
ದಾಂಡೇಲಿ (ಸೆ.18): 9ನೇ ತರಗತಿಯ ಸುಮಾರು 10 ವಿದ್ಯಾರ್ಥಿನಿಯರು ಒಂದೇ ರೀತಿಯಾಗಿ ಕೈ ಕುಯ್ದುಕೊಂಡಿರುವ ಘಟನೆ ನಗರದ ಜನತಾ ವಿದ್ಯಾಲಯದಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಪಬ್ಜೀಯಂತಹ ಗೇಮ್ ಆಡಿ ಅವುಗಳ ಪ್ರೇರಣೆಯಿಂದ ಈ ರೀತಿ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಆಗಿದ್ದೇನು?: ವಿದ್ಯಾರ್ಥಿಗಳು ಕೈ ಕುಯ್ದುಕೊಂಡಿರುವ ಘಟನೆ ನಾಲ್ಕೈದು ದಿನಗಳ ಹಿಂದೆಯೇ ನಡೆದಿದೆ. ವಿಷಯವನ್ನು ಪಾಲಕರಿಗೆ ತಿಳಿಸಿಲ್ಲ. ಶುಕ್ರವಾರ ಹಲವು ಪಾಲಕರ ಗಮನಕ್ಕೆ ಬರುತ್ತಿದ್ದಂತೆ ಶಾಲೆಗೆ ದೌಡಾಯಿಸಿ ಶಿಕ್ಷಕರನ್ನು ವಿಚಾರಿಸಿದ್ದಾರೆ. ಈ ವೇಳೆ ಶಿಕ್ಷಕರು ಪಾಲಕರೆದುರೇ ವಿದ್ಯಾರ್ಥಿಗಳನ್ನು ವಿಚಾರಿಸಿದಾಗ ಒಂದೊಂದು ಕಾರಣ ಹೇಳಿದ್ದಾರೆ. ಹೂವು ಕೀಳುವ ವೇಳೆ ಮುಳ್ಳು ತರಚಿದೆ, ತಾಯಿ ಬೈದಿದ್ದರಿಂದ, ಸ್ನೇಹಿತೆ ಕೈ ಕುಯ್ದುಕೊಂಡಿದ್ದರಿಂದ ನಾನು ಮಾಡಿಕೊಂಡೆ ಎಂದು ಹೇಳಿದ್ದಾರೆ. ಆಗ ಶಿಕ್ಷಕರು ಬುದ್ಧಿ ಹೇಳಿ ಕಳಿಸಿದ್ದಾರೆ.
ಶನಿವಾರ ಈ ವಿಷಯ ಪೊಲೀಸರು ಹಾಗೂ ಉಳಿದ ಪಾಲಕರಿಗೆ ತಲುಪಿದೆ. ಆಗ ಪಾಲಕರು ಮತ್ತು ಪೊಲೀಸರು ಶಾಲೆಗೆ ಭೇಟಿ ನೀಡಿ ಮುಖ್ಯಾಧ್ಯಾಪಕರ ಜತೆ ಚರ್ಚಿಸಿದ್ದಾರೆ. ಮುಖ್ಯಾಧ್ಯಾಪಕಿ ಭಾರತಿ ಗೌಡ ಮಾತನಾಡಿ, ವಿದ್ಯಾರ್ಥಿನಿಯರು ಕೈ ಕುಯ್ದುಕೊಂಡ ವಿಷಯ ತಿಳಿದ ತಕ್ಷಣ ನಾನು ಪಾಲಕರನ್ನು ಕರೆಯಿಸಿ, ಮಾಹಿತಿ ನೀಡಿದ್ದೇನೆ. ಆದರೆ ವಿದ್ಯಾರ್ಥಿಗಳು ಯಾವ ಕಾರಣಕ್ಕೆ ಈ ಕೆಲಸ ಮಾಡಿಕೊಂಡಿದ್ದಾರೆ ಎಂಬುದರ ಬಗ್ಗೆ ನಿಖರವಾಗಿ ಹೇಳುತ್ತಿಲ್ಲ. ವಿದ್ಯಾರ್ಥಿನಿಯರು ಒಬ್ಬೊಬ್ಬರು ಒಂದೊಂದು ರೀತಿ ಉತ್ತರಿಸುತ್ತಿದ್ದಾರೆ. ಇದು ನಮಗೂ ಕೂಡ ಆತಂಕ ತಂದಿದೆ ಎಂದರು.
ರಾಜ್ಯದಲ್ಲಿ ಬರಗಾಲ ಕಾಡಲು ಸಿದ್ದರಾಮಯ್ಯ ಕಾಲ್ಗುಣ ಕಾರಣ: ಸಿ.ಟಿ.ರವಿ
ಆಗ ದಾಂಡೇಲಿ ನಗರ ಠಾಣೆಯ ಪಿಎಸ್ಐ ಐ.ಆರ್. ಗಡ್ಡೇಕರ, ಮಕ್ಕಳು ಸಾಮೂಹಿಕವಾಗಿ ಕೈ ಕತ್ತರಿಸಿಕೊಂಡು ಘಟನೆ ನಡೆದರೂ ಕೂಡ ನೀವು ಯಾಕೆ ಠಾಣೆಗೆ ತಿಳಿಸಿಲ್ಲ ಎಂದು ಪ್ರಶ್ನಿಸಿದರು. ಆಗ ಮುಖ್ಯಾಧ್ಯಾಪಕಿ ಅವರಿನ್ನು ಅಪ್ರಾಪ್ತರು ಎನ್ನುವ ಕಾರಣಕ್ಕೆ ತಿಳಿಸಿರಲಿಲ್ಲ ಎಂದರು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಗರ ಪೊಲೀಸ್ ಠಾಣೆ ಪಿಎಸ್ಐ ಐ.ಆರ್. ಗಡ್ಡೇಕರ್ ತಮ್ಮ ಸಿಬ್ಬಂದಿ ಜತೆ ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಮಹಿಳಾ ಪೊಲೀಸ್ ಸಿಬ್ಬಂದಿ ಶಾಲೆಗೆ ಕಳುಹಿಸಿ ಕೈ ಕುಯ್ದುಕೊಂಡ ಮಕ್ಕಳಿಂದ ಮಾಹಿತಿ ಪಡೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ