
ಹುಬ್ಬಳ್ಳಿಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಇಂದು ಸುದ್ದಿಗೋಷ್ಠಿಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ದಸರಾ ಉದ್ಘಾಟನೆ, ಧಾರ್ಮಿಕ ಪರಂಪರೆ, ರಾಜ್ಯ ಸರ್ಕಾರದ ಧೋರಣೆ ಮತ್ತು ಹಿಂದೂಗಳ ವಿರುದ್ಧ ನಡೆಯುತ್ತಿರುವ ರಾಜಕೀಯ ಆರೋಪಗಳನ್ನು ಕುರಿತು ಅವರು ಕಿಡಿಕಾರಿದರು. ಪ್ರತಾಪ್ ಸಿಂಹ ಅವರು ದಸರಾ ಉದ್ಘಾಟನೆಯ ವಿವಾದವನ್ನು ಉಲ್ಲೇಖಿಸಿ, "ಭಾನು ಮುಷ್ತಾಕ್ ಅವರಿಗೆ ಸೀರೆ ಉಟ್ಟು ಕುಂಕುಮ ಧರಿಸಿ ಉದ್ಘಾಟನೆಗೆ ಬನ್ನಿ ಎಂದು ನಾವು ಹೇಳುತ್ತಿಲ್ಲ. ಆದರೆ, ಕನ್ನಡ ತಾಯಿ ಭುವನೇಶ್ವರಿಗೆ ಕುಂಕುಮ ಹಚ್ಚುವುದನ್ನು ವಿರೋಧಿಸುವವರು ದಸರಾ ಉದ್ಘಾಟನೆಗೆ ಹೇಗೆ ಬರುತ್ತಾರೆ?" ಎಂದು ಪ್ರಶ್ನಿಸಿದರು.
ನಾವು ಕಾವೇರಿ ನದಿಯನ್ನು ದೇವಿಯಾಗಿ ಪೂಜಿಸುತ್ತೇವೆ. ಮುಸ್ಲಿಂ ಸಮುದಾಯದವರು ಆ ನೀರು ಕುಡಿಯುವುದನ್ನು ವಿರೋಧಿಸುವುದಿಲ್ಲ. ಆದರೆ ನಮ್ಮ ಧಾರ್ಮಿಕ ಸಂಸ್ಕೃತಿಯನ್ನು ತಾತ್ಸಾರದಿಂದ ನೋಡುವವರು ನಮ್ಮ ಬೆಟ್ಟಕ್ಕೆ ಬಂದು ಕಾರ್ಯಕ್ರಮ ಆರಂಭಿಸುವುದೇ ತಾತ್ಸಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂ ಧರ್ಮದ ಸಹಿಷ್ಣುತೆ, ವೈವಿಧ್ಯತೆಯ ಪರಂಪರೆಯನ್ನು ಸ್ಮರಿಸಿಕೊಂಡ ಪ್ರತಾಪ್ ಸಿಂಹ, "ನಮ್ಮ ಧರ್ಮದಲ್ಲಿ ಸಂಗೀತ, ಸಾಹಿತ್ಯ, ಕಲೆ ಎಲ್ಲವೂ ದೇವರ ರೂಪ. ಆದರೆ ಇಸ್ಲಾಂ ಮತ್ತು ಕ್ರೈಸ್ತ ಧರ್ಮದಲ್ಲಿ ಯುನಿಟಿ ಮತ್ತು ಡೈವರ್ಸಿಟಿ ಇಲ್ಲ ಎಂದು ಹೇಳಿದರು. ನಿಮ್ಮ ಧರ್ಮದಲ್ಲಿ ಮಹಿಳೆಯನ್ನು ಭೋಗದ ವಸ್ತುವಾಗಿ ನೋಡಲಾಗುತ್ತದೆ. ಆದರೆ ನಮ್ಮ ಸಂಸ್ಕೃತಿಯಲ್ಲಿ ಮಹಿಳೆ ದೇವಿಯಾಗಿದ್ದಾರೆ. ಆದ್ದರಿಂದ ಭಾನು ಮುಷ್ತಾಕ್ ಅವರಂತಹವರು ದಸರಾ ಉದ್ಘಾಟನೆಗೆ ಬರುವುದು ನಮ್ಮ ಸಂಸ್ಕೃತಿಯ ಅವಮಾನ ಎಂದು ಅಭಿಪ್ರಾಯಪಟ್ಟರು.
ಪ್ರತಾಪ್ ಸಿಂಹ ಅವರು ರಾಜ್ಯ ಸರ್ಕಾರದ ವಿರುದ್ಧ ಗರಂ ಧ್ವನಿಯಲ್ಲಿ ಮಾತನಾಡಿ, ಇಂದು ಕರ್ನಾಟಕದಲ್ಲಿ ತಾಲಿಬಾನಿ ಸರ್ಕಾರ ಇದೆ. ಕಾಂಗ್ರೆಸ್ ಸರ್ಕಾರವು ಹಿಂದೂ ವಿರೋಧಿ ಧೋರಣೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದರು. ಅವರು ಉದಾಹರಣೆ ನೀಡುತ್ತಾ, ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲೆ ದಾಳಿ ಮಾಡಿದವರ ವಿರುದ್ಧದ ಪ್ರಕರಣವನ್ನು ವಾಪಸ್ ಪಡೆದಿದ್ದಾರೆ. ಹುಬ್ಬಳ್ಳಿಯ ಗಲಭಾ ಪ್ರಕರಣಗಳನ್ನೂ ಹಿಂಪಡೆಯಲಾಗಿದೆ. ಇವು ರಾಜ್ಯದೊಳಗಿನ ದೇಶದ್ರೋಹಿ ಶಕ್ತಿಗಳಿಗೆ ಬೆಂಬಲ ನೀಡುವ ಸಂಕೇತಗಳು ಎಂದು ಆರೋಪಿಸಿದರು.
ಚಾಮುಂಡಿ ಬೆಟ್ಟದ ಕುರಿತ ವಿವಾದಕ್ಕೂ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿ, "ಚಾಮುಂಡಿ ಬೆಟ್ಟ ಹಿಂದೂಗಳದ್ದಲ್ಲ ಎಂಬ ಹೇಳಿಕೆ ಹಿಂದೂ ಭಾವನೆಗೆ ಅವಮಾನ. ಡಿಕೆ ಶಿವಕುಮಾರ್ ಬೆದರಿಸುವ ಶೈಲಿಯಲ್ಲಿ ಮಾತನಾಡಬಹುದು, ಆದರೆ ನಾವು ಹೆದರಲ್ಲ. ನಮ್ಮ ಧಾರ್ಮಿಕ ಸಂಕೇತಗಳ ಗೌರವವನ್ನು ಯಾರೂ ಕಸಿಯಲು ಸಾಧ್ಯವಿಲ್ಲ" ಎಂದು ಸ್ಪಷ್ಟಪಡಿಸಿದರು.
ಹುಬ್ಬಳ್ಳಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ ಅವರ ಭಾಷಣವು ಹಾಜರಿದ್ದ ಜನರಲ್ಲಿ ಉತ್ಸಾಹವನ್ನು ಮೂಡಿಸಿತು. ಅವರು ಕೊನೆಗೆ, "ದೇಶದೊಳಗಿನ ದೇಶದ್ರೋಹಿ ಶಕ್ತಿಗಳ ವಿರುದ್ಧ ಹೋರಾಡಲು ಹಿಂದೂಗಳು ಒಟ್ಟಾಗಿ ಬರಬೇಕು. ನಮ್ಮ ಸಂಸ್ಕೃತಿ, ನಮ್ಮ ನಂಬಿಕೆಗಳನ್ನು ರಕ್ಷಿಸುವುದು ಪ್ರತಿಯೊಬ್ಬರ ಹೊಣೆ" ಎಂದು ಕರೆ ನೀಡಿದರು. ಪ್ರತಾಪ್ ಸಿಂಹ ಅವರು ಸಾರ್ವಜನಿಕ ಗಣೇಶೋತ್ಸವದ ಇತಿಹಾಸವನ್ನು ನೆನಪಿಸಿಕೊಂಡು, "ಬಾಲಗಂಗಾಧರ ತಿಲಕ ಮೊದಲ ಬಾರಿಗೆ ಶಿವಾಜಿ ಜಯಂತಿ ಹಾಗೂ ಸಾರ್ವಜನಿಕ ಗಣೇಶೋತ್ಸವ ಆರಂಭಿಸಿದ್ದರು. ಗಣೇಶನು ಜ್ಞಾನದ ಪ್ರತೀಕ, ಹೋರಾಟಕ್ಕೆ ಸ್ಪೂರ್ತಿ. ಆ ಪರಂಪರೆಯನ್ನು ಮುಂದುವರೆಸುವ ಕಾರ್ಯ ನಮ್ಮ ಹೊಣೆಗಾರಿಕೆ" ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ