
ಕಡೂರು (ಅ.31): ರಾಜ್ಯದಲ್ಲಿ ಹೊಸ ಪಾಲಿಟೆಕ್ನಿಕ್ ಕಾಲೇಜು ತೆರೆಯಲು ಜನಪ್ರತಿನಿಧಿಗಳಿಂದ ಒತ್ತಡ ಇದೆ. ಅವಶ್ಯಕತೆಗೆ ಅನುಗುಣವಾಗಿ ನೀಡಲಾಗುತ್ತದೆ. ಒಂದು ಪಾಲಿಟೆಕ್ನಿಕ್ ತೆರೆಯಲು ಕನಿಷ್ಠ ₹22 ಕೋಟಿ ಬೇಕು ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದರು. ಪಟ್ಟಣದಲ್ಲಿ ನಿರ್ಮಾಣವಾಗಿರುವ ನೂತನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಕಟ್ಟಡವನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ರಾಜ್ಯದಲ್ಲಿ ಈಗಾಗಲೆ 107 ಪಾಲಿಟೆಕ್ನಿಕ್ ಕಾಲೇಜು ಗಳು ಕಾರ್ಯ ನಿರ್ವಹಿಸುತ್ತಿವೆ. ಗರಿಷ್ಠ 16 ಕೋರ್ಸ್ ಗಳು ಸಹ ಇವೆ ಅದರೆ ಕನಿಷ್ಠ ನಾಲ್ಕು ಕೋರ್ಸ್ ಗಳು ಪ್ರತಿಯೊಂದು ಕಾಲೇಜುಗಳಲ್ಲಿ ಇರುವಂತೆ ಮಾನದಂಡ ರೂಪಿಸಲಾಗಿದೆ ಎಂದರು.
ಈ ಕಾಲೇಜಿನಲ್ಲಿರುವ 3 ಕೋರ್ಸ್ ಗಳ ಜೊತೆಗೆ ಇನ್ನು 3 ಕೋರ್ಸ್ ಆರಂಭಿಸಲು ಅದರಲ್ಲೂ ಮೆಕ್ಯಾನಿಕಲ್ ವಿಭಾಗಕ್ಕೆ ಬೇಡಿಕೆ ಹೆಚ್ಚಿದ್ದು ತಾವು ಪರಿಶೀಲಿಸುವುದಾಗಿ ಹೇಳಿದ ಅವರು ಕಾಲೇಜುಗಳಿಗೆ ಕಾಂಪೌಂಡ್ ನಿರ್ಮಿಸಲು ನೀಡುತ್ತಿರುವ ಅನುದಾನವನ್ನು ಕಡೂರಿಗೂ ನೀಡುತ್ತೇನೆ ಎಂಬ ಭರವಸೆ ನೀಡಿದರು. ಪಾಲಿಟೆಕ್ನಿಕ್ ಗಳಿಗೆ ಹಾಸ್ಟೆಲ್ ವ್ಯವಸ್ಥೆ ಇದ್ದು ಅವುಗಳ ನಿರ್ವಹಣೆ ಬಿಸಿಎಂ ಇಲಾಖೆಗೆ ಈಗಾಗಲೇ 128 ಹಾಸ್ಟೆಲ್ಗಳನ್ನು ಹಸ್ತಾಂತರಿಸಲಾಗಿದೆ. ಪ್ರತಿ ವಿದ್ಯಾರ್ಥಿಗೂ ಊಟ ಮತ್ತು ವಸತಿ ಸಿಗಬೇಕು ಹಾಗಾದಲ್ಲಿ ಉತ್ತಮ ಶಿಕ್ಷಣ ಪಡೆಯಲು ಸಾಧ್ಯ ಇದೆ ಎಂದರು.
ಚಿಕ್ಕಮಗಳೂರಿನ ಎಂಜಿನಿಯರ್ ಕಾಲೇಜು ಕಳೆದ 13 ವರ್ಷಗಳ ಹಿಂದೆಯೆ ಮಂಜೂರಾಗಿದ್ದು ನೆನಗುದಿಗೆ ಬಿದ್ದಿದೆ ಯಾಕೆ, ಏನು? ಎಂಬುದನ್ನು ಕೆದಕಲು ಹೋಗಲ್ಲ. ಗುಣ ಮಟ್ಟದ ಶಿಕ್ಷಣ ನಮ್ಮ ಮೊದಲ ಆದ್ಯತೆ. ಕಾಲೇಜು ಎಲ್ಲಿ, ಯಾವ ಸ್ಥಳದಲ್ಲಿ ಮಾಡಬೇಕೆಂಬುದನ್ನು ನಾವು ಮೊದಲು ಅಧ್ಯಯನ ಮಾಡಿ ನಂತರ ಹೊಸ ಕಾಲೇಜು ಗಳಿಗೆ ಅನುಮತಿ ನೀಡುತ್ತೇವೆ. ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವುದು ನಮ್ಮ ಕರ್ತವ್ಯ ಎಂದರು.
ಶಾಸಕ ಕೆ.ಎಸ್.ಆನಂದ್ ಮಾತನಾಡಿ ಕಡೂರು ಪಾಲಿಟೆಕ್ನಿಕ್ ಆರಂಭವಾಗಿ 2 ವರ್ಷ ಗಳಾಗಿದ್ದರೂ ಕಟ್ಟಡ ಉದ್ಘಾಟನೆಯಾಗಿರಲಿಲ್ಲ. ಇದೀಗ ಉತ್ತಮ ಕಟ್ಟಡ, ವರ್ಕಶಾಪ್, ಲ್ಯಾಬ್ಗಳು ಸುಸಜ್ಜಿತವಾಗಿ ಮೂಡಿಬಂದಿದೆ. ಇನ್ನು ಹಲವು ವಿಭಾಗಗಳ ಬೇಡಿಕೆ ಇಟ್ಟಿದ್ದು, ಕಾಂಪೌಂಡ್ ನಿರ್ಮಿಸಲು ಸಹ ಮನವಿ ಮಾಡಿದ್ದೇವೆ. ಈ ಭಾಗದಲ್ಲಿ ಜಿಟಿಟಿಸಿ, ಐಟಿಐ, ಪಾಲಿಟೆಕ್ನಿಕ್ ಕಾಲೇಜುಗಳು ಅಕ್ಕಪಕ್ಕದಲ್ಲಿಯೆ ಇದ್ದು ಇನ್ನು 30 ಎಕರೆ ಖಾಲಿ ಭೂಮಿ ಇದೆ ಸಚಿವರು ಬಿಇ ಕಾಲೇಜು ಮಂಜೂರು ಮಾಡಿಸಿದರೆ ಈ ಭಾಗದಲ್ಲಿ ಒಂದು ಬೃಹತ್ ‘ಟೆಕ್ನಿಕಲ್ ಸೆಂಟರ್’ ಆಗಿ ಬೆಳೆಯಲಿದೆ ಎಂದರು.
ನಮ್ಮ ಮಕ್ಕಳ ಬದಲಾವಣೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬುದನ್ನು ಶಾಸಕರು ಹೇಳಿದರು. ಸಭೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದ ಶಾಸಕ ಎಚ್.ಡಿ.ತಮ್ಮಯ್ಯ,ಭದ್ರಾ ಕಾಡ ನಿಗಮದ ಅಧ್ಯಕ್ಷ ಡಾ.ಅಂಶುಮಂತ್, ಪ್ರಾಂಶುಪಾಲರಾದ ವಿ.ಉಮಾಮಹೇಶ್ವರ್, ತಂಗಲಿ ಗ್ರಾಪಂ ಅಧ್ಯಕ್ಷೆ ಸುಧಾ ಲೇಪಾಕ್ಷಿ, ಕಾಲೇಜುಗೆ ತೆರಳಲು ರಸ್ತೆಗೆ ಭೂಮಿ ದಾನ ನೀಡಿದ ಹರುವನಹಳ್ಳಿ ಬಸಪ್ಪ, ರಾಮಣ್ಣ, ಮೋಹನ್ ಅವರನ್ನು ಸಚಿವರು ಸನ್ಮಾನಿಸಿದರು. ಉಪನ್ಯಾಸಕರು, ಕಾಲೇಜು ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ