‘ಸೀಡಿ ಗ್ಯಾಂಗ್‌’ನ ಬಗ್ಗೆ ಬಾಯ್ಬಿಟ್ಟ ಬಾಯ್‌ಫ್ರೆಂಡ್!‌

Published : Mar 21, 2021, 07:38 AM ISTUpdated : Mar 21, 2021, 07:46 AM IST
‘ಸೀಡಿ ಗ್ಯಾಂಗ್‌’ನ ಬಗ್ಗೆ ಬಾಯ್ಬಿಟ್ಟ ಬಾಯ್‌ಫ್ರೆಂಡ್!‌

ಸಾರಾಂಶ

‘ಸೀಡಿ ಗ್ಯಾಂಗ್‌’ನ ಬಗ್ಗೆ ಬಾಯ್ಬಿಟ್ಟ ಬಾಯ್‌ಫ್ರೆಂಡ್‌| ನರೇಶ್‌, ಶ್ರವಣ್‌ರನ್ನು ನಾನೂ ಭೇಟಿಯಾಗಿದ್ದೆ| ಕೆಲವು ಬಾರಿ ಹಣದ ವಿಚಾರ ಚರ್ಚಿಸಿದ್ದರು| ಯುವತಿ ಜತೆ ಆಂಧ್ರಕ್ಕೆ ಹೋಗಿದ್ದಾರೆ: ಆಕಾಶ್‌| ನ್ಯಾಯಾಧೀಶರ ಸಮ್ಮುಖ ಹೇಳಿಕೆ ದಾಖಲು

 ಬೆಂಗಳೂರು(ಮಾ.21): ಮಾಜಿ ಸಚಿವರ ಲೈಂಗಿಕ ಹಗರಣದ ಸಿ.ಡಿ. ಸ್ಫೋಟದ ಸಂಚಿನ ಕುರಿತು ನ್ಯಾಯಾಧೀಶರ ಸಮ್ಮುಖದಲ್ಲಿ ವಿವಾದಿತ ಯುವತಿಯ ಬಾಯ್‌ಫ್ರೆಂಡ್‌ ಎನ್ನಲಾದ ಬೀದರ್‌ ಜಿಲ್ಲೆಯ ಆಕಾಶ್‌ ತಲವಾಡೆ ಹೇಳಿಕೆಯನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ದಾಖಲಿಸಿಕೊಂಡಿದೆ. ರಾಸಲೀಲೆ ಸಿ.ಡಿ. ಬಹಿರಂಗದಲ್ಲಿ ಖಾಸಗಿ ಸುದ್ದಿವಾಹಿನಿ ಪತ್ರಕರ್ತರಾದ ನರೇಶ್‌ ಗೌಡ, ಶ್ರವಣ್‌, ಭವಿತ್‌ ಹಾಗೂ ಯುವತಿಯ ಸ್ನೇಹಿತರ ಪಾತ್ರದ ಬಗ್ಗೆ ಆಕಾಶ್‌ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

ಸಿ.ಡಿ. ಸ್ಫೋಟದ ಸಂಚಿನಲ್ಲಿ ಪಾಲ್ಗೊಂಡ ಶಂಕೆ ಮೇರೆಗೆ ಆಕಾಶ್‌ನನ್ನು ವಶಕ್ಕೆ ಪಡೆದಿರುವ ಎಸ್‌ಐಟಿ, ಬಳಿಕ ನಗರದ ಮ್ಯಾಜಿಸ್ಪ್ರೇಟ್‌ ಕೋರ್ಟ್‌ನಲ್ಲಿ ಸಿಆರ್‌ಪಿಸಿ 164ರಡಿ ಆತನ ಹೇಳಿಕೆ ದಾಖಲಿಸಿಕೊಂಡಿದೆ. ಮೂರು ದಿನಗಳ ಹಿಂದೆ ಸಿ.ಡಿ. ಸ್ಫೋಟದ ಮಾಸ್ಟರ್‌ ಮೈಂಡ್‌ ಎನ್ನಲಾದ ಪತ್ರಕರ್ತ ನರೇಶ್‌ ಗೌಡ ಹಾಗೂ ಭವಿತ್‌ ವಿಡಿಯೋ ಹೇಳಿಕೆ ನೀಡಿದ ಬೆನ್ನಲ್ಲೇ ನ್ಯಾಯಾಧೀಶರ ಮುಂದೆ ಆಕಾಶ್‌ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ.

ಗೋವಾ ಹೋಗಿದ್ದು ನಿಜ, ಹಣದ ವಿಚಾರ ಗೊತ್ತಿಲ್ಲ:

ಬೀದರ್‌ ಜಿಲ್ಲೆ ಭಾಲ್ಕಿ ತಾಲೂಕಿನ ಆಕಾಶ್‌, ಬೆಂಗಳೂರಿನಲ್ಲಿ ಸಾಕ್ಷ್ಯಚಿತ್ರಗಳ ತಯಾರಿಕೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಹಲವು ದಿನಗಳ ಹಿಂದೆ ಆತನಿಗೆ ವಿವಾದಿತ ಯುವತಿ ಪರಿಚಯವಾಗಿ ಬಳಿಕ ಪ್ರೇಮವಾಗಿತ್ತು. ಈ ಪ್ರೀತಿ ವಿಚಾರವು ಎರಡೂ ಕುಟುಂಬಗಳಿಗೆ ತಿಳಿದು ಮದುವೆ ಹಂತಕ್ಕೆ ಬಂದಿತ್ತು. ಅಷ್ಟರಲ್ಲಿ ಲೈಂಗಿಕ ವಿವಾದ ಬೆಳಕಿಗೆ ಬಂದು ಈ ಪ್ರೇಮ ಜೋಡಿಗೆ ಸಂಕಷ್ಟಎದುರಾಗಿದೆ. ಪೊಲೀಸರ ಬಂಧನ ಭೀತಿಯಿಂದ ಯುವತಿ ಜತೆ ತಪ್ಪಿಸಿಕೊಳ್ಳದೆ ಆಕಾಶ್‌ ಊರಿಗೆ ಮರಳಿದ್ದ ಎಂದು ಮೂಲಗಳು ಹೇಳಿವೆ.

ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಗೆಳತಿ, ಬಳಿಕ ಪಿಆರ್‌ ಮಾಡುತ್ತಿರುವುದಾಗಿ ಹೇಳಿದ್ದಳು. ನನಗೆ ಅಧಿಕಾರಿಗಳು, ಸಚಿವರ ಪರಿಚಯವಿದೆ. ಒಬ್ಬ ಸಚಿವರು ನನಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಸರ್ಕಾರಿ ಉದ್ಯೋಗ ಸಿಕ್ಕಿದ ಬಳಿಕ ಮದುವೆ ಮಾಡಿಕೊಳ್ಳೋಣ ಎಂದಿದ್ದಳು. ಆದರೆ ಮಾ.1ರಂದು ಆರ್‌.ಟಿ.ನಗರದ ಸಮೀಪದ ಹೋಟೆಲ್‌ನಲ್ಲಿ ಅವಳ ಜೊತೆಗೆ ಕೆಲವರನ್ನು ನಾನು ಭೇಟಿಯಾಗಿದ್ದೆ. ನನಗೆ ಆ ಮುಂಚೆ ಅಲ್ಲಿದ್ದವರು ಪರಿಚಯವಿರಲಿಲ್ಲ. ಆ ಮೇಲೆ ಹೆಸರುಗಳು ಗೊತ್ತಾಯಿತು. ಚಾನಲ್‌ ರಿಪೋರ್ಟರ್‌ ಎಂದು ನರೇಶ್‌ ಗೌಡ, ಶ್ರವಣ್‌ ಪರಿಚಯ ಮಾಡಿಕೊಂಡರು ಎಂದು ಆಕಾಶ್‌ ಹೇಳಿದ್ದಾನೆ ಎನ್ನಲಾಗಿದೆ.

ಮಾ.1ರಂದು ರಾತ್ರಿ ನಮಗೆ ಗೋವಾಕ್ಕೆ ತೆರಳುವಂತೆ ಅವರು ಸೂಚಿಸಿದರು. ನಂತರ ಗೆಳತಿಯ ಪರಿಚಯದವರ ಮೂಲಕ ಗೋವಾದಲ್ಲಿ ಉಳಿಯಲು ಹೋಟೆಲ್‌ ರೂಮ್‌ ಬುಕ್‌ ಮಾಡಿಕೊಳ್ಳಲಾಯಿತು. ಮಾ.2ರಂದು ರಾತ್ರಿ ನಾವು ಬಸ್‌ ಹತ್ತಿ ಗೋವಾಕ್ಕೆ ಪ್ರಯಾಣಿಸಿದ್ದೆವು. ಆದರೆ ಅಷ್ಟೊತ್ತಿಗೆ ಮೀಡಿಯಾ ಹಾಗೂ ಸೋಶಿಯಲ್‌ ಮೀಡಿಯಾದಲ್ಲಿ ನನ್ನ ಗೆಳತಿಗೆ ಸಂಬಂಧಿಸಿದ ಯಾವುದೋ ವಿಡಿಯೋ ವೈರಲ್‌ ಆಗಿತ್ತು. ಇದರಿಂದ ನನಗೆ ನಿರಂತರವಾಗಿ ಕುಟುಂಬದವರು, ಸ್ನೇಹಿತರಿಂದ ಕರೆಗಳು ಬರುತ್ತಿದ್ದವು. ಈ ಬೆಳವಣಿಗೆಯಿಂದ ನನಗೆ ಆತಂಕ ಶುರುವಾಯಿತು. ನಾಲ್ಕು ದಿನ ಗೋವಾದಲ್ಲಿ ಉಳಿದಿದ್ದ ನಾವು, ಮಾ.6ರಂದು ಬೆಂಗಳೂರಿಗೆ ಮರಳಿದೆವು. ಬಸ್‌ ನಿಲ್ದಾಣದಿಂದಲೇ ನಾನು ಭಾಲ್ಕಿಗೆ ಮರಳಿದೆ. ಆಂಧ್ರಪ್ರದೇಶದ ಅನಂತಪುರಕ್ಕೆ ಕಾರಿನಲ್ಲಿ ನರೇಶ್‌ ಗೌಡ, ಶ್ರವಣ್‌ ಜತೆ ಗೆಳತಿ ತೆರಳಿದ್ದು ಗೊತ್ತಾಯಿತು. ಆನಂತರ ನಾನು ಅವರೊಂದಿಗೆ ಸಂಪರ್ಕದಲ್ಲಿ ಇಲ್ಲ. ಕೆಲವು ಬಾರಿ ಹಣದ ವಿಚಾರವನ್ನು ಅವರು ಚರ್ಚಿಸುತ್ತಿದ್ದರು. ಆ ಬಗ್ಗೆ ನನಗೆ ನಿಖರ ಮಾಹಿತಿ ಇಲ್ಲ ಎಂದು ಆಕಾಶ್‌ ಹೇಳಿರುವುದಾಗಿ ತಿಳಿದು ಬಂದಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ