
ತುಮಕೂರು[ಡಿ.13]: ಪಿತ್ತಕೋಶ ಮತ್ತು ಯಕೃತ್ ಸಂಬಂಧಿ ಸೋಂಕಿನ ಹಿನ್ನೆಲೆಯಲ್ಲಿ ಚೆನ್ನೈನ ರೆಲಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಬುಧವಾರ ಸ್ವಲ್ಪಕಾಲ ನಡೆದಾಡಿದ್ದಾರೆ. ಅಲ್ಲದೇ ಶ್ರೀಗಳು ಇಷ್ಟಲಿಂಗ ಪೂಜೆ ಸಹ ನೆರವೇರಿಸಿದ್ದಾರೆ.
ಡಿ.8ರ ಶನಿವಾರ ಬೈಪಾಸ್ ಮಾದರಿಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಶ್ರೀಗಳು ಗಣನೀಯವಾಗಿ ಚೇತರಿಸಿಕೊಂಡಿದ್ದು, ದ್ರವರೂಪದ ಆಹಾರ ಸೇವಿಸುತ್ತಿದ್ದಾರೆ. ಅಲ್ಲದೇ ಕಿರಿಯ ಶ್ರೀಗಳ ಜೊತೆ ಕೂಡಾ ಮಾತನಾಡಿದ್ದಾರೆ. ಡಿ.7ರಂದು ಆಸ್ಪತ್ರೆಗೆ ದಾಖಲಾಗಿದ್ದ ಶ್ರೀಗಳಿಗೆ ಡಿ.8ರಂದು ಡಾ. ಮೊಹಮದ್ ರೆಲಾ ನೇತೃತ್ವದಲ್ಲಿ ಯಶಸ್ವಿ ಪಿತ್ತಕೋಶದ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.
ವೈದ್ಯರ ಬಳಿ ತಮ್ಮ ಬೇಡಿಕೆ ಮುಂದಿಟ್ಟ ಸಿದ್ಧಗಂಗಾ ಶ್ರೀ
ಚಿಕಿತ್ಸೆ ನಡೆದ ಒಂದೇ ಗಂಟೆಯಲ್ಲಿ ಅನಸ್ತೇಶಿಯಾದಿಂದ ಹೊರಬಂದ ಶ್ರೀಗಳು ವೈದ್ಯಲೋಕದ ಅಚ್ಚರಿಗೆ ಕಾರಣವಾಗಿದ್ದರು. ಅಂದಿನಿಂದ ಇಂದಿನವರೆಗೂ ಲಿವರ್ ಯುನಿಟ್ ಕೇರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಗಳು ಬುಧವಾರ ಇಷ್ಟಲಿಂಗ ಪೂಜೆ ನೆರವೇರಿಸಿದ್ದಾರೆ. ಲಿಂಗ ಪೂಜೆ ಮಾಡುವ ವೇಳೆ ತಮ್ಮ ಶಿಷ್ಯರೊಬ್ಬರು ವಿಭೂತಿ ಧರಿಸಿರಲಿಲ್ಲ. ಇದನ್ನು ಗಮನಿಸಿದ ಶ್ರೀಗಳು ಹಣೆಗೆ ವಿಭೂತಿಯನ್ನು ಧರಿಸಿದ್ದಾರೆ. ಆಸ್ಪತ್ರೆಗೆ ಆಗಮಿಸಿದ ಬೆಳಗಾವಿಯ ಹುಕ್ಕೇರಿ ಮಠದ ಚಂದ್ರಶೇಖರ ಸ್ವಾಮೀಜಿ ಹಾಗೂ ಶಿವಗಂಗೆಯ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಶ್ರೀಗಳ ಯೋಗಕ್ಷೇಮವನ್ನು ಶ್ರೀಗಳು ವಿಚಾರಿಸಿದ್ದಾರೆ. ಬುಧವಾರ ಚೆನ್ನೈನ ರೆಲಾ ಆಸ್ಪತ್ರೆ ಸಿಬ್ಬಂದಿ ಸ್ವಲ್ಪ ಪ್ರಮಾಣದಲ್ಲಿ ಶ್ರೀಗಳಿಗೆ ವಾಕಿಂಗ್ ಮಾಡಿಸಿದ್ದಾರೆ.
ಐಸಿಯುನಲ್ಲಿದ್ದರೂ ಶಿವಪೂಜೆ ಸಿದ್ಧತೆ ನಡೆಸಿ ಎಂದ ಸಿದ್ಧಗಂಗಾ ಶ್ರೀಗಳು
ಶ್ರೀಗಳ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಕಿರಿಯರಾದ ಸಿದ್ಧಲಿಂಗ ಶ್ರೀಗಳು, ಸ್ವಾಮೀಜಿ ಲವಲವಿಕೆಯಿಂದ ಇದ್ದಾರೆ. ಎಳನೀರು ಮತ್ತು ಹಣ್ಣಿನ ಜ್ಯೂಸ್ ಸೇವಿಸಿರುವ ಶ್ರೀಗಳಿಗೆ ಸ್ವಲ್ಪಪ್ರಮಾಣದ ವಾಕಿಂಗ್ ಮಾಡಿಸಲಾಗಿದೆ. ಇನ್ನು ಎಂದಿನಂತೆ ಮಠ ಮತ್ತು ಮಕ್ಕಳ ಬಗ್ಗೆ ವಿಚಾರಿಸಿದ ಶ್ರೀಗಳು ಮಠದಲ್ಲಿ ರಾಗಿ ಕಣ ಆಯ್ತಾ, ಕೆಲಸ ಹೇಗಿದೆ ಅಂತ ಕೇಳಿದರು ಎಂದು ಮಾಹಿತಿ ನೀಡಿದರು.
ಬುಧವಾರ ತಡರಾತ್ರಿ ಅಥವಾ ಗುರುವಾರ ಮುಂಜಾನೆ ವೇಳೆಗೆ ಶ್ರೀಗಳನ್ನು ವಿಶೇಷ ವಾರ್ಡ್ಗೆ ಸ್ಥಳಾಂತರ ಮಾಡಲಾಗುವುದು ಎಂದು ಮಠದ ಮೂಲಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ