
ಬೆಂಗಳೂರು (ಏ.17): ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮಾಡಿ ಮನೆ ಕಟ್ಟಲು ಅಗತ್ಯವಾದ ಮೂಲಸೌಲಭ್ಯ ನೀಡದ ಕಾರಣಕ್ಕಾಗಿ ನಿವೇಶನದಾರರೊಬ್ಬರಿಗೆ ಬರೋಬ್ಬರಿ ₹56.3 ಲಕ್ಷ ಬಡ್ಡಿ ಪರಿಹಾರ ನೀಡುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ಕೆ-ರೇರಾ) ಆದೇಶಿಸಿದೆ.
ಬೆಂಗಳೂರಿನ ಜಯನಗರ ನಿವಾಸಿ ಮೃದುಲಾ ಕೃಷ್ಣಪುರ್ ಎಂಬುವರು ನಾಡಪ್ರಭು ಕೆಂಪೇಗೌಡ ಬಡಾವಣೆಯ 8ನೇ ಬ್ಲಾಕ್ನಲ್ಲಿ 50x80 ಅಳತೆಯ (ಸೈಟ್ ಸಂಖ್ಯೆ 456) ನಿವೇಶನವನ್ನು 2020ರಲ್ಲಿ ಸುಮಾರು ₹96,87,510 ಗಳನ್ನು ಪಾವತಿಸಿ ಪಡೆದಿದ್ದರು. ಬಿಡಿಎ ಅವರಿಗೆ 2020ರ ಜೂ.16 ರಂದು ಸ್ವಾಧೀನ ಪತ್ರವನ್ನೂ ನೀಡಿತ್ತು. ಆದರೆ, ನಿವೇಶನ ಹಂಚಿಕೆಯಾಗಿದ್ದರೂ ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಒಳಚರಂಡಿ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯಗಳಿಲ್ಲದೆ ಮನೆ ಕಟ್ಟಲು ಸಾಧ್ಯವಾಗಿರಲಿಲ್ಲ. ಈ ಕುರಿತು ನಿವೇಶನದ ಮಾಲೀಕರಾದ ಮೃದುಲಾ ಅವರು ರೇರಾ ಕೋರ್ಟ್ ಮೊರೆ ಹೋಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ರೇರಾ ಅಧ್ಯಕ್ಷ ರಾಕೇಶ್ ಸಿಂಗ್ ಮತ್ತು ಸದಸ್ಯ ಜಿ.ಆರ್.ರೆಡ್ಡಿ ಅವರ ಪೀಠ ಬಿಡಿಎ ಧೋರಣೆಯನ್ನು ತೀವ್ರವಾಗಿ ಖಂಡಿಸಿದೆ. ''ಕೇವಲ ಕಾಗದದ ಮೇಲೆ ಸೈಟ್ ಸ್ವಾಧೀನ ಪತ್ರ ನೀಡುವುದು ಸಾಕಾಗುವುದಿಲ್ಲ. ಒಬ್ಬ ನಿವೇಶನದಾರ ಆ ಸೈಟ್ನಲ್ಲಿ ಮನೆ ಕಟ್ಟಲು ಮತ್ತು ನೆಮ್ಮದಿಯಿಂದ ವಾಸಿಸಲು ಅಗತ್ಯವಿರುವ ರಸ್ತೆ, ನೀರು, ಚರಂಡಿಯಂತಹ ಕನಿಷ್ಠ ಸೌಲಭ್ಯಗಳನ್ನು ಒದಗಿಸುವುದು ಡೆವಲಪರ್ನ (ಬಿಡಿಎ) ಪ್ರಾಥಮಿಕ ಕರ್ತವ್ಯ ಎಂದು ಸ್ಪಷ್ಟಪಡಿಸಿದೆ.
ಸುಪ್ರೀಂ ಕೋರ್ಟ್ನ ಈ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿದ ರೇರಾ, ವಿಳಂಬ ಅವಧಿಗೆ ಎಸ್ಬಿಐ ಎಂಸಿಎಲ್ ಆರ್ + ಶೇ.2 ದರದಲ್ಲಿ ಬಡ್ಡಿ ನೀಡಲು ಆದೇಶಿಸಿದೆ. ಮೃದುಲಾ ಅವರಿಗೆ 2020 ಜೂ.10ರಿಂದ 2026 ಫೆ.2ರ ವರೆಗಿನ ಅವಧಿಗೆ ಒಟ್ಟು ₹56,03,736 ಬಡ್ಡಿಯನ್ನು 60 ದಿನಗಳ ಒಳಗಾಗಿ ಪಾವತಿಸಬೇಕು. 2026 ಫೆ.3ರಿಂದ ಬಡಾವಣೆಯಲ್ಲಿ ಮೂಲಸೌಕರ್ಯಗಳು ಪೂರ್ಣಗೊಳ್ಳುವವರೆಗೂ ಪ್ರತಿ ತಿಂಗಳು ಇದೇ ದರದಲ್ಲಿ ಬಡ್ಡಿ ಪರಿಹಾರವನ್ನು ನೀಡುತ್ತಿರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ