ಬಿಜೆಪಿಗರ ದಾಖಲೆ ಬಿಡುಗಡೆ ಮಾಡುವೆ: ರೆಡ್ಡಿ ಬಾಂಬ್‌

Published : Dec 26, 2022, 12:34 PM ISTUpdated : Dec 26, 2022, 12:35 PM IST
ಬಿಜೆಪಿಗರ ದಾಖಲೆ ಬಿಡುಗಡೆ ಮಾಡುವೆ: ರೆಡ್ಡಿ ಬಾಂಬ್‌

ಸಾರಾಂಶ

‘ಬಿಜೆಪಿ ತೊರೆದು ಹೊಸ ಪಕ್ಷ ಸ್ಥಾಪಿಸುವಂತಹ ವಾತಾವರಣ ಸೃಷ್ಟಿಸಿದ ಸ್ವಪಕ್ಷೀಯರ ಬಗ್ಗೆ ಸಮಯ ಬಂದಾಗ ದಾಖಲೆಗಳನ್ನು ಬಿಡುಗಡೆ ಮಾಡುವೆ’ ಮಾಜಿ ಸಚಿವ ಜನಾರ್ದನ ರೆಡ್ಡಿ ‘ಬಾಂಬ್‌’ ಸಿಡಿಸಿದ್ದಾರೆ.

ಬೆಂಗಳೂರು (ಡಿ.26) : ‘ಬಿಜೆಪಿ ತೊರೆದು ಹೊಸ ಪಕ್ಷ ಸ್ಥಾಪಿಸುವಂತಹ ವಾತಾವರಣ ಸೃಷ್ಟಿಸಿದ ಸ್ವಪಕ್ಷೀಯರ ಬಗ್ಗೆ ಸಮಯ ಬಂದಾಗ ದಾಖಲೆಗಳನ್ನು ಬಿಡುಗಡೆ ಮಾಡುವೆ’ ಮಾಜಿ ಸಚಿವ ಜನಾರ್ದನ ರೆಡ್ಡಿ ‘ಬಾಂಬ್‌’ ಸಿಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಡಿಯೂರಪ್ಪ ಅವರು ಮಾತ್ರ ಆತ್ಮೀಯತೆಯಿಂದ ನಡೆಸಿಕೊಂಡಿದ್ದು ಹೆಚ್ಚು ಕೃತಜ್ಞತಾ ಭಾವ ಹೊಂದಿದ್ದಾರೆ. ಆದರೆ ನಾನು ಬಿಜೆಪಿ ತೊರೆಯುವಂತಹ ವಾತಾವರಣವನ್ನು ಕೆಲವರು ನಿರ್ಮಿಸಿದರು. ಈ ಬಗ್ಗೆ ದಾಖಲೆಗಳಿದ್ದು ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ. ವ್ಯಾಪಾರ-ವ್ಯವಹಾರ ಬದಿಗೊತ್ತಿ ಬಳ್ಳಾರಿಯಲ್ಲಿ ನೆಲೆಯೇ ಇಲ್ಲದ ಬಿಜೆಪಿಗೆ ನೆಲೆ ಕಲ್ಪಿಸಿದ್ದಕ್ಕೆ ತಮ್ಮನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Ticket fight: ಗಂಗಾವತಿಯಲ್ಲಿ ಗಣಿ ರೆಡ್ಡಿ ಸ್ಪರ್ಧೆ ಬಗ್ಗೆ ಸಂಚಲನ

2018 ರ ವಿಧಾನ ಸಭಾ ಚುನಾವಣಾ ಪ್ರಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ‘ಜನಾರ್ದನ ರೆಡ್ಡಿಗೂ, ಬಿಜೆಪಿಗೂ ಸಂಬಂಧವಿಲ್ಲ’ ಎಂದು ಹೇಳಿಕೆ ನೀಡಿದರು. ಇದಾದ ಎರಡೇ ದಿನಕ್ಕೆ ಶ್ರೀರಾಮುಲು ದೂರವಾಣಿ ಕರೆ ಮಾಡಿ, ‘ಅಮಿತ್‌ ಶಾ ಹೇಳಿದ್ದಾರೆ. ಮಾತನಾಡಬೇಕಂತೆ. ದೆಹಲಿಗೆ ಬಾ’ ಎಂದು ಕರೆಸಿಕೊಂಡರು. ಆಗ ದೆಹಲಿಗೆ ತೆರಳಿದಾಗ, ‘ಶ್ರೀರಾಮುಲು ಪರ ಚುನಾವಣಾ ಪ್ರಚಾರ ಮಾಡಿ. ಮುಂದಿನ ದಿನಗಳಲ್ಲಿ ಉತ್ತಮ ಸ್ಥಾನ ನೀಡುತ್ತೇವೆ’ ಎಂದು ಭರವಸೆ ನೀಡಿ ಬಳಿಕ ಶಾ ಕೈಕೊಟ್ಟರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಣಿಗಾರಿಕೆಯಿಂದ ಲಾಭ

27 ವರ್ಷಕ್ಕೇ ನಾನು ಬಳ್ಳಾರಿಯಲ್ಲಿ ಎನೋಬಲ್‌ ಇಂಡಿಯಾ ಎಂಬ ಕಂಪನಿ ಆರಂಭಿಸಿದ್ದೆ. ಮೂರು ರಾಜ್ಯದಲ್ಲಿ ನೂರಾರು ಶಾಖೆಗಳಿದ್ದು, ಸಾವಿರಾರು ನೌಕರರಿದ್ದರು. ಬಳಿಕ ದೇವರ ದಯೆಯಿಂದ ಗಣಿಗಾರಿಕೆಯಲ್ಲಿ ತೊಡಗಿಕೊಂಡಿದ್ದರಿಂದ ಉತ್ತಮ ಲಾಭ ಬಂತು. ನಂತರ ರಿಸವ್‌ರ್‍ ಬ್ಯಾಂಕ್‌ ಆಫ್‌ ಇಂಡಿಯಾಕ್ಕೆ ಮಾಹಿತಿ ನೀಡಿ ಎನೋಬಲ್‌ ಇಂಡಿಯಾ ಕಂಪನಿಯನ್ನು ಮುಚ್ಚಿದೆವು ಎಂದು ಮಾಹಿತಿ ನೀಡಿದರು.

ಸಚಿವ ಶ್ರೀರಾಮುಲು ಮತ್ತು ನಾನು ಹಲವು ವರ್ಷದಿಂದ ಆತ್ಮೀಯ ಸ್ನೇಹಿತರು. ಶ್ರೀರಾಮುಲು ಸೋದರ ಮಾವನನ್ನು ರಾಜಕೀಯ ಶತ್ರುಗಳು ಹತ್ಯೆ ಮಾಡಿದರು. ಬಳಿಕ ಶ್ರೀರಾಮುಲು ನನ್ನ ಆಶ್ರಯಕ್ಕೆ ಬಂದರು. ನಗರಸಭೆ ಚುನಾವಣೆಗೆ ಸ್ಪರ್ಧಿಸಿದರು. ಬಳಿಕ ಶಾಸಕ, ಸಚಿವರಾದರು. ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಕಾಂಗ್ರೆಸ್‌ ರಾಷ್ಟ್ರೀಯ ನಾಯಕಿ ಸೋನಿಯಾ ಗಾಂಧಿ ಅವರ ವಿರುದ್ಧ ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್‌ ಸ್ಪರ್ಧಿಸಿದಾಗ ನಾನು ಬಿಜೆಪಿ ಜೊತೆ ಗುರುತಿಸಿಕೊಂಡೆ ಎಂದು ನೆನಪಿಸಿಕೊಂಡರು.

ಸುಷ್ಮಾ ನೆನೆದು ಭಾವುಕ:

ಸುಷ್ಮಾ ಸ್ವರಾಜ್‌ ಹೆಸರು ಪ್ರಸ್ತಾಪಿಸಿ ಭಾವುಕರಾದ ಜನಾರ್ದನ ರೆಡ್ಡಿ, ‘ ಸುಷ್ಮಾ ಅವರಲ್ಲಿ ನಾನು ತಾಯಿಯನ್ನು ಕಂಡೆ. ಅಕ್ರಮ ಗಣಿಗಾರಿಕೆ ನಡೆಸದಿದ್ದರೂ ಸುಷ್ಮಾ ಅವರನ್ನು ಬಳ್ಳಾರಿಯಲ್ಲಿ ಬೆಂಬಲಿಸಿದ್ದಕ್ಕಾಗಿ ಯುಪಿಎ ಸರ್ಕಾರ ಐಟಿ ದಾಳಿ ನಡೆಸಿ ಕಿರುಕುಳ ನೀಡಿತು. ಸಾವಿರ ಕೋಟಿ, ಲಕ್ಷಾಂತರ ಕೋಟಿ ರು. ಅಕ್ರಮ ನಡೆದಿದೆ ಎಂದೆಲ್ಲಾ ಆರೋಪಿಸಿ ದೇಶ-ವಿದೇಶದಲ್ಲೆಲ್ಲಾ ಜಾಲಾಡಿ ಕೊನೆಗೆ 1200 ಕೋಟಿ ರು. ಅಕ್ರಮ ಎಂದು ಚಾಜ್‌ರ್‍ಶೀಟ್‌ ಹಾಕಿದರು’ ಎಂದು ಟೀಕಿಸಿದರು.

ಸಚಿವ ಸ್ಥಾನ ತಿರಸ್ಕರಿಸಿದ್ದೆ

ಬಿಜೆಪಿ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪ ಅವರು ನನ್ನನ್ನು ಸಚಿವನನ್ನಾಗಿ ಮಾಡುತ್ತೇನೆ ಎಂದು ಹೇಳಿದರು. ಆದರೆ ನಾನು ಸಚಿವ ಸ್ಥಾನ ತಿರಸ್ಕರಿಸಿ ಹಿಂದುಳಿದ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಶ್ರೀರಾಮುಲು ಅವರಿಗೆ ಅವಕಾಶ ಕಲ್ಪಿಸಿಕೊಟ್ಟೆಎಂದು ರೆಡ್ಡಿ ನೆನಪಿಸಿಕೊಂಡರು.

ಪತ್ನಿ ಬೆಂಬಲ ಮರೆಯುವಂತಿಲ್ಲ

ನನ್ನ ಪತ್ನಿ ಅರುಣಾ ಅವರದ್ದು ಮೂಲತಃ ಶ್ರೀಮಂತರ ಕುಟುಂಬ, ರಾಜಕೀಯ ಹಿನ್ನೆಲೆಯೂ ಇದೆ. ಅಕ್ರಮ ಗಣಿಗಾರಿಕೆ ಆರೋಪದಡಿ ನಾನು ಜೈಲಿಗೆ ಹೋದಾಗ ಮಕ್ಕಳನ್ನು ಕಟ್ಟಿಕೊಂಡು ಪತ್ನಿ ಸಾಕಷ್ಟುಸಂಕಷ್ಟಅನುಭವಿಸಿದರೂ ನನಗೆ ನೀಡಿದ ಬೆಂಬಲ ಮರೆಯುವಂತಿಲ್ಲ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಇದೀಗ ನನ್ನ ಜೊತೆ ಹೊಸ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲಿದ್ದಾರೆ ಎಂದು ರೆಡ್ಡಿ ಹೇಳಿದರು.

ಗೋಲಿ ಆಡುವಾಗಲೇ ಸೋಲೊಪ್ಪಿಲ್ಲ

ಗೋಲಿ ಆಡುವಾಗಲೇ ನಾನು ಸೋಲನ್ನು ಒಪ್ಪಿಲ್ಲ. ಇನ್ನು ಈಗ ರಾಜಕೀಯದಲ್ಲಿ ಸೋಲು ಒಪ್ಪುವ ಮಾತೇ ಇಲ್ಲ. ಎಲ್ಲವನ್ನೂ ಪರಾಮರ್ಶಿಸಿಯೇ ಸಕ್ರಿಯ ರಾಜಕೀಯ ಪ್ರವೇಶಿಸಿದ್ದೇನೆ ಎಂದು ರೆಡ್ಡಿ ಟೀಕಾಕಾರರಿಗೆ ತಿರುಗೇಟು ನೀಡಿದರು.

ಮಗಳ ಹೆರಿಗೆ ಆಗಿದ್ದಕ್ಕೆ ಸಾಕ್ಷ್ಯ ಕೇಳಿದ ಸಿಬಿಐ!

ನಾನು ಬಳ್ಳಾರಿ ಪ್ರವೇಶಿಸದಂತೆ ನ್ಯಾಯಾಲಯ ಆದೇಶ ಹೊರಡಿಸಿತ್ತು. ಮಗಳು ಹೆರಿಗೆಯಾಗಿದ್ದರಿಂದ ಮೂರು ತಿಂಗಳು ಬಳ್ಳಾರಿಯಲ್ಲಿರಲು ಅವಕಾಶ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರೆ ಸಿಬಿಐ ಆಕ್ಷೇಪ ವ್ಯಕ್ತಪಡಿಸಿತ್ತು. ಹೆರಿಗೆ ಆಗಿಲ್ಲ ಎಂಬಂತೆ ಸಿಬಿಐ ನಡೆದುಕೊಂಡಿತು. ಮುಂಜಾನೆ ಆಗಮಿಸಿದ ಸಿಬಿಐ ಅಧಿಕಾರಿಗಳು ಸಾಕ್ಷಿಗಾಗಿ ಮಗಳು ಮತ್ತು ಪುಟ್ಟಕಂದಮ್ಮನ ಫೆäಟೋ ತೆಗೆದುಕೊಂಡರು. ಯಾರಾದರೂ ಹೆರಿಗೆ ಆದ ಬಗ್ಗೆ ಸುಳ್ಳು ಮಾಹಿತಿ ನೀಡಲು ಸಾಧ್ಯವೇ ಎಂದು ರೆಡ್ಡಿ ಪ್ರಶ್ನಿಸಿದರು.

ಬೇಡವೆಂದರೂ ಸಚಿವ ಸ್ಥಾನ ಕೊಟ್ಟರು

2008 ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ 110 ಸ್ಥಾನ ಗಳಿಸಿತು. ಬಳ್ಳಾರಿಯಲ್ಲಿ 10 ಸ್ಥಾನ ಸೇರಿದಂತೆ ಆ ಭಾಗದಲ್ಲಿ ನನ್ನ ಪರಿಶ್ರಮದಿಂದ 30 ಸ್ಥಾನ ಬಂದಿದ್ದವು. ನಾಲ್ವರು ಪಕ್ಷೇತರರು ನನ್ನ ಬಳಿ ಬಂದರು. ಆಗ ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಕರುಣಾಕರ ರೆಡ್ಡಿ, ಶ್ರೀರಾಮುಲು ಜೊತೆ ನೀನೂ ಸಹ ಸಚಿವನಾಗು ಎಂದು ಯಡಿಯೂರಪ್ಪ ಹೇಳಿದರೂ ನಾನು ಒಪ್ಪಿರಲಿಲ್ಲ. ಆದರೆ ಬಲವಂತ ಮಾಡಿ ಸಚಿವ ಸ್ಥಾನ ನೀಡಿದರು. ಯಡಿಯೂರಪ್ಪ ಅವರು ಹೆಚ್ಚು ಕೃತಜ್ಞತೆ ಇರುವ ವ್ಯಕ್ತಿ ಎಂದು ಪ್ರಶಂಸಿಸಿದರು.

ಹಣಿಯಲು ಬಳ್ಳಾರಿ ರಿಪಬ್ಲಿಕ್‌ ಪಟ್ಟ

ಗಣಿಗಾರಿಕೆಗೆ ಶೇ.6 ರಷ್ಟುಶುಲ್ಕ ವಿಧಿಸಿ ಅದನ್ನು ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರಿನ ಕೆಲ ಪ್ರದೇಶ ಅಭಿವೃದ್ಧಿ ಬಗ್ಗೆ ನಾನು ಚಿಂತನೆ ನಡೆಸಿ ಗಣಿ ಮಾಲಿಕರ ಸಭೆ ನಡೆಸಿದೆ. ಆದರೆ ಅವರಾರ‍ಯರೂ ಶುಲ್ಕ ಕಟ್ಟಲು ಒಪ್ಪಲಿಲ್ಲ. ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರಿಗೆ ಹೇಳಿದಾಗ ಒಪ್ಪಿ ಸರ್ಕಾರಿ ಆದೇಶ ಹೊರಡಿಸಿದರು. ಇದನ್ನು ಹೈಕೋರ್ಚ್‌, ಸುಪ್ರೀಂ ಕೋರ್ಚ್‌ನಲ್ಲಿ ಪ್ರಶ್ನಿಸಿದರೂ ಸರ್ಕಾರದ ಪರವಾಗಿ ತೀರ್ಪು ಬಂತು. 13 ವರ್ಷದಲ್ಲಿ ಸರ್ಕಾರಕ್ಕೆ 25 ಸಾವಿರ ಕೋಟಿ ತೆರಿಗೆ ಬಂದಿದೆ. ನಾನು ಹೀಗೆ ಮಾಡಿದೆ ಎಂಬ ಸಿಟ್ಟಿನಿಂದ ಕೆಲ ಗಣಿ ಮಾಲಿಕರು ಬಳ್ಳಾರಿ ರಿಪಬ್ಲಿಕ್‌ ಪಟ್ಟಕಟ್ಟಿದರು ಎಂದು ಟೀಕಿಸಿದರು.

Janardhana Reddy: ಜನಾರ್ದನ ರೆಡ್ಡಿಯಿಂದ ದೂರ-ದೂರ: ಗಣಿಧಣಿಯಿಂದ ಅಂತರ ಕಾಯ್ದುಕೊಂಡ ಸಹೋದರ & ಸ್ನೇಹಿತ

ಸುಷ್ಮಾ ಸ್ವರಾಜ್‌ ಅವರು ಚುನಾವಣೆಯಲ್ಲಿ ಪರಾಭವಗೊಂಡರೂ ಬಳ್ಳಾರಿಯ ನಂಟನ್ನು ಬಿಡಲಿಲ್ಲ. ಪ್ರತಿವರ್ಷ ವರಮಹಾಲಕ್ಷ್ಮೇ ಹಬ್ಬದಂದು ಆಗಮಿಸುತ್ತಿದ್ದರು. ನಾನು ಮತ್ತು ಶ್ರೀರಾಮುಲು ಅವರನ್ನು ಮಕ್ಕಳಂತೆ ಕಾಣುತ್ತಿದ್ದರು. ನಂತರ ನಾವು ವ್ಯಾಪಾರ ಬಿಟ್ಟು ಬಿಜೆಪಿ ಸಂಘಟಿಸಲು ಮುಂದಾದೆವು. ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿಗೆ ನೆಲೆಯೇ ಇರಲಿಲ್ಲ. ಒಬ್ಬ ಗ್ರಾಮ ಪಂಚಾಯಿತಿ ಸದಸ್ಯನೂ ಇರಲಿಲ್ಲ. ಬಳಿಕ ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ಶಾಸಕರು, ಸಂಸದರೆಲ್ಲಾ ಬಿಜೆಪಿಯಿಂದಲೇ ಆಯ್ಕೆ ಆಗುವ ವಾತಾವರಣ ನಿರ್ಮಿಸಿದೆವು. ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿಯಲು ಶ್ರಮಿಸಿದರೂ ಪಕ್ಷ ತೊರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿವರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

5 States Assembly Election Results 2026: 'ದಕ್ಷಿಣ ಭಾರತದಲ್ಲಿ ಬಿಜೆಪಿ ಬಾಲ ಬಿಚ್ಚಲು ಸಾಧ್ಯವಿಲ್ಲ' ತಮಿಳುನಾಡು, ಬಂಗಾಳ ಫಲಿತಾಂಶದ ಬಗ್ಗೆ ಬಿಕೆ ಹರಿಪ್ರಸಾದ್ ಸ್ಫೋಟಕ ಹೇಳಿಕೆ!
ಬಾಗಲಕೋಟೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು, ಉಮೇಶ್ ಮೇಟಿ 22 ಸಾವಿರ ಅಂತರದಿಂದ ಗೆಲುವು, ಮುಗಿಲು ಮುಟ್ಟಿದ ಸಂಭ್ರಮ