
ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯವು ಪ್ರಸಕ್ತ ಸಾಲಿನಲ್ಲಿ ಸರಕು ಸಾಗಾಣಿಕೆಯಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆದು ಇತಿಹಾಸ ನಿರ್ಮಿಸಿದೆ. ಒಟ್ಟು 52.46 ಮಿಲಿಯನ್ ಟನ್ ಸರಕು ಸಾಗಣೆ ಮಾಡುವ ಮೂಲಕ ಹೊಸ ದಾಖಲೆ ಬರೆದಿರುವುದಾಗಿ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ (ಎಜಿಎಂ) ಪಿ. ಅನಂತ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷದ 50.36 ಮಿಲಿಯನ್ ಟನ್ ಸಾಗಣೆಯೊಂದಿಗೆ ಹೋಲಿಸಿದರೆ, ಈ ಬಾರಿ 6.81 ಮಿಲಿಯನ್ ಟನ್ ಹೆಚ್ಚಳ ಸಾಧಿಸಿರುವುದಾಗಿ ಹೇಳಿದರು. ಒಟ್ಟಾರೆ ಸರಕು ಸಾಗಾಣಿಕೆಯಿಂದ ನೈಋತ್ಯ ರೈಲ್ವೆಗೆ ₹9,487.88 ಕೋಟಿ ಆದಾಯ ಲಭಿಸಿದೆ. ಈ ಸಾಧನೆಯೊಂದಿಗೆ ದೇಶದ ಇತರೆ ರೈಲ್ವೆ ವಲಯಗಳಿಗಿಂತ ಮುಂಚೂಣಿಯಲ್ಲಿದೆ. 20.97 ಮಿಲಿಯನ್ ಟನ್ ಸಾಗಣೆ ಮಾಡಿದ ಉತ್ತರ ಕೇಂದ್ರ ರೈಲ್ವೆ ವಲಯವು ದ್ವಿತೀಯ ಸ್ಥಾನದಲ್ಲಿದೆ ಎಂದು ಮಾಹಿತಿ ನೀಡಿದರು.
ನೈಋತ್ಯ ರೈಲ್ವೆ ಮೂಲಕ ಕಲ್ಲಿದ್ದಲು, ಕಬ್ಬಿಣ ಅದಿರು, ಸ್ಟೀಲ್, ಖನಿಜ ತೈಲ, ಸಿಮೆಂಟ್, ರಾಸಾಯನಿಕ ಗೊಬ್ಬರ, ಕಂಟೇನರ್ಗಳು ಹಾಗೂ ಆಹಾರ ವಸ್ತುಗಳ ಸೇರಿದಂತೆ ವಿವಿಧ ರೀತಿಯ ಸರಕುಗಳನ್ನು ಸಾಗಿಸಲಾಗಿದೆ. ಇದರಲ್ಲಿ ವಿಶೇಷವಾಗಿ ಕಬ್ಬಿಣ ಅದಿರು, ಕಲ್ಲಿದ್ದಲು ಮತ್ತು ಸ್ಟೀಲ್ ಸಾಗಾಣಿಕೆಯಿಂದ ಹೆಚ್ಚು ಆದಾಯ ಬಂದಿರುವುದಾಗಿ ತಿಳಿಸಿದ್ದಾರೆ.
ಸರಕು ಸಾಗಣೆ ಸಾಮರ್ಥ್ಯವನ್ನು ಹೆಚ್ಚಿಸಲು ರೈಲ್ವೆ ಇಲಾಖೆ 409 ಗೂಡ್ಸ್ ಟ್ರ್ಯಾಕ್ಗಳನ್ನು ಮೇಲ್ದರ್ಜೆಗೇರಿಸಿದೆ. ಜೊತೆಗೆ, ತೋರಣಗಲ್ಲು–ರಣಜಿತಪುರ ಮತ್ತು ಬಳ್ಳಾರಿ–ಚಿಕ್ಕಜಾಜೂರು ಮಾರ್ಗಗಳಲ್ಲಿ ಡಬ್ಲಿಂಗ್ ಕಾರ್ಯಕ್ಕೆ ಅನುಮತಿ ದೊರೆತಿದೆ. ಇದರಿಂದ ಭವಿಷ್ಯದಲ್ಲಿ ಸರಕು ಸಾಗಣೆ ಇನ್ನಷ್ಟು ವೇಗವಾಗಿ ಮತ್ತು ಸುಗಮವಾಗಿ ನಡೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನೈಋತ್ಯ ರೈಲ್ವೆ ಸಮಯಪಾಲನೆಯಲ್ಲಿ ಶೇ. 89.37ರಷ್ಟು ಸಾಧನೆ ಮಾಡಿದ್ದು, ಒಟ್ಟು 3,335 ನಿಮಿಷಗಳನ್ನು ಉಳಿತಾಯ ಮಾಡಿದೆ. ಈ ಸಾಧನೆಯಿಂದ ದೇಶದ ಮಟ್ಟದಲ್ಲಿ 4ನೇ ಸ್ಥಾನ ಪಡೆದಿದೆ. ಪ್ರಯಾಣಿಕರ ಸೌಲಭ್ಯವನ್ನು ಗಮನದಲ್ಲಿಟ್ಟುಕೊಂಡು 11 ಹೊಸ ರೈಲುಗಳನ್ನು ಆರಂಭಿಸಲಾಗಿದ್ದು, 4 ರೈಲುಗಳನ್ನು ಎಕ್ಸ್ಪ್ರೆಸ್ನಿಂದ ಸೂಪರ್ಫಾಸ್ಟ್ಗೆ ಮೇಲ್ದರ್ಜೆಗೇರಿಸಲಾಗಿದೆ. ಹಬ್ಬ, ರಜೆ ಮತ್ತು ವಿಶೇಷ ಸಂದರ್ಭಗಳಲ್ಲಿ 471 ವಿಶೇಷ ರೈಲುಗಳನ್ನು ಓಡಿಸಿ 11,322 ಟ್ರಿಪ್ಗಳನ್ನು ನಡೆಸಲಾಗಿದೆ. ಪ್ರಯಾಣಿಕರ ಸಾಗಣೆಯಿಂದ ಒಟ್ಟು ₹3,468 ಕೋಟಿ ಆದಾಯ ಬಂದಿದೆ. ಪ್ರಯಾಣಿಕರ ಸಂಖ್ಯೆಯೂ 165.53 ಮಿಲಿಯನ್ನಿಂದ 176.93 ಮಿಲಿಯನ್ಗೆ ಹೆಚ್ಚಳ ಕಂಡಿದೆ.
ರಾಜ್ಯದ 10 ಪ್ರಮುಖ ರೈಲ್ವೆ ಯೋಜನೆಗಳಿಗೆ ಒಟ್ಟು 16,945 ಎಕರೆ ಭೂಮಿ ಅಗತ್ಯವಿದ್ದು, ಇದರಲ್ಲಿ 13,675 ಎಕರೆ ಭೂಮಿ ಹಸ್ತಾಂತರಗೊಂಡಿದೆ. ಆದರೆ ಇನ್ನೂ 3,372 ಎಕರೆ ಭೂಮಿ ಹಸ್ತಾಂತರ ಬಾಕಿಯಿದೆ. ವಿಶೇಷವಾಗಿ ಧಾರವಾಡ–ಬೆಳಗಾವಿ ಹೊಸ ರೈಲು ಮಾರ್ಗ ಯೋಜನೆ ಭೂಮಿ ಹಸ್ತಾಂತರದ ವಿಳಂಬದಿಂದ ಇನ್ನೂ ಆರಂಭವಾಗಿಲ್ಲ ಎಂದು ಪಿ. ಅನಂತ ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ರೈಲು ಸೇವೆಯನ್ನು ಸುಧಾರಿಸಲು 27 ಡೆಮು ರೈಲುಗಳ ಬೋಗಿಗಳನ್ನು ಒದಗಿಸುವಂತೆ ರೈಲ್ವೆ ಮಂಡಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಪ್ರತಿ ವರ್ಷ ಕೇವಲ 3–4 ಕೋಚ್ಗಳು ಮಾತ್ರ ಲಭ್ಯವಾಗುತ್ತಿವೆ, ಇದರಿಂದ ಹುಬ್ಬಳ್ಳಿ ವಿಭಾಗದಲ್ಲಿ ಸ್ಥಳೀಯ ರೈಲು ಸೇವೆ ಆರಂಭಿಸಲು ವಿಳಂಬವಾಗುತ್ತಿದೆ. ರೇಕ್ಗಳ ಪೂರೈಕೆ ಸಿಗುತ್ತಿದ್ದಂತೆ ಸ್ಥಳೀಯ ರೈಲು ಸೇವೆಯನ್ನು ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಪ್ರಧಾನ ವಾಣಿಜ್ಯ ವ್ಯವಸ್ಥಾಪಕ ಎಸ್.ಪಿ. ಶಾಸೀ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ