PSI Recruitment Scam: ರಾಜ್ಯದ 11 ಕೇಂದ್ರಗಳಲ್ಲಿ ಎಸ್‌ಐ ಪರೀಕ್ಷೆ ಅಕ್ರಮ, ಅಭ್ಯರ್ಥಿಗಳಿಗೆ ಸಂಕಷ್ಟ

By Kannadaprabha NewsFirst Published Jun 12, 2022, 8:24 AM IST
Highlights

*  ಸಿಐಡಿಯಿಂದ ತನಿಖೆ ವೇಳೆ ಪತ್ತೆ
*  172 ಅಭ್ಯರ್ಥಿಗಳಿಗೆ ಸಂಕಷ್ಟ
*  ಈವರೆಗೆ 28 ಅಭ್ಯರ್ಥಿಗಳ ಬಂಧನ

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು(ಜೂ.12):  ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳ ನೇಮಕಾತಿ ಹಗರಣದಲ್ಲಿ ಬೆಂಗಳೂರು ಹಾಗೂ ಕಲಬುರಗಿ ಸೇರಿದಂತೆ ಒಟ್ಟು 11 ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆದಿದೆ ಎಂಬ ಸಂಗತಿ ರಾಜ್ಯ ಅಪರಾಧ ತನಿಖಾ ದಳ (ಸಿಐಡಿ)ದ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಅಕ್ರಮದಲ್ಲಿ 172 ಅಭ್ಯರ್ಥಿಗಳಿಗೆ ಸಂಕಷ್ಟ ಎದುರಾಗಿದೆ.

ಬೆಂಗಳೂರಿನ ಕೇಂಬ್ರಿಡ್ಜ್‌, ನ್ಯೂ ಹಾರಿಜನ್‌, ಸೇಂಟ್‌ ಆನ್ಸ್‌ ಬಾಲಕಿಯರ ಕಾಲೇಜು ಸೇರಿ 7 ಹಾಗೂ ಕಲಬುರಗಿ ನಗರದ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ, ಎಂ.ಎಲ್‌. ಇರಾನಿ ಸೇರಿ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ ಹಾಜರಾಗಿದ್ದ ಅಭ್ಯರ್ಥಿಗಳು ಅಕ್ರಮದಲ್ಲಿ ತೊಡಗಿದ್ದಕ್ಕೆ ಪುರಾವೆಗಳು ಸಿಕ್ಕಿವೆ. ಈ ಕೇಂದ್ರಗಳಲ್ಲಿ ಪರೀಕ್ಷೆ ಬರೆದು ರಾರ‍ಯಂಕ್‌ ಮೂಲಕ ಪಿಎಸ್‌ಐ ಹುದ್ದೆ ಆಯ್ಕೆ ಪಟ್ಟಿಯಲ್ಲಿ ಹೆಸರಿದ್ದ 28 ಅಭ್ಯರ್ಥಿಗಳನ್ನು ಬಂಧಿಸಲಾಗಿದೆ. ಇನ್ನೂ ತನಿಖೆ ಮುಂದುವರೆದಿದ್ದು, ಪರೀಕ್ಷಾ ಕೇಂದ್ರ ಹಾಗೂ ಬಂಧಿತರ ಸಂಖ್ಯೆ ಸಹ ಹೆಚ್ಚಾಗಲಿದೆ ಎಂದು ಸಿಐಡಿ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

 

 

ಪಿಎಸ್‌ಐ ಅಕ್ರಮ: ಆರ್‌ಡಿಪಿ ಬಲಗೈ ಬಂಟರ ಕೊಡುಗೆಯೇ ಅಪಾರ..!

ಕಲಬುರಗಿ, ಬೆಂಗಳೂರು ಪ್ರತ್ಯೇಕ ಆಪರೇಷನ್‌:

ಪಿಎಸ್‌ಐ ಹಗರಣದಲ್ಲಿ ಬೆಂಗಳೂರು ಹಾಗೂ ಕಲಬುರಗಿ ನಗರದಲ್ಲಿ ಪ್ರತ್ಯೇಕವಾಗಿ ಆರೋಪಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಕಲಬುರಗಿ ನಗರದ ಪರೀಕ್ಷಾ ಕೇಂದ್ರದಲ್ಲಿ ದಿವ್ಯಾ ಹಾಗರಗಿ ತಂಡವು ಪರೀಕ್ಷಾ ಕೇಂದ್ರದಲ್ಲೇ ಒಎಂಆರ್‌ ತಿದ್ದುಪಡಿ ಮಾಡಿ ಅಭ್ಯರ್ಥಿಗಳಿಗೆ ನೆರವಾಗಿದ್ದರೆ, ಕಾಂಗ್ರೆಸ್‌ ಮುಖಂಡ ರುದ್ರಗೌಡ ಪಾಟೀಲ್‌ ಹಾಗೂ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್‌ ಮಂಜುನಾಥ ಮೇಳಕುಂದಿ ತಂಡವು ಪರೀಕ್ಷಾ ಕೇಂದ್ರಗಳಿಗೆ ಬ್ಲೂಟೂತ್‌ ಪೂರೈಸಿ ಅಭ್ಯರ್ಥಿಗಳಿಗೆ ಸಾಥ್‌ ಕೊಟ್ಟಿದೆ. ಆದರೆ ಬೆಂಗಳೂರಿನಲ್ಲಿ ಅಭ್ಯರ್ಥಿಗಳಿಗೆ ರಾಜ್ಯ ಪೊಲೀಸ್‌ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್‌ ತಂಡವು ನೇರವಾಗಿ ಸಹಾಯ ಮಾಡಿದೆ. ಪರೀಕ್ಷೆ ಮುಗಿದ ಬಳಿಕ ಒಎಂಆರ್‌ ಶೀಟ್‌ಗಳನ್ನು ನೇಮಕಾತಿ ವಿಭಾಗದ ಸ್ಟ್ರಾಂಗ್‌ ರೂಮ್‌ನಲ್ಲೇ ಅಧಿಕಾರಿ ಹಾಗೂ ಸಿಬ್ಬಂದಿ ತಿದ್ದುಪಡಿ ಮಾಡಿದ್ದರು ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.

172 ಅಭ್ಯರ್ಥಿಗಳ ಪೈಕಿ 28 ಮಂದಿ ಬಂಧನ

ಪಿಎಸ್‌ಐ ನೇಮಕಾತಿ ಹಗರಣದಲ್ಲಿ 172 ಅಭ್ಯರ್ಥಿಗಳ ಮೇಲೆ ಸಿಐಡಿ ಶಂಕೆ ವ್ಯಕ್ತಪಡಿಸಿದೆ. ಇದುವರೆಗೆ ಬೆಂಗಳೂರಿನಲ್ಲಿ 17 ಹಾಗೂ ಕಲುಬರಗಿ ನಗರದಲ್ಲಿ 11 ಅಭ್ಯರ್ಥಿಗಳು, ನೇಮಕಾತಿ ವಿಭಾಗದ ಐವರು ಸೇರಿದಂತೆ 68 ಆರೋಪಿಗಳ ಬಂಧನವಾಗಿದೆ. ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದ ಆರೋಪದ ಮೇರೆಗೆ 172 ಅಭ್ಯರ್ಥಿಗಳ ಒಎಂಆರ್‌ ಶೀಟ್‌ ಹಾಗೂ ಕಾರ್ಬನ್‌ ಒಎಂಆರ್‌ ಶೀಟ್‌ಗಳನ್ನು ಜಪ್ತಿ ಮಾಡಿ ಬಳಿಕ ಅವುಗಳನ್ನು ಪರಿಶೀಲನೆ ಸಲುವಾಗಿ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌)ಕ್ಕೆ ಕಳುಹಿಸಲಾಗಿದೆ. ಒಂದೊಂದಾಗಿ ಒಎಂಆರ್‌ ಶೀಟ್‌ ಅಸಲಿತನ ಬಗ್ಗೆ ಎಫ್‌ಎಸ್‌ಎಲ್‌ ವರದಿ ಆಧರಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

click me!