿವಾದವೇ ಮುಗಿದು ಹೋಗಿದೆ. ಆದರೆ ಮಹಾರಾಷ್ಟ್ರ ರಾಜ್ಯದವರು ಮತ್ತೆ ವಿವಾದವನ್ನು ಎಬ್ಬಿಸಿದ್ದಾರೆ. ಮುಂದಿನ ವಾರ ಸರ್ವಪಕ್ಷ ಸಭೆ ಕರೆಯುತ್ತೇನೆ. ಮಹಾರಾಷ್ಟ್ರ ರಾಜ್ಯದ ಮಾತುಕತೆ ಮೂಲಕ ವಿವಾದ ಬಗೆಹರಿಸುವ ಇಂಗಿತ ಸೇರಿದಂತೆ ಎಲ್ಲ ವಿಷಯಗಳನ್ನು ಸಮಗ್ರವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಗ್ರಾಮ ಪಂಚಾಯತಿ ನಿರ್ಣಯ ಹಾಗೂ ಪೂರಕ ವರದಿಗಳೆಲ್ಲವೂ ಇದೆ. ಬರುವ ದಿನಗಳಲ್ಲಿ ಈ ಎಲ್ಲ ವಿಷಯಗಳ ಬಗ್ಗೆ ನ್ಯಾಯಾಲಯದಲ್ಲಿ ಚರ್ಚೆಯಾಗಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

click me!