
ಬೆಂಗಳೂರು (ಡಿ.15): ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಬೆಳ್ಳಿ ಪೂಜಾ ವಸ್ತುಗಳು ಹಾಗೂ ಬೃಹತ್ ಗಂಟೆ ಸೇರಿದಂತೆ ಅಮೂಲ್ಯ ವಸ್ತುಗಳನ್ನು ದೇಣಿಗೆ ನೀಡಿ ಭಕ್ತಿಯನ್ನು ಮೆರೆದಿದ್ದ ಬೆಂಗಳೂರಿನ ಉದ್ಯಮಿಯೊಬ್ಬರು ಇದೀಗ ಸೈಬರ್ ವಂಚಕರ ಬಲೆಗೆ ಬಿದ್ದು ಬರೋಬ್ಬರಿ ₹ 8.03 ಕೋಟಿ ಕಳೆದುಕೊಂಡಿರುವ ಘಟನೆ ನಡೆದಿದೆ. ವಂಚಕರು ಉದ್ಯಮಿಯ ಹಣಕಾಸು ಮತ್ತು ಸಾಲದ ವಿವರಗಳನ್ನು ತಿಳಿದು ಮೋಸ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ.
ರಾಜೇಂದ್ರ ನಾಯ್ಡು ಎಂಬ ಉದ್ಯಮಿ ಈ ಸೈಬರ್ ವಂಚನೆಗೆ ಬಲಿಯಾಗಿದ್ದು, ಇತ್ತೀಚೆಗೆ ಅವರು ರಿಲಯನ್ಸ್ ಕ್ಯಾಪಿಟಲ್ನಲ್ಲಿ ಪಡೆದಿದ್ದ ದೊಡ್ಡ ಮೊತ್ತದ ಸಾಲವನ್ನು ತೀರಿಸಿದ್ದರು. ಈ ಸಾಲ ತೀರಿಸಿದ ಮಾಹಿತಿ ಅರಿತಿದ್ದ ವಂಚಕರು, ರಾಜೇಂದ್ರ ನಾಯ್ಡು ಅವರನ್ನು ಸಂಪರ್ಕಿಸಿ ಅವರ ಸಿಬಿಲ್ ಸ್ಕೋರ್ ಉತ್ತಮವಾಗಿದೆ ಎಂದು ನಂಬಿಸಿದ್ದಾರೆ. ವಂಚಕರು ರಿಲಯನ್ಸ್ ಹೆಸರನ್ನು ದುರ್ಬಳಕೆ ಮಾಡಿಕೊಂಡು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಗಳಿಸಬಹುದು ಎಂದು ಆಮಿಷವೊಡ್ಡಿದ್ದಾರೆ. ಚಾರಿಟಿ ಸೇವೆಗಳಿಗೆ ಸ್ವಲ್ಪ ಹಣವನ್ನು ಬಳಸಬಹುದು ಎಂಬ ವಂಚಕರ ಮಾತಿಗೆ ಒಪ್ಪಿದ ರಾಜೇಂದ್ರ ನಾಯ್ಡು, ರಿಲಯನ್ಸ್ ಹೆಸರನ್ನು ಕೇಳಿ ಅದು ಒಳ್ಳೆಯ ಕಂಪನಿ ಇರಬಹುದು ಎಂದು ನಂಬಿ ಹೂಡಿಕೆಗೆ ಸಿದ್ಧರಾಗಿದ್ದಾರೆ.
ವಂಚಕರು ಮೊದಲು ರಾಜೇಂದ್ರ ನಾಯ್ಡು ಅವರಿಗೆ 'RARCllpro' ಎಂಬ ನಕಲಿ ಅಪ್ಲಿಕೇಶನ್ ಅನ್ನು ಮೊಬೈಲ್ನಲ್ಲಿ ಇನ್ಸ್ಟಾಲ್ ಮಾಡುವಂತೆ ಸೂಚಿಸಿದ್ದಾರೆ. ಈ ಆ್ಯಪ್, ನಿಜವಾದ ಷೇರು ಮಾರುಕಟ್ಟೆ ಅಪ್ಲಿಕೇಶನ್ನಂತೆಯೇ ಕಾಣುವಂತೆ ವಿನ್ಯಾಸಗೊಳಿಸಲಾಗಿತ್ತು. ಇದನ್ನು ನಂಬಿದ ನಾಯ್ಡು ಅವರು ಮೊದಲು ₹25 ಲಕ್ಷಗಳನ್ನು RTGS ಮೂಲಕ ವಂಚಕರು ಸೂಚಿಸಿದ ಖಾತೆಗೆ ವರ್ಗಾಯಿಸಿದ್ದಾರೆ. ನವೆಂಬರ್ ತಿಂಗಳವರೆಗೆ ಹಂತ ಹಂತವಾಗಿ ಒಟ್ಟು ₹ 8.03 ಕೋಟಿ ಹಣವನ್ನು ವರ್ಗಾಯಿಸಿದ್ದಾರೆ.
ನವೆಂಬರ್ನಲ್ಲಿ, ನಕಲಿ 'RARCllpro' ಆ್ಯಪ್ನಲ್ಲಿ ನಾಯ್ಡು ಅವರ ಹೂಡಿಕೆಯ ಮೌಲ್ಯ ₹ 59.4 ಕೋಟಿ ಎಂದು ತೋರಿಸಿದೆ. ತಮಗೆ ಭಾರಿ ಲಾಭ ಬಂದಿದೆ ಎಂದು ನಂಬಿದ ಅವರು ₹ 15 ಕೋಟಿ ಹಿಂಪಡೆಯಲು ಪ್ರಯತ್ನಿಸಿದಾಗ ವಂಚಕರ ನಿಜಬಣ್ಣ ಬಯಲಾಗಿದೆ. ಹಣ ಹಿಂಪಡೆಯಲು 18% ಸೇವಾ ಶುಲ್ಕವಾಗಿ ಸುಮಾರು ₹ 2.70 ಕೋಟಿ ಪಾವತಿಸಬೇಕು ಎಂದು ವಂಚಕರು ಆಗ್ರಹಿಸಿದ್ದಾರೆ. ಸಂದೇಹಗೊಂಡ ರಾಜೇಂದ್ರ ನಾಯ್ಡು ಅವರು ಸೈಬರ್ ಹೆಲ್ಪ್ ಲೈನ್ 1930ಕ್ಕೆ ಕರೆ ಮಾಡಿ ಮಾಹಿತಿ ನೀಡಿ ಆನ್ಲೈನ್ ದೂರು ದಾಖಲಿಸಿದರು. ನಂತರ ದಕ್ಷಿಣ ವಿಭಾಗದ ಸೆನ್ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದಾಗ, ತಾವು ಮೋಸ ಹೋಗಿರುವುದು ದೃಢಪಟ್ಟಿದೆ.
ಸದ್ಯ ದಕ್ಷಿಣ ವಿಭಾಗ ಸೆನ್ ಪೊಲೀಸರು ತನಿಖೆ ಆರಂಭಿಸಿದ್ದು, ವಂಚಕರ ಖಾತೆಯಲ್ಲಿದ್ದ ಸುಮಾರು ₹61 ಲಕ್ಷ ಹಣವನ್ನು ಫ್ರೀಜ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಉದ್ಯಮಿಯ ಖಾಸಗಿ ಹಣಕಾಸು ವಿವರಗಳನ್ನು ವಂಚಕರು ಹೇಗೆ ಪಡೆದರು ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ