Karnataka High Court: ಎಸ್‌ಐಗೂ ಚಾರ್ಜ್‌ಶೀಟ್‌ ಸಲ್ಲಿಕೆ ಅಧಿಕಾರ: ಕೋರ್ಟ್‌

By Govindaraj SFirst Published May 27, 2022, 3:15 AM IST
Highlights

ಅಪರಾಧ ಪ್ರಕರಣಗಳ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಸುವ ಅಧಿಕಾರವನ್ನು ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ (ಪಿಎಸ್‌ಐ) ಹೊಂದಿದ್ದಾರೆ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಬೆಂಗಳೂರು (ಮೇ.27): ಅಪರಾಧ ಪ್ರಕರಣಗಳ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಸುವ ಅಧಿಕಾರವನ್ನು ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ (ಪಿಎಸ್‌ಐ) ಹೊಂದಿದ್ದಾರೆ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ. ಪತ್ರಿಕೆಯೊಂದರ ಸಂಪಾದಕ ಹಲ್ಲೇಗೆರೆ ಶಂಕರ್‌ ಅವರ ಇಬ್ಬರು ಅಳಿಯಂದಿರಾದ ಇ.ಎಸ್‌. ಪ್ರವೀಣ್‌ ಕುಮಾರ್‌ ಹಾಗೂ ಈಡಿಗ ಶ್ರೀಕಾಂತ್‌ ಅವರು ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ಗೆ ದೋಷಾರೋಪ ಪಟ್ಟಿಸಲ್ಲಿಸುವ ಅಧಿಕಾರವಿಲ್ಲ ಎಂದು ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್‌ ಅವರ ನೇತೃತ್ವದ ಏಸಕದಸ್ಯ ಪೀಠ ಈ ಆದೇಶ ಮಾಡಿದೆ.

ಪ್ರಕರಣದಲ್ಲಿ ಅರ್ಜಿದಾರ ಆರೋಪಿಗಳು ಹಲ್ಲೇಗೆರೆ ಶಂಕರ್‌ ಅವರ ಕುಟುಂಬ ಸದಸ್ಯರಿಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದು ಮರಣ ಪತ್ರದಿಂದ ಸ್ಪಷ್ಟವಾಗಿದೆ. ಮಗು ಸೇರಿದಂತೆ ತಾಯಿ ಹಾಗೂ ಮೂವರು ಮಕ್ಕಳು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವನ್ನು ಸಾಮಾನ್ಯ ಆತ್ಮಹತ್ಯೆ ಎಂದು ಪರಿಗಣಿಸಲಾಗದು. ಸಂತ್ರಸ್ತರು ಮರಣ ಪತ್ರದಲ್ಲಿ ತಮ್ಮ ಸಾವಿಗೆ ನ್ಯಾಯ ಕೋರಿರುವ ವಿಚಾರ ಸಾರ್ವಜನಿಕರ ಗಮನ ಸೆಳೆದಿದೆ. ಈ ಹಿನ್ನೆಲೆಯಲ್ಲಿ ಅರ್ಜಿದಾರರಿಗೆ ಜಾಮೀನು ನೀಡಲಾಗದು ಎಂದು ಆದೇಶದಲ್ಲಿ ನ್ಯಾಯಪೀಠ ತಿಳಿಸಿದೆ.

ಜಿ.ಪಂ, ತಾ.ಪಂ ಚುನಾವಣೆಗೆ ಕೊನೆಗೂ ಕೂಡಿ ಬಂತು ಮುಹೂರ್ತ, ಸರ್ಕಾರಕ್ಕೆ ಹೈಕೋರ್ಟ್ ಗಡುವು

ಪ್ರಕರಣದ ವಿವರ: 2021ರ ಸೆಪ್ಟೆಂಬರ್‌ 17ರಂದು ಬೆಂಗಳೂರಿನ ಮಾಗಡಿ ರಸ್ತೆಯ ತಿಗಳರಪಾಳ್ಯದ ಮನೆಯಲ್ಲಿ ಹಲ್ಲೇಗೆರೆ ಶಂಕರ್‌ ಅವರ ಪತ್ನಿ ಭಾರತಿ, ಪುತ್ರಿಯರಾದ ಸಿಂಚನಾ ಕುಮಾರಿ ಮತ್ತು ಸಿಂಧೂ ರಾಣಿ, ಪುತ್ರ ಮಧುಸಾಗರ್‌ ಹಾಗೂ ಸಿಂಧೂ ರಾಣಿ ಅವರ ಒಂಬತ್ತು ತಿಂಗಳ ಮಗು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣ ಸಾರ್ವಜನಿಕ ವಲಯದಲ್ಲಿ ತಲ್ಲಣ ಮೂಡಿಸಿತ್ತು. ಮರಣ ಪತ್ರದಲ್ಲಿ ಪುತ್ರ ಮಧುಸಾಗರ್‌ ಅವರು ತಂದೆ ಶಂಕರ್‌ ನಡವಳಿಕೆಗಳನ್ನು ಉಲ್ಲೇಖಿಸಿದ್ದರು. 

ಪುತ್ರಿಯರು ಬರೆದಿದ್ದ ಮರಣ ಪತ್ರದಲ್ಲಿ ಗಂಡಂದಿರಾದ ಪ್ರವೀಣ್‌ ಕುಮಾರ್‌ ಹಾಗೂ ಶ್ರೀಕಾಂತ್‌ ಅವರ ಮನೆಯಲ್ಲಿ ಅನುಭವಿಸಿದ್ದ ಯಾತನೆ ಮತ್ತು ಕಿರುಕುಳವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಬ್ಯಾಡರಹಳ್ಳಿ ಪೊಲೀಸರು, ಪ್ರವೀಣ್‌ ಮತ್ತು ಶ್ರೀಕಾಂತ್‌ ಅವರನ್ನು ಬಂಧಿಸಿದ್ದರು. ನಂತರ ತನಿಖೆ ಪೂರ್ಣಗೊಳಿಸಿದ ಪಿಎಸ್‌ಐ ದೋಷಾರೋಪ ಪಟ್ಟಿಸಲ್ಲಿಸಿದ್ದರು. ಈ ಕ್ರಮವನ್ನು ಪ್ರಶ್ನಿಸಿದ್ದ ಆರೋಪಿಗಳು, ದೋಷಾರೋಪ ಪಟ್ಟಿಸಲ್ಲಿಸಲು ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ಗೆ ಅಧಿಕಾರವಿಲ್ಲ. ಪಿಎಸ್‌ಐ ಪ್ರಕರಣದ ತನಿಖೆ ನಡೆಸಬಹುದಾಗಿದೆ. ಆದರೆ, ಠಾಣೆಯ ಅಧಿಕಾರಿಯಾಗಿರುವ ಇನ್ಸ್‌ಪೆಕ್ಟರ್‌ ಮಾತ್ರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಸಬೇಕು ಎಂದು ಆಕ್ಷೇಪಿಸಿದ್ದರು.

Karnataka High Court: ಎಲ್ಲ ಕೊಲೆ ಕೇಸಲ್ಲೂ ಬೇಲ್‌ ನಿರಾಕರಿಸಬೇಕಿಲ್ಲ!

ಅರ್ಜಿಗಳನ್ನು ತಿರಸ್ಕರಿಸಿರುವ ಹೈಕೊರ್ಟ್‌, ಪೊಲೀಸ್‌ ಮಾರ್ಗಸೂಚಿಯಲ್ಲಿ ಪಿಎಸ್‌ಐ ಅವರಿಗೂ ದೋಷಾರೋಪ ಪಟ್ಟಿಸಲ್ಲಿಸುವ ಅಧಿಕಾರವಿದೆ. ಪಿಎಸ್‌ಐ ಸಹ ಠಾಣೆಯ ಉಸ್ತುವಾರಿಯಾಗಿದ್ದಾರೆ. ಎಫ್‌ಐಆರ್‌ ದಾಖಲಿಸಿರುವ ಪಿಎಸ್‌ಐ ತನಿಖೆ ನಡೆಸಿ, ಆರೋಪ ಪಟ್ಟಿಸಲ್ಲಿಸಿದ್ದಾರೆ. ಹೀಗಾಗಿ, ಆರೋಪ ಪಟ್ಟಿಸಲ್ಲಿಸಲು ಪಿಎಸ್‌ಐಗೆ ಅಧಿಕಾರವಿಲ್ಲ ಅಥವಾ ಅದು ಕಾನೂನುಬಾಹಿರ ಎನ್ನಲಾಗದು ಎಂದು ಸ್ಪಷ್ಟಪಡಿಸಿದೆ. ಅರ್ಜಿದಾರರ ಪರ ಹಿರಿಯ ವಕೀಲ ಹಸ್ಮತ್‌ ಪಾಷಾ, ಪೊಲೀಸರ ಪರ ವಿಶೇಷ ಸರ್ಕಾರಿ ಅಭಿಯೋಜಕ ವಿ.ಎಸ್‌. ಹೆಗ್ಡೆ ವಾದ ಮಂಡಿಸಿದ್ದರು.

click me!