
ಬೆಂಗಳೂರು (ಏ.8): ಸಂಸ್ಕೃತ ಅತ್ಯಂತ ಶ್ರೀಮಂತ ಭಾಷೆಯಾಗಿದ್ದು, ಅದರಲ್ಲಿರುವ ಜ್ಞಾನಭಂಡಾರವನ್ನು ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ಮಿಳಿತಗೊಳಿಸುವ ಕೆಲಸಗಳು ಆಗಬೇಕಿದೆ ಎಂದು ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಹೇಳಿದ್ದಾರೆ.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಮಂಗಳವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿವಿಯ 12 ಮತ್ತು 13ನೇ ದೀಕ್ಷಾಂತ ಘಟಿಕೋತ್ಸವದಲ್ಲಿ ಮಾತನಾಡಿ, ಸಂಸ್ಕೃತ ಭಾಷೆ ಭಾರತದ ಆತ್ಮವಿದ್ದಂತೆ. ಹಲವು ಭಾಷೆಗಳ ಜನನಿ. ಜಗತ್ತಿನ ಹಲವು ಸಮಸ್ಯೆಗಳಿಗೆ ಸಂಸ್ಕೃತದಲ್ಲಿರುವ ಜ್ಞಾನದ ಮೂಲಕ ಪರಿಹಾರ ದೊರೆಯಲಿದೆ ಎಂದರು.
ಘಟಿಕೋತ್ಸವ ಭಾಷಣ ಮಾಡಿದ ಖ್ಯಾತ ಹೃದ್ರೋಗ ತಜ್ಞ, ಸಂಸದ ಡಾ.ಸಿ.ಎನ್.ಮಂಜುನಾಥ್, ದೇಶದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾದಂತೆ ನೈತಿಕ ಮೌಲ್ಯ ಹಾಗೂ ಸಿದ್ಧಾಂತ ಕುಸಿಯುತ್ತಿವೆ. ಸ್ವಾತಂತ್ರ್ಯ ಬಂದಾಗ ದೇಶದ ಸಾಕ್ಷರತೆ ಪ್ರಮಾಣ ಶೇ.30ರಷ್ಟಿತ್ತು. ಆದರೆ ನೈತಿಕತೆ ಶೇ.100 ರಷ್ಟಿತ್ತು. ಆದರೀಗ ಸಾಕ್ಷರತೆ ಶೇ.85ರಷ್ಟಿದ್ದರೆ ನೈತಿಕ ಮೌಲ್ಯ ಶೇ.30ಕ್ಕೆ ಕುಸಿದಿದೆ ಎಂದರು.
ವಿವಿಯ ಕುಲಪತಿ ಪ್ರೊ.ಅಹಲ್ಯಾ ಎಸ್.ಮಾತನಾಡಿದರು. ಘಟಿಕೋತ್ಸವದಲ್ಲಿ ಭಿಕ್ಕು ಆನಂದ ಥೇರೊ, ಡಾ.ಪುಷ್ಪಾ ದೀಕ್ಷಿತ್, ಡಾ.ವ್ಯಾಸನಕೆರೆ ಪ್ರಭಂಜನಾಚಾರ್ಯ, ಪ್ರೊ.ತಿಂಗಪ್ಪ ಎಚ್. ಎಂ., ಪ್ರೊ. ಸುಕಾಂತ್ ಕುಮಾರ್ ಸೇನಾಪತಿ ಅವರಿಗೆ ಗೌರವ ಡಿ.ಲಿಟ್ ಪದವಿ ಪ್ರದಾನ ಮಾಡಲಾಯಿತು. ಕುಲಸಚಿವ ಪ್ರೊ. ವಿ. ಗಿರೀಶ್ ಚಂದ್ರ ಪಾಲ್ಗೊಂಡಿದ್ದರು.
ಘಟಿಕೋತ್ಸವದಲ್ಲಿ ಒಟ್ಟು 917 ವಿದ್ಯಾರ್ಥಿಗಳಿಗೆ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳನ್ನು ಪ್ರದಾನ ಮಾಡಲಾಯಿತು. 2023-24 ರ ಸಾಲಿನಲ್ಲಿ ರ್ಯಾಂಕ್ ಪಡೆದ ಒಟ್ಟು 21 ವಿದ್ಯಾರ್ಥಿಗಳು ನಗದು ಬಹುಮಾನ, 26 ಮಂದಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. 2024-25ರ ಸಾಲಿನಲ್ಲಿ 21 ಮಂದಿ ನಗದು ಬಹುಮಾನ, 27 ವಿದ್ಯಾರ್ಥಿಗಳು ಸ್ವರ್ಣ ಪದಕಕ್ಕೆ ಭಾಜನರಾದರು. 36 ಮಂದಿ ಪಿಎಚ್.ಡಿ-ವಿದ್ಯಾವಾರಿಧಿ’ ಪದವಿಯನ್ನು ಸ್ವೀಕರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ