ನುಡಿದಂತೆ ನಡೆದ ರಾಜೀವ್ ಚಂದ್ರಶೇಖರ್, ಕರ್ನಾಟದಲ್ಲಿ ಹಳ್ಳಿಗಳಿಗೆ ನೆಟ್‌ವರ್ಕ್ ಒದಗಿಸಲು ಕಾರ್ಯಪಡೆ

By Suvarna NewsFirst Published Sep 8, 2021, 3:33 PM IST
Highlights

* ಕರ್ನಾಟಕದ ಹಳ್ಳಿಗಳಲ್ಲಿ ನೆಟ್‌ವರ್ಕ್ ಸಮಸ್ಯೆ
* ಇಂಟರ್‌ನೆಟ್ ಸಮಸ್ಯೆ ಬಗೆಹರಿಸಲು ಮುಂದಾದ ಸಚಿವ ರಾಜೀವ್ ಚಂದ್ರಶೇಖರ್ 
* ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಿಂದ ಕಾರ್ಯಪಡೆ ರಚನೆ

ನವದೆಹಲಿ, ಬೆಂಗಳೂರು, (ಸೆ.08): ಕರ್ನಾಟಕದಲ್ಲಿ ಅಂತರ್ಜಾಲ (ನೆಟ್‌ವರ್ಕ್) ಸಂಪರ್ಕ ಸುಧಾರಣೆಗಾಗಿ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಿಂದ ಕಾರ್ಯಪಡೆ ರಚನೆ ಮಾಡಲಾಗಿದೆ.

ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ (ಎಂಇಐಟಿವೈ) ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಇತ್ತೀಚೆಗೆ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಜನಾಶೀರ್ವಾದ ಯಾತ್ರೆ ಕೈಗೊಂಡಿದ್ದ ವೇಳೆ ಪ್ರತಿಯೊಂದು ಜಿಲ್ಲೆಗಳಲ್ಲೂ ನೆಟ್‌ವರ್ಕ್ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದರು.

ಹಳ್ಳಿಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಬಗೆಹರಿಸಲು ಮುಂದಾದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್

ಮನವಿ ಸ್ವೀಕರಿಸಿದ  ರಾಜೀವ್ ಚಂದ್ರಶೇಖರ್ ಪ್ರತಿಯೊಂದು ಜಿಲ್ಲೆಗಳಲ್ಲೂ (ಎಂಇಐಟಿವೈ) ಆ ಬಗ್ಗೆ ಅಧ್ಯಯನ ನಡೆಸಲು ಎಂಇಐಟಿವೈ ಕಾರ್ಯಪಡೆಯನ್ನು ಕಳುಹಿಸುವುದಾಗಿ ಸಚಿವರು ಭರವಸೆ ನೀಡಿದ್ದರು. ಅದರಂತೆ ಇದೀಗ ಇಂಟರ್‌ನೆಟ್ ಸುಧಾರಣೆಗಾಗಿ ಕಾರ್ಯಪಡೆ ರಚನೆ ಮಾಡಿದ್ದಾರೆ.

ಈ ಬದ್ಧತೆಗೆ ಪ್ರತಿಕ್ರಿಯೆಯಾಗಿ, ತಕ್ಷಣವೇ ಭೇಟಿ ಮಾಡಿ ಕಾರ್ಯಾರಂಭ ಮಾಡಲು ಅನುಕೂಲವಾಗುವಂತೆ ರಾಷ್ಟ್ರೀಯ ಇಂಟರ್ನೆಟ್ ಎಕ್ಸಚೇಂಜ್ ಆಫ್ ಇಂಡಿಯಾ (ಎನ್ ಐಎಕ್ಸ್ ಐ) ಮತ್ತು ಸಾಫ್ಟವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ (ಎಸ್ ಟಿಪಿಐ) ಪ್ರತಿನಿಧಿಗಳನ್ನು ಒಳಗೊಂಡ ಎಂಇಐಟಿವೈ ಕಾರ್ಯಪಡೆಯನ್ನು ರಚನೆ ಮಾಡಲಾಗಿದೆ. 

ಕಾರ್ಯಪಡೆಯ ಪ್ರತಿನಿಧಿಗಳು ಪ್ರತಿ ಜಿಲ್ಲೆಗೂ ಭೇಟಿ ನೀಡುವರು ಮತ್ತು ಜನರನ್ನು ಭೇಟಿ ಮಾಡಿ ಸಮಸ್ಯೆ ಆಲಿಸುವರು. ಅವರು ರಾಜ್ಯ ಸರ್ಕಾರಿ ಅಧಿಕಾರಿಗಳನ್ನೂ ಸಹ ಭೇಟಿ ಮಾಡಿ ಸಮಾಲೋಚನೆ ನಡೆಸುವರು ಮತ್ತು ಸಚಿವರಿಗೆ ವರದಿಯನ್ನು ಸಲ್ಲಿಸುವರು.

ಎಲ್ಲ ಭಾರತೀಯರನ್ನು ಸಂಪರ್ಕಿಸುವುದು ಮತ್ತು ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಪ್ರಯೋಜನಗಳನ್ನು ಪ್ರತಿಯೊಬ್ಬ ಭಾರತೀಯರಿಗೂ ನೇರವಾಗಿ ದೊರಕಿಸಿಕೊಡಬೇಕು ಎಂಬುದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರದ  ಆದ್ಯತೆಗಳಲ್ಲಿ ಒಂದಾಗಿದೆ. 

click me!