ತರಾತುರಿಯಲ್ಲಿ ಭೂಸುಧಾರಣೆ ತಿದ್ದುಪಡಿ ಮಸೂದೆ ಮಂಡನೆ

By Kannadaprabha NewsFirst Published Sep 26, 2020, 9:47 AM IST
Highlights

ಚರ್ಚೆಗೆ ಅವಕಾಶ ಕೋರಿದ ಸಿದ್ದು, ಇಂದು ಚರ್ಚೆ| ಗ್ರಾಮ ಪಂಚಾಯತಿ ವಿಧೇಯಕಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸದನದಿಂದ ಹೊರನಡೆದ ಸಿದ್ದರಾಮಯ್ಯ ಸೇರಿದಂತೆ ಇತರ ಕಾಂಗ್ರೆಸ್‌ ಸದಸ್ಯರು| 

ಬೆಂಗಳೂರು(ಸೆ.26): ತೀವ್ರ ಚರ್ಚೆಗೆ ಕಾರಣವಾದ ಕರ್ನಾಟಕ ಭೂ ಸುಧಾರಣೆಗಳ (ಎರಡನೇ ತಿದ್ದುಪಡಿ) ಮಸೂದೆಯನ್ನು ವಿರೋಧ ಪಕ್ಷದ ಸದಸ್ಯರ ಅನುಪಸ್ಥಿತಿಯ ನಡುವೆಯೇ ತರಾತುರಿಯಲ್ಲಿ ಸದನದಲ್ಲಿ ಮಂಡಿಸಿದ ಘಟನೆ ನಡೆಯಿತು.

2020ನೇ ಸಾಲಿನ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ) ವಿಧೇಯಕದ ಮೇಲಿನ ಚರ್ಚೆಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡುತ್ತಿದ್ದರು. ಈ ವೇಳೆ ಸ್ಪೀಕರ್‌ ಅವರು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಬೇಕಿರುವ ಹಿನ್ನೆಲೆಯಲ್ಲಿ ಶೀಘ್ರವೇ ಚರ್ಚೆ ಪೂರ್ಣಗೊಳಿಸುವಂತೆ ಸೂಚಿಸಿದರು. ಹೀಗಾಗಿ ಸಿದ್ದರಾಮಯ್ಯ ಅವರು ಮಾತು ಮೊಟಕುಗೊಳಿಸಿದರು. ಗ್ರಾಮ ಪಂಚಾಯತಿ ವಿಧೇಯಕಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಿದ್ದರಾಮಯ್ಯ ಸೇರಿದಂತೆ ಇತರ ಕಾಂಗ್ರೆಸ್‌ ಸದಸ್ಯರು ಸದನದಿಂದ ಹೊರನಡೆದರು.

ಇಷ್ಟು ತರಾತುರಿ ಏಕೆ? ಭೂಸುಧಾರಣೆ ವಿಧೇಯಕಕ್ಕೆ ಬಿಜೆಪಿಯಲ್ಲೇ ವಿರೋಧ

ಇದೇ ಸಮಯ ಸದುಪಯೋಗಪಡಿಸಿಕೊಂಡ ಕಂದಾಯ ಸಚಿವ ಆರ್‌.ಅಶೋಕ್‌ ಅವರು, ಕರ್ನಾಟಕ ಭೂ ಸುಧಾರಣೆಗಳ (ಎರಡನೇ ತಿದ್ದುಪಡಿ) ಮಸೂದೆಯನ್ನು ಮಂಡಿಸಿದರು. ವಿಷಯ ತಿಳಿಯುತ್ತಿದ್ದಂತೆ ಹೊರಹೋಗಿದ್ದ ಸಿದ್ದರಾಮಯ್ಯ ಅವರು ಪುನಃ ಸದನಕ್ಕೆ ಆಗಮಿಸಿ ವಿಧೇಯಕ ಮಂಡನೆಗೆ ವಿರೋಧ ವ್ಯಕ್ತಪಡಿಸಿದರು.

ಬಿಜೆಪಿ ಶಾಸಕಾಂಗ ಸಭೆ ನಡೆಸಬೇಕೆಂದು ಹೇಳಿದ್ದಕ್ಕೆ ಅನುವು ಮಾಡಿಕೊಟ್ಟು ಸದನದಿಂದ ಹೊರ ಹೋಗಿದ್ದೆವು. ಆದರೆ ಈ ಸಂದರ್ಭದಲ್ಲಿ ವಿಧೇಯಕ ಮಂಡಿಸಿದ್ದು ಸರಿಯಲ್ಲ. ವಿಧೇಯಕದ ಕುರಿತು ಚರ್ಚೆ ನಡೆಯಬೇಕಿದ್ದು, ಸ್ಪೀಕರ್‌ ಅವರು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಒಪ್ಪಿದರು. ಹೀಗಾಗಿ ಶನಿವಾರ ಭೂ ಸುಧಾರಣೆ (ಎರಡನೇ ತಿದ್ದುಪಡಿ) ವಿಧೇಯಕ ಚರ್ಚೆಗೆ ಬರಲಿದೆ.
 

click me!