
ಮಂಗಳೂರು (ಆ.9): ಜನಪರ ಹೋರಾಟಗಾರರು, ಸಂಘಟನೆಗಾರರು, ಚಳವಳಿಗಾರರ ಜೊತೆ ಸೇರಿ ಅಖಂಡ ಕರ್ನಾಟಕಕ್ಕೆ ಸಮ ಸಮಾಜ ಕಟ್ಟಬೇಕು ಎಂಬ ಉದ್ದೇಶದಿಂದ ಉತ್ತಮ ರಾಷ್ಟ್ರ ಕಟ್ಟುವುದಕ್ಕಾಗಿ ರಾಜಕೀಯ ಪಕ್ಷ ಕಟ್ಟುತ್ತೇವೆ ಎಂದು ಹೋರಾಟಗಾರ, ಅಹಿಂಸಾ ಚೇತನ್ ಘೋಷಿಸಿದ್ದಾರೆ.
ಅವರು ಶನಿವಾರ ಮಂಗಳೂರು ಭೇಟಿ ವೇಳೆ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಸ್ತುತ ರಾಜಕೀಯವಾಗಿ ನಡೆಯುತ್ತಿರುವ ಬೆಳವಣಿಗೆ, ಸರ್ಕಾರದ ನಿರ್ಲಕ್ಷ್ಯತನವನ್ನು ವಿರೋಧಿಸಲು ಜನಪರ ಆಡಳಿತಕ್ಕಾಗಿ ರಾಜಕೀಯ ಪಕ್ಷದ ಮೂಲಕವೇ ಪರಿಹಾರವಿದೆ. ತಮ್ಮ ಕುರ್ಚಿ ಅಲುಗಾಡುತ್ತದೆ ಎಂದ ಕೂಡಲೇ ಕಿವುಡ, ಕುರುಡ ಸರ್ಕಾರಗಳು ಎಚ್ಚೆತ್ತುಕೊಳ್ಳುತ್ತವೆ. ಕರ್ನಾಟಕಕ್ಕೆ ಪರಿಹಾರ, ಪರ್ಯಾಯ ಬೇಕು. ಅದಕ್ಕಾಗಿ ಸಮಾನತೆ, ಸಂವಿಧಾನದಂತೆ ನಡೆಯುವ ಪಕ್ಷ ಬೇಕು. ಅದಕ್ಕಾಗಿ ಪ್ರಾದೇಶಿಕ ಪಕ್ಷ ಕಟ್ಟಿ ರಾಜ್ಯವನ್ನು ಬಲಿಷ್ಠ ಮಾಡಲು ಕೆಲಸ ಮಾಡಲಾಗುವುದು. ನಮ್ಮ ಸಿದ್ಧಾಂತದಂತೆ ನಡೆಯುವ, ಸಮಸಮಾಜ, ಸಮಾನತೆ, ನ್ಯಾಯ, ಸಂವಿಧಾನದಂತೆ ನಡೆಯುವ ಉದ್ದೇಶದಂತೆ ಪಕ್ಷಕ್ಕೆ ಹೆಸರಿಡಲಾಗುವುದು, ಅದರ ನೋಂದಾಣಿ ಪ್ರಕ್ರಿಯೆ ನಡೆಯುತ್ತಿದೆ. ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ನಡೆಸಿ, ರಾಜಕೀಯ ಪಕ್ಷ ಲೋಕಾರ್ಪಣೆ ಮಾಡುವ ಬಗ್ಗೆ ತಯಾರಿ ನಡೆಯುತ್ತಿದೆ ಎಂದರು. ಅದಕ್ಕಾಗಿ ದಕ್ಷಿಣ ಕನ್ನಡ, ಉಡುಪಿ, ಸೇರಿದಂತೆ ರಾಜ್ಯದಲ್ಲಿ ಸಂಚರಿಸಿ ಸಭೆ ನಡೆಸಲಾಗುತ್ತಿದೆ ಎಂದರು.
ಬಿಡದಿ ಟೌನ್ಶಿಪ್ ಆಗಬಾರದು, ರೈತರು ಭೂಮಿ ಕೈತಪ್ಪಬಾರದು ಎಂಬುದು ನನ್ನ ಆಗ್ರಹ. ಅಭಿವೃದ್ಧಿ ಹೆಸರಿನಲ್ಲಿ ರೈತರ ಭೂಮಿ ಕಸಿದು ಕಟ್ಟಡ ಕಟ್ಟಿ, ಲ್ಯಾಂಡ್ ಮಾಫಿಯಾ ಲಾಭಿಗಳು ಒಳ್ಳೆಯದಲ್ಲ. ಆ ಯೋಜನೆಯೇ ತಪ್ಪು. ಬೆಂಗಳೂರನ್ನು ಅಭಿವೃದ್ಧಿ ಹೆಸರಿನಲ್ಲಿ ನಾಶ ಮಾಡಲಾಗುತ್ತದೆ ಹೊರತು, ದಕ್ಷಿಣ ಕನ್ನಡ, ಕರಾವಳಿ, ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ, ಹಳೆ ಮೈಸೂರು ಭಾಗಗಳನ್ನು ನಿರ್ಲಕ್ಷ್ಯ ಮಾಡಿದರೆ ಒಳ್ಳೆಯದಲ್ಲ. ದೆಹಲಿ ಪಕ್ಷಗಳ ಉದ್ದೇಶವೇ ಅಧಿಕಾರ ಲಾಭಕ್ಕಾಗಿ ಅಧಿಕಾರ ವಿಸ್ತರಣೆ, ಸ್ವಂತ ಲಾಭ ಮಾಡಿಕೊಳ್ಳುವುದು ಆಗಿದೆ ಎಂದು ಅವರು ಆರೋಪಿಸಿದರು.
ಕೇಂದ್ರ ಸರ್ಕಾರ ಎಫ್ಸಿಆರ್ಎ (ಭಾರತದಲ್ಲಿ ವಿದೇಶಿ ದೇಣಿಗೆ ಮತ್ತು ಹಣಕಾಸಿನ ನೆರವನ್ನು ಸ್ವೀಕರಿಸುವ ಸಂಸ್ಥೆಗಳ ನಿಂಯಂತ್ರಿಸುವ ಕಾನೂನು) ಬಿಲ್ ತರಲು ಹೊರಟಿರುವ ಪ್ರಶ್ನೆಗೆ ಉತ್ತರಿಸಿದ ಅವರು, ಅದರ ಬಗ್ಗೆ ನಾನು ಅಧ್ಯಯನ ಮಾಡಬೇಕಿದೆ. ಬಳಿಕ ಉತ್ತರಿಸುತ್ತೇನೆ. ನಾನು ಕೇಂದ್ರ-ರಾಜ್ಯ ಸರ್ಕಾರ ಮಾಡಿದೆಲ್ಲ ತಪ್ಪು, ಮಾಡಿದೆಲ್ಲ ಸರಿ ಎಂದು ಹೇಳಲ್ಲ ಎಂದರು.
ಸಂವಿಧಾನಾತ್ಮಕ ಹೋರಾಟಗಳು ಸಮಾಜಕ್ಕೆ ಬೇಕು. ಆದರೆ ಹೋರಾಟ ಓರ್ವ ಸಚಿವರನ್ನು ಗುರಿಯಾಗಿಸಿ, ಅವರನ್ನು ಬದಲಾಯಿಸಲು ಮಾತ್ರ ಇರಬಾರದು, ಒಬ್ಬ ಸಚಿವ ಕೆಳಗಿಳಿದರೆ ಮತ್ತೊಬ್ಬ ಬರುತ್ತಾನೆ. ಆದರೆ ವ್ಯವಸ್ಥೆ ಅದೇ ರೀತಿ ಇರುತ್ತದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮಾತ್ರ ಸಮಸ್ಯೆ ಅಲ್ಲ. ನೀಟ್ ವ್ಯವಸ್ತೆಯೇ ಸರಿ ಇಲ್ಲ. ಇದನ್ನು ಸರಿಪಡಿಸಲು ಉತ್ತರ ಭಾರತದ ಉದ್ದೇಶ ನೋಡದೇ, ಇಡೀ ಒಕ್ಕೂಟದಂತೆ ನೋಡಿ ಸಿಇಟಿ ತರಹ ನಮಗೆ ನಮ್ಮ ರಾಜ್ಯದಲ್ಲೇ ಆದ್ಯತೆ ನೀಡುವಂತಹ ವ್ಯವಸ್ಥೆ ಮಾಡಬೇಕು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ