
ಯಾದಗಿರಿ (ಆ.12): ರಾಜ್ಯದಲ್ಲಿ ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕರನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರವನ್ನು ಕಾಂಗ್ರೆಸ್ ಹೈಕಮಾಂಡ್ ನಡೆಸುತ್ತಿದೆ. ರಮೇಶ್ ಜಾರಕಿಹೊಳಿ, ನಾಗೇಂದ್ರ ಅವರ ನಂತರ ಈಗ ಕೆ.ಎನ್. ರಾಜಣ್ಣ ಅವರನ್ನು ರಾಜಕೀಯವಾಗಿ ಮುಗಿಸಿದೆ. ಮುಂದಿನ ಸರದಿ ಸತೀಶ್ ಜಾರಕಿಹೊಳಿ ಅವರನ್ನು ಮುಗಿಸಲು ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ರಾಜುಗೌಡ ಆರೋಪಿಸಿದರು.
ಕರ್ನಾಟಕ ಸಚಿವ ಸಂಪುಟದಿಂದ ಕೆ.ಎನ್. ರಾಜಣ್ಣ ಅವರನ್ನು ವಜಾಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸುರಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕರನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರವನ್ನು ಕಾಂಗ್ರೆಸ್ ಹೈಕಮಾಂಡ್ ನಡೆಸುತ್ತಿದೆ ಎಂದು ನೇರವಾಗಿ ಆರೋಪಿಸಿದರು. ರಮೇಶ್ ಜಾರಕಿಹೊಳಿ ಮತ್ತು ನಾಗೇಂದ್ರ ಅವರ ನಂತರ ರಾಜಣ್ಣ ಮತ್ತು ಮುಂದಿನ ಸರದಿ ಸತೀಶ್ ಜಾರಕಿಹೊಳಿ ಅವರದ್ದು ಎಂದು ರಾಜುಗೌಡ ಭವಿಷ್ಯ ನುಡಿದರು.
ರಾಜಣ್ಣ ವಜಾ: ರಾಜಕೀಯ ಬಲಿಪಶು?
ರಾಜಣ್ಣ ಅವರು ಮತದಾರರ ಪಟ್ಟಿ ಕುರಿತು ನೀಡಿದ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. 'ಮತದಾರರ ಪಟ್ಟಿಯನ್ನು ಅಧಿಕಾರಿಗಳು ಸಿದ್ಧಪಡಿಸುತ್ತಾರೆ. ನಮ್ಮದೇ ಪಕ್ಷ ಅಧಿಕಾರದಲ್ಲಿತ್ತು, ಅಂತ ರಾಜಣ್ಣ ಹೇಳಿದ್ರಲ್ಲಿ ಏನು ತಪ್ಪು? ಎಂದು ಪ್ರಶ್ನಿಸಿದರು. ಅಲ್ಲದೆ, ಕಾಂಗ್ರೆಸ್ ಹೈಕಮಾಂಡ್ನ ಕ್ರಮವನ್ನು ಟೀಕಿಸಿದ ಅವರು, 'ನಿಮ್ಮ ವಿರುದ್ಧ ಮಾತನಾಡಿದ್ರೆ ವಜಾನಾ? ನೀವೇನು ಸುಪ್ರೀಂನಾ? ಎಂದು ಖಾರವಾಗಿ ಪ್ರಶ್ನಿಸಿದರು. ರಾಹುಲ್ ಗಾಂಧಿ ಒಂದು ರೀತಿ ಪಂಜರದಲ್ಲಿ ಬೆಳೆದವರು, ಅವರಿಗೆ ರಾಜಕೀಯ ಜ್ಞಾನ ಅಷ್ಟೊಂದು ಇಲ್ಲ ಅನಿಸುತ್ತೆ' ಎಂದು ವ್ಯಂಗ್ಯವಾಡಿದರು.
ವಾಲ್ಮೀಕಿ ನಾಯಕರನ್ನು ಗುರಿ ಮಾಡಿರುವುದು ಏಕೆ?
ವಾಲ್ಮೀಕಿ ಸಮುದಾಯದಲ್ಲಿ ಒಗ್ಗಟ್ಟಿಲ್ಲದೇ ಇರುವುದೇ ಈ ಎಲ್ಲ ಸಮಸ್ಯೆಗಳಿಗೆ ಕಾರಣ ಎಂದು ರಾಜುಗೌಡ ಹೇಳಿದರು. ನಮ್ಮ ಸಮುದಾಯದಲ್ಲಿ ನಾವು ಹುಟ್ಟುವಾಗಲೇ ನಾಯಕರು. ಆದರೆ, ಒಬ್ಬರೇ ನಾಯಕರಾಗಬೇಕೆಂಬ ಮನೋಭಾವ ಇಲ್ಲ. ಇದರಿಂದ ನಮ್ಮ ಸಮುದಾಯದ ಮೇಲೆ ದಾಳಿ ಮಾಡಲು ಕಾಂಗ್ರೆಸ್ ಪಕ್ಷಕ್ಕೆ ಸುಲಭವಾಗಿದೆ. ಮಂತ್ರಿ ಸ್ಥಾನ ಕೊಡುವ ಆಸೆಯನ್ನು ತೋರಿಸಿ ನಮ್ಮನ್ನು ಒಡೆಯುವ ಕೆಲಸ ಮಾಡುತ್ತಾರೆ' ಎಂದು ವಿವರಿಸಿದರು.
ರಮೇಶ್ ಜಾರಕಿಹೊಳಿ, ನಾಗೇಂದ್ರ ಅವರ ಪ್ರಕರಣಗಳನ್ನೂ ಉಲ್ಲೇಖಿಸಿದ ಅವರು, 'ನಾಗೇಂದ್ರ ಅವರು ನಿಗಮದ ಹಣವನ್ನು ಮನೆಗೆ ತೆಗೆದುಕೊಂಡು ಹೋಗಿಲ್ಲ. ತೆಲಂಗಾಣ, ರಾಯಚೂರು, ಬಳ್ಳಾರಿ ಚುನಾವಣೆಗಳಿಗೆ ಬಳಕೆ ಮಾಡಿದ್ದರು. ಆದರೂ ಅವರನ್ನು ಬಲಿಪಶು ಮಾಡಿದರು. ಇದೀಗ ರಾಜಣ್ಣ, ಮುಂದೆ ಸತೀಶ್ ಜಾರಕಿಹೊಳಿ ಸರದಿ' ಎಂದು ಎಚ್ಚರಿಕೆ ನೀಡಿದರು.
ರಾಜಕೀಯ ಭವಿಷ್ಯ ಮುಕ್ತಾಯ?
ರಾಜಣ್ಣ ಅವರಿಗೆ ಆದ ಅನ್ಯಾಯದ ವಿರುದ್ಧ ವಾಲ್ಮೀಕಿ ಸಮುದಾಯದ 15 ಜನ ಶಾಸಕರು ದೆಹಲಿ ಹೈಕಮಾಂಡ್ ಮುಂದೆ ಪ್ರತಿಭಟಿಸಬೇಕು. ಏಕೆಂದರೆ, ಹೈಕಮಾಂಡ್ ರಾಜಣ್ಣ ಅವರನ್ನು ಸಮಾಧಾನ ಮಾಡಿ ಸ್ವಲ್ಪ ದಿನ ಹೋಗಲಿ ಅಂತ ಸುಮ್ಮನೆ ಇರಲು ಹೇಳಬಹುದು. ಹಾಗೆ ರಾಜಣ್ಣ ಸಮಾಧಾನವಾದರೆ, ಅವರ ರಾಜಕೀಯ ಭವಿಷ್ಯವೇ ಮುಗಿದ ಅಧ್ಯಾಯ ಎಂದು ವಜಾಗೊಂಡ ಸಚಿವ ರಾಜಣ್ಣ ಅವರಿಗೆ ಸಲಹೆ ನೀಡಿದರು.
ನಿನ್ನೆ ಅವರಿಗೆ ಸ್ವಲ್ಪ ಮಾತನಾಡುವುದಕ್ಕೆ ಅಥವಾ ಯಾವುದೇ ಸ್ಪಷ್ಟೀಕರಣ ಹೇಳಿಕೆಗಳಿಗೂ ಅವಕಾಶವನ್ನು ನೀಡಲಿಲ್ಲ. ನೀವು ರಾಜೀನಾಮೆಯನ್ನು ಕೊಟ್ಟರೂ ಕೂಡ ಅದನ್ನು ಅಂಗೀಕಾರ ಮಾಡದೇ ನಿಮ್ಮನ್ನು ವಜಾ ಮಾಡಲಾಗಿದೆ. ನೀವು ದಿಟ್ಟ ನಿರ್ಧಾರ ತೆಗೆದುಕೊಂಡು ಪ್ರತಿಭಟಿಸದಿದ್ದರೆ, ಈ ಸಮಾಜದವರನ್ನು ಹೆಂಗೆ ಬೇಕಾದರೂ ಬಲಿ ಮಾಡಬಹುದು ಅಂತ ಸಮಾಜವನ್ನೇ ಮುಗಿಸಿಬಿಡುತ್ತಾರೆ' ಎಂದು ರಾಜುಗೌಡ ಆತಂಕ ವ್ಯಕ್ತಪಡಿಸಿದರು. ರಾಜನಹಳ್ಳಿ ಗುರುಗಳು ಕೂಡ ಈ ವಿಚಾರದ ಬಗ್ಗೆ ಧ್ವನಿ ಎತ್ತಬೇಕು ಎಂದು ಮನವಿ ಮಾಡಿಕೊಂಡರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ