ಬಿಎಂಟಿಸಿ ನೂತನ ಅಧ್ಯಕ್ಷರಾಗಿ ಹ್ಯಾರಿಸ್‌ ಅಧಿಕಾರ ಸ್ವೀಕಾರ

By Web DeskFirst Published Jan 12, 2019, 9:27 AM IST
Highlights

ಬಿಎಂಟಿಸಿ ನೂತನ ಅಧ್ಯಕ್ಷರಾಗಿ ಹ್ಯಾರಿಸ್‌ ಅಧಿಕಾರ ಸ್ವೀಕಾರ| ನಷ್ಟದಲ್ಲಿರುವ ಸಂಸ್ಥೆಯನ್ನು ಲಾಭದತ್ತ ಕೊಂಡೊಯ್ಯುವ ಭರವಸೆ

ಬೆಂಗಳೂರು[ಜ.12]: ಸಾರ್ವಜನಿಕರಿಗೆ ಉತ್ತಮ ಸೇವೆ ಕಲ್ಪಿಸುವ ಜತೆಗೆ ನಷ್ಟದಲ್ಲಿರುವ ಬಿಎಂಟಿಸಿಯನ್ನು ಲಾಭದತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುವುದು ಎಂದು ಶಾಸಕ ಹಾಗೂ ಬಿಎಂಟಿಸಿ ಅಧ್ಯಕ್ಷ ಎನ್‌.ಎ.ಹ್ಯಾರಿಸ್‌ ಹೇಳಿದರು.

ಶುಕ್ರವಾರ ಶಾಂತಿನಗರದ ಬಿಎಂಟಿಸಿ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ನೂತನ ಅಧ್ಯಕ್ಷರಾಗಿ ಕಾರ್ಯಾಭಾರ ವಹಿಸಿಕೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಸಂಸ್ಥೆಯ ಲಾಭ ನಷ್ಟಮುಖ್ಯವಲ್ಲ. ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸಂಪರ್ಕ ಒದಗಿಸುವುದು ನಮ್ಮ ಮೊದಲ ಆದ್ಯತೆ. ಇದುವರೆಗೂ ನಿಗಮದಲ್ಲಿ ಏನಾಗಿದೆ, ಏನಾಗಿಲ್ಲ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ತಿಳಿದುಕೊಂಡು ಹಂತ ಹಂತವಾಗಿ ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಬಿಎಂಟಿಸಿ ನಿಗಮದಲ್ಲಿ ತಂತ್ರಜ್ಞಾನವನ್ನು ಹೇಗೆ ಬಳಕೆ ಮಾಡಿಕೊಳ್ಳಬೇಕು, ಮೆಟ್ರೋಗೆ ಬಿಎಂಟಿಸಿ ಹೇಗೆ ಸಂಪರ್ಕ ಮಾಡಬೇಕೆಂಬ ನಿಟ್ಟಿನಲ್ಲಿ ರೂಪುರೇಷೆ ಸಿದ್ಧಪಡಿಸಿ ಕೆಲವು ಬದಲಾವಣೆ ಮಾಡಲಾಗುವುದು. ನಿಗಮವನ್ನು ಇನ್ನಷ್ಟುಡಿಜಿಟಲ್‌ ಮಾಡಿ ಜನರ ಹತ್ತಿರಕ್ಕೆ ಕೊಂಡೊಯ್ಯುವ ಗುರಿ ಹೊಂದಿದ್ದೇನೆ ಎಂದರು.

ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿದರು. ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್‌.ವಿ.ಪ್ರಸಾದ್‌ ಸೇರಿದಂತೆ ನಿಗಮದ ಸಿಬ್ಬಂದಿ ನೂತನ ಅಧ್ಯಕ್ಷರಿಗೆ ಶುಭಕೋರಿದರು.

click me!