
ಬೆಂಗಳೂರು (ಆ.30): ಮುರುಘಾ ಶ್ರೀಗಳ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪದ ಬಗ್ಗೆ ತನಿಖೆಗೆ ಮೊದಲೇ ಅಪರಾಧಿ ಅಥವಾ ನಿರಾಪರಾಧಿ ಪಟ್ಟಕಟ್ಟಲು ಬರುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ತನಿಖೆ ನಡೆಯುತ್ತಿರುವ ವೇಳೆ ಅಪರಾಧ ಪಟ್ಟಅಥವಾ ನಿರಾಪರಾಧಿಯ ಪಟ್ಟಕಟ್ಟಲು ಬರುವುದಿಲ್ಲ. ತನಿಖೆ ನಡೆಯುವ ಸಮಯದಲ್ಲಿ ಏನಾದರೂ ಹೇಳಿದರೆ ತಪ್ಪಾಗುತ್ತದೆ. ತನಿಖೆ ಪಕ್ಷಪಾತರಹಿತವಾಗಿ ನಡೆಯುತ್ತದೆ. ನಾಡಿನ ಎಲ್ಲಾ ಜನರಿಗೂ ಒಂದೇ ಕಾನೂನು ಎಂದು ತಿಳಿಸಿದರು.
ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನ್ಯಾಯಾಲಯದ ತೀರ್ಪು ಒಪ್ಪಲೇ ಬೇಕಾಗುತ್ತದೆ. ಹಿಂದೂಗಳು ಗಾಳಿಯನ್ನು, ಸೂರ್ಯನನ್ನು ಪೂಜೆ ಮಾಡುತ್ತಾರೆ. ಹಾಗಾದರೆ, ಗಾಳಿಯನ್ನು, ಸೂರ್ಯನನ್ನು ದ್ವೇಷ ಮಾಡಿ ಬದುಕಲು ಆಗುತ್ತಾ? ಈ ಬಗ್ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ. ಸುಪ್ರೀಂ ಕೋರ್ಟ್ ಏನು ಹೇಳುತ್ತದೆಯೋ ನೋಡೋಣ. ಗಣೇಶೋತ್ಸವ ಪ್ರಕೃತಿಯ ಪೂಜೆಗೆ ಸಮವಾಗಿದೆ. ನಮ್ಮ ಸಂಭ್ರಮವನ್ನು ಅವರು ಕಿತ್ತುಕೊಳ್ಳಬಾರದು, ಅವರ ಆನಂದವನ್ನು ನಾವು ಕಿತ್ತುಕೊಳ್ಳಬಾರದು. ಸಂಭ್ರಮಿಸುವ ಅವಕಾಶವನ್ನು ಸರ್ಕಾರ ಕೊಡಲಿದೆ ಎಂದರು.
ಬುಲ್ ಬುಲ್ ಪಕ್ಷಿ ಮೇಲೆ ಸಾವರ್ಕರ್ ಸವಾರಿ: ಸ್ಪಷ್ಟನೆ ಕೊಟ್ಟ ಸಿಟಿ ರವಿ
ವೀರ್ ಸಾವರ್ಕರ್ ಪಠ್ಯ ವಿವಾದ ಸಂಬಂಧ ಮಾತನಾಡಿದ ಅವರು, ಇದನ್ನು ಮನೋ ವಿಜ್ಞಾನ ಸ್ವರೂಪದಲ್ಲಿ ಆರ್ಥೈಸಿಕೊಳ್ಳಬೇಕು. ಅದರಲ್ಲಿ ನೋಡದಿರುವ ಜಗತ್ತನ್ನು ವಿಹರಿಸಬಲ್ಲೆ ಎಂಬ ಭಾವನೆಯನ್ನು ಬುಲ್ ಬುಲ್ ಪಕ್ಷಿಯ ಮೂಲಕ ವಿವರಿಸಿದ್ದಾರೆ. ಸಾವರ್ಕರ್ಗೆ ನೆಹರೂ ರೀತಿ ಜೈಲಲ್ಲಿ ಡಿಸ್ಕವರಿ ಆಫ್ ಇಂಡಿಯಾ ಬರೆಯವ ಸೌಲಭ್ಯ ಇರಲಿಲ್ಲ. ಮೌಂಟ್ ಬ್ಯಾಟನ್ ಪತ್ನಿ ಹೆಗಲಿಗೆ ಕೈ ಹಾಕುವ ಅವಕಾಶವೂ ಇರಲಿಲ್ಲ ಎಂದು ವ್ಯಂಗ್ಯವಾಡಿದರು.
ಕೋರ್ಟ್ ತೀರ್ಪು ಸ್ವಾಗತಾರ್ಹ: ನಗರದ ಚಾಮರಾಜಪೇಟೆಯ ಆಟದ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ಕೋರಿದ್ದ ಅರ್ಜಿಯ ಅನುಮತಿ ಕುರಿತು ಹೈಕೋರ್ಟ್ ವಿಭಾಗೀಯ ಪೀಠ ನೀಡಿದ ತೀರ್ಪನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸ್ವಾಗತಿಸಿದ್ದಾರೆ. ಹಿಂದೂಗಳ ಧಾರ್ಮಿಕ ಆಚರಣೆ ಸ್ವಾತಂತ್ರ್ಯ ಯಾರೊಬ್ಬರ ಬಳಿ ಕೇಳಿ ಪಡೆಯುವ ಭಿಕ್ಷೆಯಲ್ಲ. ಅದು ಜನ್ಮಸಿದ್ಧ ಹಕ್ಕು ಎನ್ನುವುದನ್ನು ತೀರ್ಪು ಎತ್ತಿಹಿಡಿದಿದೆ. ಕಂದಾಯ ಇಲಾಖೆಗೆ ಸೇರಿದ್ದ ಆಟದ ಮೈದಾನದಲ್ಲಿ ಗಣೇಶೋತ್ಸವ ನಡೆಸಲು ಸಮಿತಿಗಳಿಗೆ ಅನುಮತಿ ನೀಡಲು ನಾನು ಈಗಾಗಲೇ ಸರ್ಕಾರ ಪತ್ರ ಬರೆದಿದ್ದು, ಅದು ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಸಹ ಆಗಿತ್ತು.
ಕಮಿಷನ್ ಆರೋಪ ಕಾಂಗ್ರೆಸ್ ಟೂಲ್ಕಿಟ್ ಭಾಗ: ಸಿ.ಟಿ.ರವಿ
ಇಂದಿನ ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪು ಆ ನಿಟ್ಟಿನಲ್ಲಿಯೇ ಇದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಟದ ಮೈದಾನದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಹೈಕೋರ್ಟ್ನ ಏಕ ಸದಸ್ಯ ಪೀಠ ನೀಡಿದ್ದ ತೀರ್ಪಿನಿಂದ ನಿರಾಶರಾಗಿದ್ದ ನಮಗೆ ವಿಭಾಗೀಯ ಪೀಠದ ತೀರ್ಪು ಮತ್ತೊಮ್ಮೆ ನ್ಯಾಯಾಲಯದ ಮೇಲಿನ ನಂಬಿಕೆ ಹೆಚ್ಚುವಂತೆ ಮಾಡಿದೆ ಮತ್ತು ಸಂತಸ ತಂದಿದೆ. ಗಣೇಶೋತ್ಸವ ಆಚರಣೆಯ ಹಿಂದಿನ ಉದ್ದೇಶ ಸಮಾಜದ ಏಕತೆ. ಇದನ್ನು ಅರ್ಥ ಮಾಡಿಕೊಳ್ಳದ ಶಕ್ತಿಗಳಿಗೆ ದೇಶ ಭಕ್ತಿಯ ಸದಾಚಾರ, ಸದ್ಬುದ್ಧಿ ಕೊಡಲೆಂದು ವಿಘ್ನ ವಿನಾಶಕನಲ್ಲಿ ಪ್ರಾರ್ಥಿಸೋಣ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ