ಸುತ್ತೂರು ಜಾತ್ರೆ ಜನರಿಗೆ ಅರಿವಿನ ಜಾತ್ರೆಯಾಗಿದೆ: ಸಚಿವ ದಿನೇಶ್ ಗುಂಡೂರಾವ್

By Kannadaprabha NewsFirst Published Feb 7, 2024, 7:23 AM IST
Highlights

ಸುತ್ತೂರು ಜಾತ್ರೆಯಲ್ಲಿ ಸಾಮಾಜಿಕ, ಶೈಕ್ಷಣಿಕ, ಕೃಷಿ, ಆರೋಗ್ಯದಂತಹ ಅನೇಕ ಕ್ಷೇತ್ರದಲ್ಲಿ ಆದ ಹೊಸ ಆವಿಷ್ಕಾರ ಹೊಸ ವಿಷಯಗಳನ್ನು ಜನರಿಗೆ ಅರಿವು ಮೂಡಿಸುತ್ತಿರುವ ಕಾರಣ ಇಡೀ ರಾಜ್ಯದಲ್ಲೇ ಸುತ್ತೂರು ಜಾತ್ರಾ ಮಹೋತ್ಸವು ಮಹತ್ವ ಪಡೆದುಕೊಂಡಿದೆ ಎಂದು ಆಹಾರ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ನಂಜನಗೂಡು (ಫೆ.07): ಸುತ್ತೂರು ಜಾತ್ರೆಯಲ್ಲಿ ಸಾಮಾಜಿಕ, ಶೈಕ್ಷಣಿಕ, ಕೃಷಿ, ಆರೋಗ್ಯದಂತಹ ಅನೇಕ ಕ್ಷೇತ್ರದಲ್ಲಿ ಆದ ಹೊಸ ಆವಿಷ್ಕಾರ ಹೊಸ ವಿಷಯಗಳನ್ನು ಜನರಿಗೆ ಅರಿವು ಮೂಡಿಸುತ್ತಿರುವ ಕಾರಣ ಇಡೀ ರಾಜ್ಯದಲ್ಲೇ ಸುತ್ತೂರು ಜಾತ್ರಾ ಮಹೋತ್ಸವು ಮಹತ್ವ ಪಡೆದುಕೊಂಡಿದೆ ಎಂದು ಆಹಾರ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ನಡೆಯುತ್ತಿರುವ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ವಸ್ತುಪ್ರದರ್ಶನ, ಕೃಷಿಮೇಳ, ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಹಾರ ಮತ್ತು ಆರೋಗ್ಯಕ್ಕೆ ನೇರ ಸಂಬಂಧವಿದ್ದು, ಆಹಾರದ ಪದ್ದತಿಗಳು ಉತ್ತಮವಾಗಿದ್ದರೆ ಆರೋಗ್ಯ ಚೆನ್ನಾಗಿರುತ್ತದೆ. ಮನುಷ್ಯನಿಗೆ ಅನೇಕ ರೋಗ ರುಜಿನಗಳು ಬರುತ್ತಿರುವುದು ನಮ್ಮ ಜೀವನ ಶೈಲಿ, ಆಹಾರ ಕ್ರಮದಿಂದ ಅದನ್ನು ನಿಯಂತ್ರಿಸುವುದು ಬಹಳ ಮುಖ್ಯವಾಗಿದೆ. ಯುವ ಪೀಳಿಗೆಯಲ್ಲಿ ಈ ಬಗ್ಗೆ ಹೆಚ್ಚಿನ ಅರಿವು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಜಾತ್ರಾ ಮಹೋತ್ಸವದಲ್ಲಿ ಆಹಾರ ಮೇಳ, ಆರೋಗ್ಯ ತಪಾಸಣೆ, ಕೃಷಿಮೇಳ, ಆಧ್ಯಾತ್ಮಿಕ, ಸಂದೇಶಗಳನ್ನು ಭಿತ್ತರಿಸುತ್ತಿವೆ ಎಂದರು.

ತಪ್ಪು ಮುಚ್ಚಲು ಕೇಂದ್ರದ ಮೇಲೆ ಸಿದ್ದರಾಮಯ್ಯ ಆರೋಪ: ಮಾಜಿ ಸಿಎಂ ಬೊಮ್ಮಾಯಿ

ಸಂಸ್ಕೃತಿಕ ಮೇಳವನ್ನು ಉದ್ಘಾಟಿಸಿದ ಶಿಕ್ಷಣ ಸಚಿವ ಮಧುಬಂಗಾರಪ್ಪ ಮಾತನಾಡಿ, ಸುತ್ತೂರು ಜಾತ್ರಾ ಮಹೋತ್ಸವದಲ್ಲಿ 2ನೇ ವರ್ಷ ಭಾಗಿಯಾಗಿದ್ದೇನೆ, ವರ್ಷದಿಂದ ವರ್ಷಕ್ಕೆ ಜಾತ್ರೆ ದೊಡ್ಡ ಮಟ್ಟದಲ್ಲಿ ಜರುಗುತ್ತಿದೆ. ಸುತ್ತೂರು ಮಠವು ಚಿಕ್ಕ ಸರ್ಕಾರವೆಂದರೆ ತಪ್ಪಾಗಲಾರದು, ಜನರ ಜೀವನಕ್ಕೆ, ಭವಿಷ್ಯಕ್ಕೆ ಒಳ್ಳೆಯ ದಾರಿಯಾಗುವಂತಹ ಕೃಷಿ, ಎಲ್ಲ ರಂಗದಲ್ಲೂ ಕೂಡ ಜನರಿಗೆ ಅರಿವು ಮೂಡಿಸುತ್ತಾ ಸರ್ಕಾರ ಮಾಡುವ ಕೆಲಸವನ್ನು ಸುತ್ತೂರು ಮಠ ನಿರ್ವಹಿಸುತ್ತಿರುವ ಕಾರಣ ಶ್ರೀ ಮಠವು ರಾಜ್ಯಕ್ಕೆ ಕಿರೀಟದಂತಾಗಿದೆ. ಅಲ್ಲದೆ ಶಾಲಾ ಮಕ್ಕಳ ಪ್ರತಿಭೆಗೆ ಅವಕಾಶ ಕಲ್ಪಿಸುವ ಕಲ್ಪಸುವ ವೇದಿಕೆಯಲ್ಲಿ ನಾನು ಭಾಗಿಯಾಗಿರುವುದು ಸಂತೋಷವಾಗಿದೆ ಎಂದರು.

ಹೈಕೋರ್ಟ್‌ ನ್ಯಾಯಾಲಯದ ನಿವೃತ್ತ ನ್ಯಾಯಾಮೂರ್ತಿ ಎ.ಎಸ್. ಮಚ್ಚಾಪುರ ಮಾತನಾಡಿ, ಜಾತ್ರೆಗಳು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದು ಮನುಷ್ಯ ಆನಂದ ಪಡೆದು ಜೀವನದಲ್ಲಿ ಸಾರ್ಥಕತೆ ಪಡೆಯುವ ಸನ್ನಿವೇಶದ ದಾರಿದೀಪವಾಗಿದೆ ಎಂದರು. ಪದ್ಮ ಪ್ರಶಸ್ತಿ ಪುರಸ್ಕೃತರಾದ ಪೆರ್ರಿ ಸಿಲ್ವೆನ್ ಫಿಲಿಯೋ ಜಾಟ್ ಮಾತನಾಡಿ, ಸಂಸ್ಕೃತಕ್ಕೆ ಜಾಗತಿಕ ಮನ್ನಣೆಯಿದ್ದು ಯುರೋಪಿಯನ್ ರಾಷ್ಟ್ರಗಳಲ್ಲಿ ಹೆಚ್ಚಿನ ಜನಮನ್ನಣೆಗಳಿಸಿದೆ. ಶಿವ ಅದ್ವೈತ, ವಿಶಿಷ್ಷ ಅದ್ವೈತ ಸಿದ್ದಾಂತಗಳು ಶಿವನ ಕಾಣುವ, ಶಿವನ ಆರಾಧನೆಯ ಪದ್ದತಿಗಳಾಗಿವೆ. ನಾನು ಶೈವ ಪದ್ದತಿಯನ್ನು ಹೆಚ್ಚು ಇಷ್ಟಪಡುತ್ತೇನೆ ಆದ್ದರಿಂದಲೇ ಸಂಸ್ಕೃತವನ್ನು ಹೆಚ್ಚು ಇಷ್ಟಪಡುತ್ತೇನೆ ಎಂದರು.

ಕನ್ಹೇರಿಯ ಸಿದ್ದಗಿರಿ ಸಂಸ್ಥಾನ ಮಠದ ಶ್ರೀ ಅದೃಶ್ಯಕಾಡ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ದೇವಾಲಯಗಳು, ಶ್ರದ್ದಾ ಕೇಂದ್ರಗಳು ನಾಡಿನ ಜನರನ್ನು ಒಂದೆಡೆ ಕಟ್ಟಿಹಾಕುವ ಕೇಂದ್ರಗಳಾಗಿದ್ದು ಜಾತ್ರೆಗಳು ಜನರನ್ನು ಒಗ್ಗೂಡಿಸುವ ಕೇಂದ್ರಗಳಾಗಿವೆ. ಹಲವಾರು ವಿದೇಶಿ ದಾಳಿಯಾದರೂ ಸಹ ನಮ್ಮ ದೇಶ ಸಂಸ್ಕೃತಿ ಗಟ್ಟಿಯಾಗಿ ಉಳಿಯಲು ನಮ್ಮ ದೇವಾಲಯ ಶ್ರದ್ದಾ ಕೇಂದ್ರಗಳೇ ಕಾರಣ ನಮ್ಮ ಹಿರಿಯರು ಜೀವನವನ್ನು ಆನಂದಮಯವಾಗಿಸಲು ತಿಥಿಪರ್ವದ ಮೂಲಕ ಉತ್ಸವಗಳನ್ನು, ಸ್ಮತಿಪರ್ವದ ಮೂಲಕ ಐತಿಹಾಸಿಕ ಘಟನೆಗಳ ಸಂಭ್ರವನ್ನು, ರಥಪರ್ವದ ಮೂಲಕ ಉಪಾಸನೆಯನ್ನು , ಋತುಪರ್ವಗಳೆಂಬ ಹಬ್ಬಗಳ ಮೂಲಕ ನಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ. 

ಸರ್ಕಾರಿ ದುಡ್ಡಿನಲ್ಲಿ ಕಾಂಗ್ರೆಸ್‌ ಪ್ರತಿಭಟನೆ ಮಾಡುತ್ತಿದೆ: ಕೆ.ಎಸ್.ಈಶ್ವರಪ್ಪ

ಅವುಗಳಲ್ಲಿ ವೈಜ್ಞಾನಿಕತೆ ಅಡಗಿದೆ. ಶಿಲ್ಪಶಾಸ್ತ್ರಗಳಲ್ಲೂ ವಿಜ್ಞಾನ ಅಡಗಿದೆ. ಇದನ್ನು ಅರಿಯದ ಕೆಲವು ವಿದ್ವಾಂಸರೆಂದು ಹೇಳಿಕೊಳ್ಳುವ ಬುದ್ದಿಜೀವಿಗಳು ದೇವಾಲಯಗಳು ಏಕೆ ಬೇಕು, ಜಾತ್ರೆಗಳು ಏಕೆ ಬೇಕು ಎಂದು ಕತ್ತೆ ಕಿರುಚಿದಂತೆ ಕಿರುಚುತ್ತಿದ್ದಾರೆ ಎಂದರು. ನಿಂಬಾಳ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ಕೆ.ಸಿ. ಶಿವಪ್ಪ, ಬೆಟಸೂರುಮಠ್, ಊಟಿ ಶಾಸಕ ಆರ್. ಗಣೇಶ್, ವಸುಂಧರಾ ಪಿಲಿಯೋ ಜಾಟ್ ಮುಖ್ಯ ಅತಿಥಿಗಳಾಗಿದ್ದರು. ಜಿ.ಎಲ್. ತ್ರಿಪುರಾಂತಕ ಸ್ವಾಗತಿಸಿದರು. ಸೋಮಶೇಖರ್ ನಿರೂಪಿಸಿ, ವಂದಿಸಿದರು.

click me!